ಐಎಎಸ್‌ ತರಬೇತಿ ಸಂಸ್ಥೆ ಸಾಧನೆಗೆ ಶಿಕ್ಷಕರ ಪ್ರೋತ್ಸಾಹ ಕಾರಣ: ಇನ್ ಸೈಟ್ಸ್‌ನ ಜಿ.ಬಿ.ವಿನಯ್ ಕುಮಾರ್

| Published : May 03 2025, 12:17 AM IST

ಐಎಎಸ್‌ ತರಬೇತಿ ಸಂಸ್ಥೆ ಸಾಧನೆಗೆ ಶಿಕ್ಷಕರ ಪ್ರೋತ್ಸಾಹ ಕಾರಣ: ಇನ್ ಸೈಟ್ಸ್‌ನ ಜಿ.ಬಿ.ವಿನಯ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಸಣ್ಣ ಸಾಧನೆ ಮಾಡಲು ಕಾರಣಕರ್ತರಾಗಿದ್ದು ನನ್ನೂರು ಕಕ್ಕರಗೊಳ್ಳ ಗ್ರಾಮದ ಜನರು, ಶಿಕ್ಷಕರು, ಕುಟುಂಬದವರು ನೀಡಿದ ಪ್ರೋತ್ಸಾಹ, ಸಹಕಾರವೇ ಕಾರಣ ಎಂದು ಇನ್ ಸೈಟ್ಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯ್ ಕುಮಾರ್ ಹೇಳಿದರು.

ಬಸವ ಜಯಂತಿ ಊರಮ್ಮನ ದೇಗುಲ ಉದ್ಘಾಟನೆ । ಗೋಪುರ ಕಳಸಾರೋಹಣ

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಳೆದ ಒಂದು ದಶಕದಲ್ಲಿ ದೇಶಕ್ಕೆ 1500 ಐಎಎಸ್ ಅಧಿಕಾರಿಗಳನ್ನು ನೀಡಿದ ಹೆಗ್ಗಳಿಕೆ ಇನ್ ಸೈಟ್ಸ್ ಐಎಎಸ್ ಕೋಚಿಂಗ್ ಸಂಸ್ಥೆಯದ್ದು. ಈ ಸಣ್ಣ ಸಾಧನೆ ಮಾಡಲು ಕಾರಣಕರ್ತರಾಗಿದ್ದು ನನ್ನೂರು ಕಕ್ಕರಗೊಳ್ಳ ಗ್ರಾಮದ ಜನರು, ಶಿಕ್ಷಕರು, ಕುಟುಂಬದವರು ನೀಡಿದ ಪ್ರೋತ್ಸಾಹ, ಸಹಕಾರವೇ ಕಾರಣ ಎಂದು ಇನ್ ಸೈಟ್ಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯ್ ಕುಮಾರ್ ಹೇಳಿದರು.

ದಾವಣಗೆರೆ ತಾಲೂಕಿನ ಕಕ್ಕರಗೊಳ್ಳದಲ್ಲಿ ಗುರುವಾರ ನಡೆದ ಗ್ರಾಮದೇವತೆ ಊರಮ್ಮ ದೇವಿ ದೇವಸ್ಥಾನದ ಉದ್ಘಾಟನೆ, ಆಂಜನೇಯಸ್ವಾಮಿ, ಶ್ರೀ ಅರಕೇರಮ್ಮ ದೇವಸ್ಥಾನದ ಗೋಪುರ ಕಳಸಾರೋಹಣ, ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಶ್ರೀ ಬಸವೇಶ್ವರರ ಜಯಂತಿ ಹಾಗೂ ಸರ್ವ ಶರಣ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.

ಇಂದು ನಾನು ಏನೇ ಆಗಿದ್ದರೂ ಊರು ಮರೆಯಲು ಸಾಧ್ಯವಿಲ್ಲ. ಕೇವಲ ಗಾಳಿ, ನೀರು ಮಾತ್ರವಲ್ಲ, ನಾವು ಕಷ್ಟದಲ್ಲಿದ್ದಾಗ ಅನೇಕರು ಸಹಾಯ ಮಾಡಿದ್ದಾರೆ. ಅವರೆಲ್ಲರನ್ನೂ ನೆನಪು ಮಾಡಿಕೊಳ್ಳಲೇಬೇಕು. ಊರಿನ ಶಾಲೆ, ಶಿಕ್ಷಕರು, ಜನರ ಸಹಕಾರದಿಂದ ಈ ಸಣ್ಣ ಸಾಧನೆ ಮಾಡಲು ಸಾಧ್ಯವಾಗಿದೆ. ಕಕ್ಕರಗೊಳ್ಳದ ಅಭಿವೃದ್ಧಿಗೆ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ ಕೈಯಲ್ಲಾದಷ್ಟು ಸಹಾಯ ಮಾಡುತ್ತೇನೆ ಎಂದು ತಿಳಿಸಿದರು.

ಕಕ್ಕರಗೊಳ್ಳ ಗ್ರಾಮದ ಎಲ್ಲಾ ಮಕ್ಕಳಿಗೂ ಒಳ್ಳೆಯ ಶಿಕ್ಷಣ. ವ್ಯವಸ್ಥೆ ಸಿಗುವಂತಾಗಬೇಕು. ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಾಗಬೇಕು. ಶಾಲೆಗಳಲ್ಲಿ ಮತ್ತಷ್ಟು ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ದೊರೆತರೆ ಪ್ರತಿಯೊಬ್ಬರೂ ಅತ್ಯುನ್ನತ ಹುದ್ದೆಗೆ ಹೋಗಲು ಸಾಧ್ಯವಾಗುತ್ತದೆ. ಪೋಷಕರು ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.

ನಮ್ಮೂರಿನಲ್ಲಿ ಸುಂದರವಾದ ದೇವಸ್ಥಾನ ನಿರ್ಮಾಣವಾಗಿರುವುದು ಖುಷಿಯ ವಿಚಾರ. ನಮ್ಮೂರಿಗೆ ಕೊಡುಗೆ ನೀಡಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ಯಾವ ರೀತಿ ನೀಡಬೇಕೆಂಬ ಗೊಂದಲವೂ ಇತ್ತು. ದೇವಸ್ಥಾನದ ಅಭಿವೃದ್ಧಿಗೆ ಕಕ್ಕರಗೊಳ್ಳ ಗ್ರಾಮಸ್ಥರು ಕೇಳಿದಾಗ ನನ್ನ ಕೈಯಲ್ಲಾದಷ್ಟು ಸಹಾಯ ಮಾಡಿದ್ದು ತೃಪ್ತಿ ತಂದಿದೆ. ನಮ್ಮೂರಿನಿಂದ ಸಿಕ್ಕಂಥ ಶಿಕ್ಷಣ ಎಂದಿಗೂ ಮರೆಯಲಾಗದು. ತಂದೆ ಮತ್ತು ಮಾವ ಪುಸ್ತಕ ಖರೀದಿಸಿ ತರುತ್ತಿದ್ದರು. ಈ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಿದ್ದರಿಂದ ಜ್ಞಾನವು ಸಿಕ್ಕಿತು. ಈ ಜ್ಞಾನವೇ ವನ ರೂಪಿಸಿಕೊಳ್ಳಲು ಮಾರ್ಗ ತೋರಿಸಿತು ಎಂದು ನೆನಪು ಮಾಡಿಕೊಂಡರು.

ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಹೊಸದುರ್ಗ ಕನಕಗುರುಪೀಠ ಕಾಗಿನೆಲೆ ಮಹಾಸಂಸ್ಥಾನ ಮಠದ ಈಶ್ವರಾನಂದಪುರಿ ಸ್ವಾಮೀಜಿ, ಡಾ.ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಸಿದ್ದಪ್ಪ, ವಿಶ್ರಾಂತ ಪ್ರಾಚಾರ್ಯ ಎನ್.ಲೋಕೇಶ್ ಒಡೆಯರ್, ಗ್ರಾಮದ ಹಿರಿಯ ಮುಖಂಡರಾದ ಬಸವನಗೌಡ್ರು ಸೇರಿದಂತೆ ಗಣ್ಯರು, ಗ್ರಾಮದ ಮುಖಂಡರು ಹಾಜರಿದ್ದರು.