ಭಕ್ತಿ ಮತ್ತು ಸೇವೆ ಎರಡೂ ಜೊತೆ ಇದ್ದಾಗ ಮಾತ್ರ ಅದಕ್ಕೆ ಅರ್ಥವಿರುತ್ತದೆ. ಇಂದು ನಗರ, ಪಟ್ಟಣಗಳು ಹೆಮ್ಮರವಾಗಿ ಬೆಳೆಯುತ್ತಿವೆ. ಆದರೆ ಮನುಷ್ಯನ ಮನಸ್ಸು ಮಾತ್ರ ಅಶಾಂತಿಯಿಂದ ಕೂಡಿದೆ. ಆಚರಣೆಗಳನ್ನು ಮೂಡ ನಂಭಿಕೆಗಳನ್ನಾಗಿ, ದೇವಮಂದಿರಗಳನ್ನು ಮತಾಂಧ ರೀತಿಯಲ್ಲಿ ಬಿಂಬಿಸುತ್ತಿರುವುದೇ ಕಾರಣ .

ಕನ್ನಡಪ್ರಭ ವಾರ್ತೆ ಹೊಸಕೋಟೆ

ದೇವಾಲಯಗಳು ಮನಸ್ಸಿಗೆ ನೆಮ್ಮದಿ ಕೊಡುವ ಆಧ್ಯಾತ್ಮಿಕ ಕೇಂದ್ರಗಳಾಗಿದ್ದು, ಅವು ಇಲ್ಲದಿದ್ದರೆ ದೇಶದಲ್ಲಿ ಮಾನಸಿಕ ಖಿನ್ನತಾ ಕೇಂದ್ರಗಳು ಹೆಚ್ಚುತ್ತಿದ್ದವು ಎಂದು ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ತಿಳಿಸಿದರು.

ತಾಲೂಕಿನ ನಂದಗುಡಿ ಹೋಬಳಿಯ ಮುಗಬಾಳದ ಶ್ರೀ ಕ್ಷೇತ್ರ ವೀರಭದ್ರಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ವೀರಭದ್ರ ಸ್ವಾಮಿ ಕಲ್ಯಾಣ ಮಂಟಪ ಟ್ರಸ್ಟ್ ವತಿಯಿಂದ ಶ್ರೀ ಸೋಮೇಶ್ವರ ಸಭಾಭವನ, ಅತಿಥಿ ಕೊಠಡಿ, ವಿಸ್ತೃತ ದಾಸೋಹ ಭವನ, ನೂತನ ತೇರು, ತೇರಿನ ಮನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಗಬಾಳ ಕ್ಷೇತ್ರದಲ್ಲಿ ಡಾ.ಸಿ.ಸೋಮಶೇಖರ್ ನೇತೃತ್ವದಲ್ಲಿ ಅಭಿವೃದ್ಧಿ ಆಗುತ್ತಿದ್ದು ಮುಂದಿನ ದಿನಗಳಲ್ಲಿ ದೊಡ್ಡ ಧಾರ್ಮಿಕ ಕ್ಷೇತ್ರವಾಗಲಿ ಎಂದರು.

ನಾಗಲಾಪುರ ವೀರಸಿಂಹಾಸನ ಮಠದ ಶ್ರೀ ತೆಜೇಶಲಿಂಗ ಸ್ವಾಮೀಜಿ ಮಾತನಾಡಿ, ಭಕ್ತಿ ಮತ್ತು ಸೇವೆ ಎರಡೂ ಜೊತೆ ಇದ್ದಾಗ ಮಾತ್ರ ಅದಕ್ಕೆ ಅರ್ಥವಿರುತ್ತದೆ. ಇಂದು ನಗರ, ಪಟ್ಟಣಗಳು ಹೆಮ್ಮರವಾಗಿ ಬೆಳೆಯುತ್ತಿವೆ. ಆದರೆ ಮನುಷ್ಯನ ಮನಸ್ಸು ಮಾತ್ರ ಅಶಾಂತಿಯಿಂದ ಕೂಡಿದೆ. ಆಚರಣೆಗಳನ್ನು ಮೂಡ ನಂಭಿಕೆಗಳನ್ನಾಗಿ, ದೇವಮಂದಿರಗಳನ್ನು ಮತಾಂಧ ರೀತಿಯಲ್ಲಿ ಬಿಂಬಿಸುತ್ತಿರುವುದೇ ಕಾರಣ ಎಂದರು.

ಬೆಳ್ಳಾವಿಯ ಶ್ರೀಮದ್ ಬೆಳ್ಳನಪುರಿ ವೀರ ಸಿಂಹಾಸನ ಮಠದ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ, ರಾಜ್ಯ ವಿಜ್ಞಾನ ಸಂಶೋಧನಾ ಪರಿಷತ್ ರಾಜ್ಯಾಧ್ಯಕ್ಷರಾದ ಹುಲಿಕಲ್ ನಟರಾಜ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೋಮಶೇಖರ್‌, ಸಮಸ್ತ ಘೌಂಡೇಷನ್ ಸಂಚಾಲಕಿ ಪ್ರತಿಭಾ ಶರತ್, ಶ್ರೀ ವೀರಭದ್ರಸ್ವಾಮಿ ಕಲ್ಯಾಣ ಮಂಟಪ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಶರಫ್, ಕಾರ್ಯದರ್ಶಿ ವೀರಸ್ವಾಮಿಗೌಡ, ಖಜಾಂಚಿ ಜ್ಞಾನಮೂರ್ತಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಗುರುಬಸಪ್ಪ ಇತರರು ಹಾಜರಿದ್ದರು.