ಶಿಕ್ಷಕರು ದೇಶದ ಉಜ್ವಲ ಭವಿಷ್ಯದ ನಿರ್ಮಾತೃ

| Published : Jun 09 2024, 01:37 AM IST

ಸಾರಾಂಶ

ಲೂಸಿ ಸಾಲ್ಡಾನ ಅವರದು ಸಾರ್ಥಕ ಬದುಕು. ತ್ಯಾಗಮಯಿಯಾದ ಅವರು ಜನಮಾನಸದಲ್ಲಿ ಉಳಿಯುವ ವ್ಯಕ್ತಿ. ಅವರು ತಮ್ಮ ಜೀವನದಲ್ಲಿ ಎದುರಾದ ಅನೇಕ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಸಾಧನೆಯ ಶಿಖರ ಏರಿದರು.

ಧಾರವಾಡ:

ಶಿಕ್ಷಕರು ದೇಶದ ಉಜ್ವಲ ಭವಿಷ್ಯದ ನಿರ್ಮಾತೃಗಳು ಎಂದು ರಾಜ್ಯ ಮಹಿಳಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಶೈಲಜಾ ವಿ. ಗೌಡ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಅಕ್ಷರತಾಯಿ ಲೂಸಿ ಕೆ. ಸಾಲ್ಡಾನ ದತ್ತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿದ ಅವರು, ಲೂಸಿ ಸಾಲ್ಡಾನ ಅವರದು ಸಾರ್ಥಕ ಬದುಕು. ತ್ಯಾಗಮಯಿಯಾದ ಅವರು ಜನಮಾನಸದಲ್ಲಿ ಉಳಿಯುವ ವ್ಯಕ್ತಿ. ಅವರು ತಮ್ಮ ಜೀವನದಲ್ಲಿ ಎದುರಾದ ಅನೇಕ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಸಾಧನೆಯ ಶಿಖರ ಏರಿದರು. ವಿದ್ಯಾರ್ಥಿಗಳನ್ನೇ ತನ್ನ ಮಕ್ಕಳೆಂದು ತಿಳಿದು ಶಿಕ್ಷಕ ವೃತ್ತಿಯ ಪಾವಿತ್ರ್ಯತೆ ಹೆಚ್ಚಿಸಿದವರು. ಅವರಲ್ಲಿರುವ ಸಾಮಾಜಿಕ ಕಳಕಳಿ ಅನನ್ಯವಾದದ್ದು ಎಂದರು.

ಸಾಧನಾ ತರಬೇತಿ ಕೇಂದ್ರ ಮುಖ್ಯಸ್ಥರಾದ ಡಾ. ಕೆ.ಸಿ. ಜ್ಯೋತಿ, ವೈ.ಬಿ. ಕಡಕೋಳ ಸಂಪಾದಿಸಿದ ಲೂಸಿ ಸಾಲ್ಡಾನ ಅವರು ಸಂಗ್ರಹಿಸಿದ ನುಡಿಮುತ್ತಗಳ `ಭಾವಬಿಂದು’ ಪುಸ್ತಕ ಹಾಗೂ ಶಿಕ್ಷಕಿ ಶಾಹೀನ್‌ಬಾನು ಬಳ್ಳಾರಿ ಅವರ `ಚಿಗುರೆಲೆ ಸಂಭ್ರಮ’ ಕವನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿ, ಎರಡೂ ಕೃತಿಗಳು ಓದುಗರಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುತ್ತವೆ. ಈ ಕೃತಿಗಳಲ್ಲಿ ಜೀವನಾನುಭವದ ಸಾರವಿದೆ ಎಂದು ಹೇಳಿದರು.

ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ `ಶ್ರಮಜೀವಿ’ ಹಾಗೂ `ಶಿಕ್ಷಕರತ್ನ’ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಗುರುಕುಮಾರ ವಿರುಪಾಕ್ಷ ಸ್ವಾಮೀಜಿ ಆಶೀರ್ವಚನ ನೀಡಿದರು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿ ಲೂಸಿ ಸಾಲ್ಡಾನಾ, ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಭೀಮಪ್ಪ ಕಾಸಾಯಿ, ಅನುಷಾ ಹಿರೇಮಠ ಇದ್ದರು. ಎಲ್‌.ಐ. ಲಕ್ಕಮ್ಮನವರ ಸ್ವಾಗತಿಸಿದರು. ವೈ.ಬಿ. ಕಡಕೋಳ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು, ವೀಣಾ ಹೊಸಮನಿ ವಂದಿಸಿದರು. ಕೃಷ್ಣಮೂರ್ತಿ ಕಟ್ಟಿಮನಿ ಪ್ರಾರ್ಥಿಸಿದರು. ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ, ಸದಸ್ಯರಾದ ವಿಶ್ವೇಶ್ವರಿ ಹಿರೇಮಠ, ಧನವಂತ ಹಾಜವಗೋಳ ಮತ್ತು ಮಲ್ಲಿಕಾರ್ಜುನ ಉಪ್ಪಿನ ಇದ್ದರು.