ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಪ್ರತಿಯೊಂದು ಊರು ಮತ್ತು ಗ್ರಾಮಗಳಲ್ಲಿರುವ ದೇವಸ್ಥಾನಗಳು ಹೆಚ್ಚೆಚ್ಚು ಬೆಳೆಯುತ್ತಿರಬೇಕು. ಅಂದಾಗ ಮಾತ್ರ ನಮ್ಮ ಭಾರತೀಯ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಪುರಸಭೆ ಸದಸ್ಯ ಶೇಖರ ಅಂಗಡಿ ಹೇಳಿದರು.ಸ್ಥಳೀಯ ಕೆಂಗೇರಿಮಡ್ಡಿಯ ವಾರ್ಡ್ ನಂ.೧೩ರ ದುರ್ಗಮುರಿಗೇವ್ವ ದೇವಸ್ಥಾನದಲ್ಲಿ ಪುರಸಭೆ ೧೫ನೇ ಹಣಕಾಸು ಅನುದಾನದಲ್ಲಿ ಅಂದಾಜು ₹೩ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಕಾಂಪೌಂಡ್ ಗೋಡೆ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿ, ದೇವಸ್ಥಾನಗಳಲ್ಲಿ ದೇವರ ನಾಮಸ್ಮರಣೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸೌಹಾರ್ಧತೆ ಬೆಳೆಯುತ್ತದೆ. ಅಲ್ಲದೆ ಇಂದಿನ ಯುವಕರು ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಮನಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಇದೆಲ್ಲ ನಿಲ್ಲಬೇಕಾದರೆ ದೇವಸ್ಥಾನಗಳು ಅಭಿವೃದ್ದಿ ಹೊಂದಬೇಕು. ದೇವಸ್ಥಾನಗಳಿಗೆ ಜನರು ಬರುವುದರಿಂದ ಭಕ್ತಿ ಭಾವ ಬೆಳೆಯುತ್ತದೆ. ದೇವರಲ್ಲಿರುವ ನಂಬಿಕೆ ಹೆಚ್ಚಾದಾಗ ಮಾತ್ರ ನಮ್ಮ ಹಬ್ಬ-ಹರಿದಿನಗಳು, ಸಂಪ್ರದಾಯ ಉಳಿಯಲು ಸಾಧ್ಯ. ಸರ್ಕಾರ ಜನರ ಒಳಿತಿಗಾಗಿ ಮಾಡಿರುವ ಇಂಥ ಯೋಜನೆಗಳ ಲಾಭವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಪೂಜಾರಿ ನಾಗಪ್ಪ ಕೋಳಿ ಮಾತನಾಡಿ, ಈ ದೇವಸ್ಥಾನಕ್ಕೆ ನಿತ್ಯ ನೂರಾರು ಜನರು ಬಂದು ತಾಯಿ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಅಲ್ಲದೆ ಬಂದ ಭಕ್ತರ ಇಷ್ಟಾರ್ಥಗಳನ್ನು ತಾಯಿ ಈಡೇರಿಸುತ್ತಾಳೆ ಎಂಬ ನಂಬಿಕೆ ಜನರಲ್ಲಿದೆ. ಇಂಥ ದೇವಸ್ಥಾನಗಳಲ್ಲಿ ಪ್ರತಿವರ್ಷ ಸಾಕಷ್ಟು ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ. ಇಂಥ ದೇವಸ್ಥಾನಗಳಿಗೆ ಸರ್ಕಾರದ ನೆರವು ಅವಶ್ಯವಾಗಿದೆ. ಸರ್ಕಾರ ಮತ್ತು ಭಕ್ತರ ನೆರೆವಿನಿಂದ ಮಾತ್ರ ಇಂಥ ದೇವಸ್ಥಾನಗಳ ಅಭಿವೃದ್ದಿ ಸಾಧ್ಯ ಎಂದರು.ಮುಖಂಡರಾದ ಮಹಾದೇವ ಸಾವಂತ, ಗಂಗಪ್ಪ ದಿನ್ನಿಮನಿ, ಮಾನಿಂಗ ಶಿವಣಗಿ, ಮಹಾಂತೇಶ ಅವಟಗಿ, ಪರಸು ಅಮರಾವತಿ, ರಮೇಶ ಕೋಳಿ, ನಾಗೇಶ ಬಜಂತ್ರಿ, ಪ್ರಶಾಂತ ಮುಖ್ಯನ್ನವರ ಸೇರಿದಂತೆ ಹಲವರು ಇದ್ದರು.