ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ವೃತ್ತಿಯಾಗಿದ್ದು ಹಿಂದೂ ಪರಂಪರೆಯಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನಮಾನ ನೀಡಲಾಗಿದೆ ಎಂದು ನಿವೃತ್ತ ಶಿಕ್ಷಕರಾದ ಆರ್. ರುದ್ರಪ್ಪ ತಿಳಿಸಿದರು.ತಾಲೂಕಿನ ಹಾಲ್ಕುರಿಕೆಯ ಹೆಚ್.ಸಿ.ಎಂ.ಜಿ ಪದವಿ ಪೂರ್ವ ಕಾಲೇಜು 1999-2000ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ತರಳ ಬಾಳು ಇಂಟರ್ ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಕೇವಲ ಅಕ್ಷರ ಕಲಿಸುವ ಕೆಲಸಕ್ಕೆ ಸೀಮಿತವಾಗಿರದೆ ಸಮಾಜಕ್ಕೆ ಉತ್ತಮ ಮಕ್ಕಳನ್ನು ಕೊಡುಗೆ ನೀಡುವ ಗುರುತರ ಜವಾಬ್ದಾರಿಯೂ ನಿಮ್ಮ ಮೇಲಿದೆ. ಅಮೂರ್ತವಾದ ಮಕ್ಕಳನ್ನ ತಿದ್ದಿ ಮೂರ್ತ ರೂಪಕ್ಕೆ ತಂದಾಗ ಉತ್ತಮ ಜೀವನ ಮಾರ್ಗದಲ್ಲಿ ನಡೆಯುತ್ತಾರೆ. ಶಿಕ್ಷಕರ ಶ್ರಮ, ಸಹನೆ, ಸಮರ್ಪಣಾ ಭಾವನೆ ಶಿಕ್ಷಕರ ಆತ್ಮೋನ್ನತಿಗೆ ಕಾರಣವಾಗುವ ಜೊತೆಗೆ ಶಿಷ್ಯರ ಜೀವನಕ್ಕೆ ದಾರಿಯಾಗುತ್ತದೆ. ವೃತ್ತಿ ಜೀವನದ ಸಾರ್ಥಕ ಕ್ಷಣಗಳಿಗೆ ಗೌರವಾರ್ಧವಾಗಿ ನಮ್ಮ ಶಿಷ್ಯರಿಂದ ಗುರುವಂದನೆ ಸ್ವೀಕರಿಸುತ್ತಿರುವುದು ಖುಷಿಯ ಜೊತೆಗೆ ಧನ್ಯತಾ ಭಾವ ಉಂಟುಮಾಡಿದೆ. ನಮ್ಮ ಶಿಷ್ಯರಾದ ನೀವು ಕಲಿತ ವಿದ್ಯೆ ನಿಮ್ಮ ಜೀವನವನ್ನ ಸಮಾಜಮುಖಿಯಾಗಿ, ಸಾರ್ಥಕ ಜೀವನಕ್ಕೆ ದಾರಿ ದೀಪವಾಗಲಿ ಎಂದು ತಿಳಿಸಿದರು. ಗುರುವಂದನೆ ಸ್ವೀಕರಿಸಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕಿ ಉಷಾಕುಮಾರಿ ಮಾತನಾಡಿ ವಿದ್ಯಾರ್ಥಿಗಳಿಗೆ ನಾವು ತೋರುವ ಪ್ರೀತಿ ವಿಶ್ವಾಸಗಳು, ವಿದ್ಯಾರ್ಥಿಗಳು ಜ್ಞಾನ ಸಂಪಾದನೆಗೆ ಹೆಚ್ಚು ಸಧೃಡಗೊಳಿಸುವ ಜೊತೆಗೆ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಮೂಡಿಸಲು ಕಾರಣವಾಗುತ್ತದೆ. ನಾವು ಕಲಿಸಿದ ಮಕ್ಕಳು ನಮ್ಮ ಕಣ್ಮುಂದೆಯೇ ಉತ್ತಮ ಸಾಧನೆ ಮಾಡಿದಾಗ ಶಿಕ್ಷಕರಿಗೆ ಅತ್ಯಂತ ಸಂತೋಷ ಉಂಟು ಮಾಡುತ್ತದೆ. ನಮ್ಮ ಶಿಷ್ಯರಿಂದ ಗುರುವಂದನೆ ಸ್ವೀಕರಿಸುತ್ತಿರುವುದು ಅತ್ಯಂತ ಖುಷಿ ಹಾಗೂ ಅವಿಸ್ಮರಣೀಯ ಕ್ಷಣ ಎಂದರು. ನಿವೃತ್ತ ಶಿಕ್ಷಕರಾದ ಜಿ. ಬಸವರಾಜಪ್ಪ ಮಾತನಾಡಿ ಗುರುಶಿಷ್ಯರ ಪವಿತ್ರ ಬಂಧನ ಬೆಲೆ ಕಟ್ಟಲಾಗದ ಸಂಬಂಧವಾಗಿದ್ದು, ನಮ್ಮ ಶಿಷ್ಯರು ೨೫ವರ್ಷಗಳ ನಂತರ ಎಲ್ಲರೂ ಜೊತೆಗೂಡಿರುವುದು ಹಾಗೂ ನಿವೃತ್ತಿಯಾಗಿದ ಎಲ್ಲಾ ಗುರುಗಳ ಮೇಲೆ ಪ್ರೀತಿ ಇಟ್ಟು ಕರೆದಿರುವುದು ತುಂಬಾ ಖುಷಿ ಉಂಟು ಮಾಡಿದೆ ಎಂದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಕೆ.ಜಿ ಸೋಮಶೇಖರಯ್ಯ, ಆರ್. ರುದ್ರಪ್ಪ, ವತ್ಸಲಾ, ಅನಸೂಯ, ಗಂಗೂಬಾಯಿ, ಚಂದ್ರಕಲಾ, ಭಾನುಮತಿ, ನಾಗಮಣಿ, ಇಂದಿರಾ, ಶ್ರೀಕಾಂತ್, ವೀರಭದ್ರಪ್ಪ, ಧನಂಜಯ್ಯ, ವಿಶ್ವನಾಥಯ್ಯ, ಆನಂದ್, ಗಂಗಣ್ಣರವರಿಗೆ ಗುರುನಮನ ಸಲ್ಲಿಸಲಾಯಿತು.