ಸಾರಾಂಶ
ಅನಾದಿಕಾಲದಿಂದಲೂ ದೇವಾಲಯಗಳು ಸಮಾಜ ಒಗ್ಗೂಡಿಸುವ ಕಾರ್ಯ ಮಾಡಿಕೊಂಡು ಬರುತ್ತಿವೆ.
ಕುಮಟಾ: ಅನಾದಿಕಾಲದಿಂದಲೂ ದೇವಾಲಯಗಳು ಸಮಾಜ ಒಗ್ಗೂಡಿಸುವ ಕಾರ್ಯ ಮಾಡಿಕೊಂಡು ಬರುತ್ತಿವೆ. ಸಮಾಜವನ್ನು ಒಗ್ಗೂಡಿಸುವುದೇ ಧರ್ಮ ಎಂದು ಎಡನೀರು ಮಠಾಧೀಶ ಸಚ್ಚಿದಾನಂದ ಭಾರತೀ ಶ್ರೀ ನುಡಿದರು.
ಪಟ್ಟಣದ ಗ್ರಾಮದೇವಿ ದೇವರಹಕ್ಕಲ ಶಾಂತಿಕಾ ಪರಮೇಶ್ವರಿ ಮಂದಿರದ ನವೀಕೃತ ಸಭಾಭವನದ ದ್ವಾರ ಪೂಜೆ, ನಾಮಫಲಕ ಅನಾವರಣ, ಅನ್ನಪೂರ್ಣಾದೇವಿ ಪೂಜೆ ನೆರವೇರಿಸಿ ಆಶೀರ್ವದಿಸಿದರು.ಬಗೆಹರಿಯದ ಭಿನ್ನಾಭಿಪ್ರಾಯಗಳು ಎಂದಿಗೂ ಏಳಿಗೆಗೆ ಪೂರಕವಲ್ಲ. ನಿರ್ವಂಚನೆಯ ದೇವತಾ ಕಾರ್ಯಗಳಲ್ಲಿ ಮನಃಶಾಂತಿ ಜತೆಗೆ ಮನುಕುಲದ ಏಳಿಗೆಯೂ ಅಡಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಂದಿರದ ಆಡಳಿತ ಮೊಕ್ತೇಸರ ಕೃಷ್ಣ ಬಾಬಾ ಪೈ, ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದವರನ್ನು ಸ್ಮರಿಸಿದರು. ಗ್ರಾಮದೇವಿಯ ಅನುಗೃಹ, ಗುರುಹಿರಿಯರ ಆಶೀರ್ವಾದದಿಂದ ಸಂಕಲ್ಪಿತ ಸಕಲ ಕಾರ್ಯವನ್ನು ನಿರ್ವಿಘ್ನವಾಗಿ ಈಡೇರಿಸಲು ಸಾಧ್ಯವಾಗಿದೆ ಎಂದರು.ದಾಮೋದರ ಭಟ್ ಧಾರ್ಮಿಕ ಉಪನ್ಯಾಸ ಮಾಡಿದರು. ವೇದಿಕೆಯಲ್ಲಿ ಸಿ.ಎ. ಸತೀಶ ಶಾನಭಾಗ, ಗ್ರಾಮದೇವಿ ಮಂದಿರದ ಅರ್ಚಕರಾದ ರಾಜು ಗುನಗ, ಪ್ರಶಾಂತ ಗುನಗ, ಪ್ರಕಾಶ ಗುನಗ ಇದ್ದರು. ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದವರಿಗೆ ಸನ್ಮಾನಿಸಲಾಯಿತು.
ವೇದಘೋಷದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಾಯಿಶ್ರೀ ವೆರ್ಣೇಕರ ಪ್ರಾರ್ಥಿಸಿದರು. ಎಂ.ಬಿ.ಪೈ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ನಾಯ್ಕ ನಿರೂಪಿಸಿದರು. ಅರುಣ ಮಣಕೀಕರ, ಜಯದೇವ ಬಳಗಂಡಿ ಸನ್ಮಾನಿತರ ಯಾದಿ ಓದಿದರು. ಎನ್.ಆರ್. ಗಜು, ಆನಂದ ನಾಯ್ಕ ಇದ್ದರು. ಕಿರಣ ಪ್ರಭು ವಂದಿಸಿದರು.