ದೇಶದ ಮತ್ತು ಜಗತ್ತಿನ ಭವಿಷ್ಯದ ಸೃಷ್ಟಿಕರ್ತರು ನಾವಾಗಬೇಕು. ದೇಶದ ಉದ್ಯಮಗಳು ಲಾಭದಾಯಕವಾಗಲು ಹೊಸ ತಂತ್ರಜ್ಞಾನದ ಅವಶ್ಯಕತೆಯಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಧಾರವಾಡ:ಇಲ್ಲಿಯ ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೂರು ದಿನಗಳ ರಾಜ್ಯಮಟ್ಟದ ನಾವೀನ್ಯತಾ ವಿನಿಮಯ ಕಾರ್ಯಕ್ರಮ ಸೃಷ್ಟಿ ಸಮಾರೋಪ ಜರುಗಿತು.
ಕೇಂದ್ರದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಈ ವೇದಿಕೆಯು ಆತ್ಮನರ್ಭರ ಮತ್ತು ವಿಕಸಿತ ಭಾರತದ ರಾಷ್ಟ್ರೀಯ ದೃಷ್ಟಿಕೋನಕ್ಕೆ ಪೂರಕವಾಗಿದೆ. ದೇಶದ ಮತ್ತು ಜಗತ್ತಿನ ಭವಿಷ್ಯದ ಸೃಷ್ಟಿಕರ್ತರು ನಾವಾಗಬೇಕು. ದೇಶದ ಉದ್ಯಮಗಳು ಲಾಭದಾಯಕವಾಗಲು ಹೊಸ ತಂತ್ರಜ್ಞಾನದ ಅವಶ್ಯಕತೆಯಿದೆ. ಅವುಗಳನ್ನು ದೇಶದಲ್ಲೇ ತಯಾರಿಸುವ ದೊಡ್ಡ ಜವಾಬ್ದಾರಿ ಇದೆ. ದೇಶದ ಭವಿಷ್ಯ ಮತ್ತು ಭದ್ರತೆ ಹೆಚ್ಚಿಸುವ ನಾವೀನ್ಯತೆ ಬೆಂಬಲಿಸಲು ಸರ್ಕಾರ ಬದ್ಧವಾಗಿದೆ ಮತ್ತು ಇದರ ಸದುಪಯೋಗವನ್ನು ಯುವಸಮೂಹ ಪಡೆದುಕೊಳ್ಳಬೇಕು ಎಂದರು.ಧಾರವಾಡ ಐಐಐಟಿ ನಿರ್ದೇಶಕ ಡಾ. ಮಹಾದೇವ ಪ್ರಸನ್ನ, ವಿದ್ಯಾರ್ಥಿಗಳು ಸವಾಲು ಎದುರಿಸಲು ಸಿದ್ಧರಾದಾಗ ಹೊಸತನ್ನು ಸೃಷ್ಟಿಸಬಹುದು. ಸೃಷ್ಟಿಯಲ್ಲಿ ಪ್ರದರ್ಶಿಸಲಾದ ಪ್ರಾಜೆಕ್ಟ್ಗಳಲ್ಲಿ ಪ್ರಾಡಕ್ಟ್ಗಳಾಗುವ ಎಲ್ಲ ಸಾಧ್ಯತೆಗಳಿವೆ. ವಿದ್ಯಾರ್ಥಿಗಳು ಆ ದಿಸೆಯಲ್ಲಿ ಕಾರ್ಯೋನ್ಮುಖವಾಗಲು ತಿಳಿಸಿದರು.
ಎಬಿವಿಪಿಯ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಬಾಲಕೃಷ್ಣ ಮಾತನಾಡಿದರು. ಜೀವಂಧರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕಾಲೇಜುಗಳಿಂದ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕೆಎಲ್ಇ ತಾಂತ್ರಿಕ ವಿವಿ ಸಮಗ್ರ ಚಾಂಪಿಯನ್ ಶಿಪ್ ಪಡೆಯಿತು. ಎಸ್ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ ಚಕ್ರಸಾಲಿ, ಡಾ. ಬಸವರಾಜ ಕುಬಗಡ್ಡಿ, ವಿಜಯಲಕ್ಷ್ಮಿ ಮಾನೆ, ಪ್ರೊ. ಇಂದಿರಾ ಇದ್ದರು.