ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರ
ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಖಾಸಗಿ ಶಾಲೆಗಳ ವ್ಯಾಮೋಹದಿಂದ ಹೊರಬರಬೇಕಿದೆ ಎಂದು ಮರಡಿಹಳ್ಳಿ ಸರ್ಕಾರಿ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಕಂಠೀರವ ಬಾಲ ಸರಸ್ವತಿ ಅಭಿಪ್ರಾಯಪಟ್ಟರು.ತಾಲೂಕಿನ ಮರಡಿಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಮಾರ್ಗದರ್ಶನದಿಂದ ಅತ್ಯುತ್ತಮ ವಿದ್ಯಾರ್ಥಿಗಳನ್ನು ರೂಪಿಸಬಹುದು. ಸಂಸ್ಕಾರಯುತ ಸಜ್ಜನ ವಿದ್ಯಾರ್ಥಿಗಳನ್ನು ತಯಾರು ಮಾಡುವುದು ಸಹ ಇಂದಿನ ಶಿಕ್ಷಕರ ಜವಾಬ್ದಾರಿಯಾಗಿದೆ. ಗುರುವಿನ ಮಹತ್ವ ಅರಿತರೆ ಮಾತ್ರ ಉತ್ತಮ ವಿದ್ಯಾರ್ಥಿಯಾಗಲು ಸಾಧ್ಯ ಎಂದರು.ಅದರಲ್ಲೂ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದರ ಮೂಲಕ ಪೋಷಕರು ಸಹ ಸರ್ಕಾರಿ ಶಾಲೆಗಳ ಉಳಿವಿಗೆ, ಉನ್ನತಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವಣ್ಣರೆಡ್ಡಿ ಮಾತನಾಡಿ, ಬದುಕಿನ ತಿರುವುಗಳಿಗೆ ಸಿಕ್ಕು ಚದುರಿ ಹೋಗುವ ಶಾಲಾ ಸಹಪಾಠಿಗಳು, ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಸಂಘ ನಿರ್ಮಿಸಿಕೊಂಡು ತಾವು ಓದಿದ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಸಂಗತಿ ಎಂದರು.ಶಾಲೆಯ ಹಳೆಯ ವಿದ್ಯಾರ್ಥಿ ಎನ್. ಆರ್ ಲಕ್ಷ್ಮೀಕಾಂತ್ ಮಾತನಾಡಿ, ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣದ ಫಲವಾಗಿ ನಾವೀಗ ಸಮಾಜದಲ್ಲಿ ಒಂದು ಹಂತ ತಲುಪಿದ್ದೇವೆ. ಶಿಕ್ಷಣಕ್ಕೆ ಅಂತಹ ಶಕ್ತಿಯಿದ್ದು ಪೋಷಕರು ಯಾರೂ ಕೂಡ ಶಿಕ್ಷಣದಿಂದ ಮಕ್ಕಳನ್ನು ವಂಚಿತರನ್ನಾಗಿ ಮಾಡಬೇಡಿ ಎಂದು ಮನವಿ ಮಾಡಿದರು.
ಇದೇ ವೇಳೆ ಶಿಕ್ಷಕರನ್ನು ಸನ್ಮಾನಿಸಲಾಯಿತು. ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಸದಸ್ಯ ಕೆ.ಟಿ ಶ್ರೀಧರ್ ಐದು ಸಾವಿರ ಬೆಲೆಯ ಪುಸ್ತಕಗಳನ್ನು ಮತ್ತು ತುಮಕೂರಿನ ಸಿದ್ದಗಂಗಾ ಮಹಿಳಾ ಪಿಯು ಕಾಲೇಜಿನ ಉಪನ್ಯಾಸಕ ಎಂ. ಬಾಲಚಂದ್ರ ನೂರು ಪುಸ್ತಕಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು.ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಪಿ.ಕೆ ಪ್ರಕಾಶ್, ಉಪ ಪ್ರಾoಶುಪಾಲ ರುದ್ರಪ್ಪ, ಎಲ್. ರಮೇಶ್, ಪಿಜಿ. ರಮೇಶ್, ಮುಖ್ಯ ಶಿಕ್ಷಕಿ ಸರೋಜಮ್ಮ, ಎಂ. ರಮೇಶ್, ಸಹ ಶಿಕ್ಷಕಿ ರಾಧಮ್ಮ, ಪಿ.ಎನ್ ಕೃಷ್ಣ, ದಿಲೀಪ್ ಕುಮಾರ್, ಗೋವಿಂದ ಸ್ವಾಮಿ, ವಿಶ್ವನಾಥ್, ರವಿ, ಸುದರ್ಶನ್ ಮುಂತಾದವರು ಹಾಜರಿದ್ದರು.