ಕುಷ್ಟಗಿ: ಮನೆಯಲ್ಲಿರುವ ತಂದೆ-ತಾಯಿಗಳು ಮಕ್ಕಳಿಗೆ ವಿದ್ಯೆ ಕಲಿಸುವ ಜತೆಗೆ ಸದ್ಗುಣಗಳನ್ನು ಕಲಿಸಬೇಕಿದೆ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.

ತಾಲೂಕಿನ ಕೇಸೂರು ಗ್ರಾಮದಲ್ಲಿ ಲಿಂ. ಚಂದ್ರಶೇಖರ ಶಿವಾಚಾರ್ಯರ 31ನೇ ಪುಣ್ಯಸ್ಮರಣೋತ್ಸವ, ಜಗದ್ಗುರು ರೇಣುಕಾಚಾರ್ಯರ ಜಯಂತಿ ಅಂಗವಾಗಿ ನಡೆದ ಮಹಾತ್ಮರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಎಲ್ಲ ತಂದೆ-ತಾಯಿಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದಾರೆ. ಆದರೆ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬಿತ್ತುವ ಕೆಲಸ ಮಾಡದಿರುವುದು ಬೇಸರದ ಸಂಗತಿ ಎಂದರು.

ಇಂದಿನ ದಿನಗಳಲ್ಲಿ ಮೊಬೈಲ್ ಬಳಕೆ ಪರಿಣಾಮವಾಗಿ ಸಂಸಾರಗಳ ಜತೆಗೆ ಮಕ್ಕಳು, ಯುವಕರು ಹಾಳಾಗುತ್ತಿದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕಡಿಮೆ ವಯಸ್ಸಿನ ಮಕ್ಕಳಿಗೆ ಮೊಬೈಲ್ ನಿಷೇಧ ಮಾಡುವ ಚಿಂತನೆ ನಡೆಸಿರುವುದು ಉತ್ತಮ ಬೆಳವಣಿಗೆ. ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

ಕಾಂಗ್ರೆಸ್‌ ಯುವ ಮುಖಂಡ ಲಾಡ್ಲೇಮಷಾಕ್ ದೋಟಿಹಾಳ ಮಾತನಾಡಿ, ಶರಣರ ಜೀವನದ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.

ಪುರ್ತಗೇರಿ ಹಿರೇಮಠದ ಕೈಲಾಸಲಿಂಗ ಶಿವಾಚಾರ್ಯರು ಮಾತನಾಡಿ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರವಚನಗಳು ದಾರಿದೀಪವಾಗಿವೆ. ನಾವು ಸನ್ಮಾರ್ಗದ ಹಾದಿ ಹಿಡಿದು ಭಕ್ತಿಯ ಮಾರ್ಗದಲ್ಲಿ ಜೀವನ ಸಾಗಿಸಬೇಕು. ಪುರಾಣ ಪ್ರವಚನದಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಜೀವನ ಸಾರ್ಥಕಗೊಳಿಸೋಣ ಎಂದರು.


ಚಂದ್ರಶೇಖರ ದೇವರು, ಸಂಗಮದೇವರು, ಘನಲಿಂಗ ದೇವರು, ಗುರುದೇವರು ಇದ್ದರು.

ಕೈಜೋಡಿಸಿ: ಮಠದಿಂದ ಘಟ ಬೆಳಗಬಾರದು, ಘಟದಿಂದ ಮಠ ಬೆಳಗಬೇಕು. ಚಂದ್ರಶೇಖರ ಶಿವಾಚಾರ್ಯರ ಮಠ ಈ ಭಾಗದ ಶಕ್ತಿಪೀಠವಾಗಿದ್ದು, ಭಕ್ತರು ತನು, ಮನ, ಧನದಿಂದ ಸಹಾಯ - ಸಹಕಾರ ನೀಡಿ, ಮಠದ ಅಭಿವೃದ್ಧಿಗೆ ಕೈಜೋಡಿಸಬೇಕು. ಧರ್ಮ, ಸಂಸ್ಕೃತಿ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.

ಸಹಕಾರ ನೀಡಿ: ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಅವರು ಚಂದ್ರಶೇಖರ ಶಿವಾಚಾರ್ಯರ ಗದ್ದುಗೆಯ ನಿರ್ಮಾಣಕ್ಕೆ ₹5 ಲಕ್ಷ ಅನುದಾನ ನೀಡಿದ ಪರಿಣಾಮವಾಗಿ ಗದ್ದುಗೆ ನಿರ್ಮಾಣವಾಗಿದೆ. ಚಂದ್ರಶೇಖರ ಶಿವಾಚಾರ್ಯರ ಭಕ್ತವೃಂದ, ಜನಪ್ರತಿನಿಧಿಗಳು ಶ್ರೀಗಳ ಮಂಟಪ ನಿರ್ಮಾಣಕ್ಕೆ ಸಹಕಾರ ನೀಡಬೇಕಿದೆ ಎಂದು ಕೇಸೂರು ಚಂದ್ರಶೇಖರ ದೇವರು ಹಿರೇಮಠ ಹೇಳಿದರು.