ಸಾರಾಂಶ
ದಾವಣಗೆರೆ: ಹಳಗನ್ನಡ ನಡುಗನ್ನಡ ಕಾವ್ಯಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ, ''''ತ್ರಿಪದಿ ಭೂಷಣ'''' ಬಿರುದಾಂಕಿತ ಮಳಲ್ಕೆರೆ ಗುರುಮೂರ್ತಿ (86) ಗುರುವಾರ ಮಧ್ಯಾಹ್ನ ನಿಧನರಾದರು. ಅವರಿಗೆ ಮೂವರು ಪುತ್ರಿಯರು, ಅಳಿಯಂದಿರು ಮತ್ತು ಬಂಧುಗಳಿದ್ದಾರೆ. ಅಂತ್ಯಸಂಸ್ಕಾರ ಜೂ.27ರಂದು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ತಾಲೂಕಿನ ಮಳಲ್ಕೆರೆ ಗ್ರಾಮದ ಜಮೀನಿನಲ್ಲಿ ಜರುಗಲಿದೆ. ಗುರುಮೂರ್ತಿ ದಾವಣಗೆರೆ ತಾಲ್ಲೂಕಿನ ಮಳಲ್ಕೆರೆ ಗ್ರಾಮದಲ್ಲಿ ಜನಿಸಿದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಿವೃತ್ತಿ ನಂತರ ನಗರದ ಅನುಭವ ಮಂಟಪ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಪ್ರವೃತ್ತಿಯಲ್ಲಿ ಸಾಹಿತಿ, ಕವಿಯಾಗಿದ್ದ ಗುರುಮೂರ್ತಿ ಅವರು ಚಿಂತನಾ ತ್ರಿಪದಿ, ಗಾದೆಗೊಂದು ಬೋಧೆ, ವಚನಗನ್ನಡಿ, ಸೋಮೇಶ್ವರ ಶತಕ (ವ್ಯಾಖ್ಯಾನ), ತ್ರಿಪದಿಗಳಲ್ಲಿ ಸಿದ್ಧಾಂತ ಶಿಖಾಮಣಿ, ವಿಧಿಯ ಕುದುರೆ ಮುಂತಾದ 20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು. ಆಶುಕವಿಯೂ ಆಗಿದ್ದ ಅವರು ತ್ರಿಪದಿಗಳನ್ನು ರಚಿಸುತ್ತಿದ್ದರು. ''''ಸಿದ್ಧಲಿಂಗ'''' ಅಂಕಿತದಲ್ಲಿ 4 ಸಾವಿರಕ್ಕೂ ಹೆಚ್ಚು ತ್ರಿಪದಿಗಳನ್ನು ಪ್ರಕಟಿಸಿದ್ದರು. ಶಿಕ್ಷಕ ವೃತ್ತಿ ಮತ್ತು ಸಾಹಿತ್ಯ ಕೃಷಿಯಲ್ಲಿ ಜಿಲ್ಲಾಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿದ್ದ ದಾವಣಗೆರೆ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠವನ್ನು ಅಲಂಕರಿಸಿದ್ದರು. ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರಸೋಮೇಶ್ವರ ಸ್ವಾಮಿಗಳು ''''ತ್ರಿಪದಿ ಭೂಷಣ'''' ಬಿರುದು ನೀಡಿ ಗೌರವಿಸಿದ್ದರು. - - - -26ಕೆಡಿವಿಜಿ32: ಮಳಲ್ಕೆರೆ ಗುರುಮೂರ್ತಿ