ಬದುಕಿಗೆ ದಾರಿ ತೋರುವ ಗುರುಗಳು ಅಭಿನಂದನೆಗೆ ಅರ್ಹರು: ಮುನಿರಾಜು

| Published : Sep 08 2025, 01:00 AM IST

ಸಾರಾಂಶ

ಕಾರ್ಯಕ್ರಮದಲ್ಲಿ ತರಬೇತಿ ನಿರತ ವಿದ್ಯಾರ್ಥಿಗಳು ಗುರುಗಳಿಗೆ, ಪ್ರಾಂಶುಪಾಲರಿಗೆ, ತರಬೇತಿ ನೀಡುವ ಶಿಕ್ಷಕರಿಗೆ ಹೂಗುಚ್ಚ ನೀಡಿ, ಕೇಕ್ ಕತ್ತರಿಸಿ ಸಿಹಿ ತಿನ್ನಿಸುವ ಮೂಲಕ ವಿಶಿಷ್ಟವಾಗಿ ಶುಭಾಶಯ ಕೋರಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಹುಸಿ ಆದರ್ಶಗಳ ಬೆನ್ನೇರಿ ವಿದ್ಯಾರ್ಥಿಗಳ ಬದುಕು ಬರಡಾಗಿಸುವುದಕ್ಕಿಂತ, ಸಮ ಸಮಾಜದ ಆಶಯಗಳನ್ನು ಅವರ ಎದೆಯಲ್ಲಿ ಬಿತ್ತುತ್ತಾ, ವರ್ತಮಾನದ ಕಹಿಸತ್ಯಗಳಿಗೆ ಮುಖಾಮುಖಿಯಾಗಿಸುವ ಮೂಲಕ ಅವರ ಬಾಳಿಗೆ ಬೆಳಕಾಗುವ ಶಿಕ್ಷಕರು ಸಮಾಜದಿಂದ ಸದಾ ಅಭಿನಂದನೆಗೆ ಅರ್ಹರಾಗಿರುತ್ತಾರೆ ಎಂದು ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಅರಿಕೆರೆ ಎಂ. ಮುನಿರಾಜು ತಿಳಿಸಿದರು.

ನಗರದ ಮಹಾಕಾಳಿ ರಸ್ತೆಯಲ್ಲಿರುವ ಎಲ್.ಇ.ಎಫ್ ಬ್ಯಾಂಕಿಂಗ್ ಕೋಚಿಂಗ್ ಸೆಂಟರ್‌ನಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಗೆ ಚಾಲನೆ ನೀಡಿ, ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಉತ್ತಮ ಶಿಕ್ಷಕರು ಯುವ ಸಮೂಹದ ಮೂಲಕ ಆರೋಗ್ಯವಂತ ಸಮಾಜ ಕಟ್ಟಲು ಅಡಿಪಾಯ ಹಾಕುತ್ತಾರೆ. ಬೋಧನೆಗಿಂತ ಬದುಕು ಕಟ್ಟಲು ಮುಂದಾಗುತ್ತಾರೆ. ಹೀಗಾಗಿ ಇಂತಹ ಶಿಕ್ಷಕರನ್ನು ವಿದ್ಯಾರ್ಥಿಗಳು ಸದಾ ಗೌರವಿಸುತ್ತಾರೆ. ಶಿಕ್ಷಕರ ದಿನವನ್ನು ಯಾಂತ್ರಿಕವಾಗಿ ಆಚರಿಸುವುದಕ್ಕಿಂತ ಅರ್ಥ ಪೂರ್ಣವಾಗಿ ಆಚರಿಸಿದರೆ ಮಾತ್ರ ಕಾರ್ಯಕ್ರಮಕ್ಕೆ ಬೆಲೆ ಬರಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ವಿ.ಜಿ. ಸತ್ಯನಾರಾಯಣ ಮಾತನಾಡಿ, ಶಿಕ್ಷಣವು ಕೇವಲ ಅಂಕಪಟ್ಟಿಗೆ ಸೀಮಿತವಾಗಿರದೆ ಉದ್ಯೋಗ ನೀಡುವ ಮೂಲಕ ದೇಶ ಕಟ್ಟುವ ಕಾಯಕ ಮಾಡಬೇಕು. ಇಂತಹ ಕೆಲಸವನ್ನು ಸಮರ್ಥವಾಗಿ ಮಾಡುತ್ತಿರುವ ಎಲ್‌ಇಎಫ್ ಸಂಸ್ಥೆ ಅಭಿನಂದನಾರ್ಹವಾಗಿದೆ. ತರಬೇತಿ ನಿರತ ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಏರ್ಪಡಿಸಿರುವ ಕಾರ್ಯಕ್ರಮವು ಸದಾ ಸ್ಮರಣೀಯವಾಗಿರಲಿದೆ ಎಂದರು.

ಕಾರ್ಯಕ್ರಮದಲ್ಲಿ ತರಬೇತಿ ನಿರತ ವಿದ್ಯಾರ್ಥಿಗಳು ಗುರುಗಳಿಗೆ, ಪ್ರಾಂಶುಪಾಲರಿಗೆ, ತರಬೇತಿ ನೀಡುವ ಶಿಕ್ಷಕರಿಗೆ ಹೂಗುಚ್ಚ ನೀಡಿ, ಕೇಕ್ ಕತ್ತರಿಸಿ ಸಿಹಿ ತಿನ್ನಿಸುವ ಮೂಲಕ ವಿಶಿಷ್ಟವಾಗಿ ಶುಭಾಶಯ ಕೋರಿದರು.

ತರಬೇತುದಾರರಾದ ಶಿವಕುಮಾರ್, ರಾಘವೇಂದ್ರ, ಸುರೇಖಾ, ಸಂಗೀತ, ತರಬೇತಿ ನಿರತ ವಿದ್ಯಾರ್ಥಿಗಳು ಇದ್ದರು.