ತ್ಯಾಮಗೊಂಡ್ಲು ಪಟ್ಟಣದ ಗ್ರಾಮದೇವತೆ ಜಾತ್ರಾ ಮಹೋತ್ಸವಕನ್ನಡಪ್ರಭ ವಾರ್ತೆ ದಾಬಸ್ಪೇಟೆ
ಮನುಷ್ಯನ ಭಾವನೆಗಳನ್ನು ಪವಿತ್ರಗೊಳಿಸಿ ಅಂತ ರಂಗವನ್ನು ಶುದ್ಧೀಕರಿಸಲು ದೇವಾಲಯಗಳು ಸಹಕಾರಿ ಎಂದು ಶಾಸಕ ಶ್ರೀನಿವಾಸ್ ತಿಳಿಸಿದರು.ತ್ಯಾಮಗೊಂಡ್ಲು ಪಟ್ಟಣದ ಗ್ರಾಮದೇವತೆ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮನುಷ್ಯನಿಗೆ ಆರ್ಥಿಕ ಸಂಪತ್ತಿಗಿಂತ, ಮನಸ್ಸಿನ ಶಾಂತಿ, ನೆಮ್ಮದಿ ಜೊತೆಗೆ ತೃಪ್ತಿಯೆಂಬ ಆಂತರಿಕ ಸಂಪತ್ತು ತುಂಬಾ ಅಗತ್ಯ. ಭಾರತೀಯ ಸಂಸ್ಕೃತಿಯಲ್ಲಿ ದೇವರ ಮೇಲಿನ ಶ್ರದ್ಧಾಭಕ್ತಿ ಪ್ರತೀಕವಾಗಿ ದೇವಾಲಯಗಳು ನಿರ್ಮಾಣಗೊಳ್ಳುತ್ತಿವೆ. ದ್ವೇಷ ಆಸೂಯೆಗಳನ್ನು ತೊರೆದು ವಿಶ್ವಾಸದಿಂದ ಬದುಕಿದಾಗ ಮಾತ್ರ ದೇವರು ಒಲಿಯುತ್ತಾನೆ ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಗದೀಶ್ ಮಾತನಾಡಿ, ಮನುಷ್ಯ ಚಿಂತೆ ಮಾಡುವುದನ್ನು ಬಿಟ್ಟು ಚಿಂತನೆ ಮಾಡಬೇಕಿದೆ. ದೇವಾಲಯಗಳಲ್ಲಿ ಶ್ರದ್ಧಾ ಭಕ್ತಿಯಿಂದ ನಡೆದುಕೊಳ್ಳುವುದು ಭಕ್ತರ ಕೆಲಸ. ಭಾರತೀಯ ಸಂಸ್ಕೃತಿ, ಆಚರಣೆ, ಪರಂಪರೆಯನ್ನು ದೇವಾಲಯಗಳಲ್ಲಿ ನೋಡಬಹುದು. ನಾವೆಲ್ಲಾ ಜಾತಿ, ಧರ್ಮ, ಪಂಥಗಳನ್ನು ಬಿಟ್ಟು ಎಲ್ಲರೂ ಒಂದೇ ತಾಯಿಯ ಮಕ್ಕಳೆಂದು ಭಾವಿಸಬೇಕಿದೆ ಎಂದು ಹೇಳಿದರು.ಗಂಗಾಧರೇಶ್ವರ ಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಗಳಕುಪ್ಪೆ ಗೋವಿಂದರಾಜು ಮಾತನಾಡಿ, ದೇವಾಲಯಗಳು ಜಾತ್ಯತೀತತೆ ಸಾರುವ ಪ್ರಮುಖ ಧರ್ಮಕ್ಷೇತ್ರಗಳು. ಪ್ರತಿ ವ್ಯಕ್ತಿ ಮನಸ್ಸಿನಲ್ಲೇ ಒಳ್ಳೆಯದು ಹಾಗೂ ಕೆಟ್ಟದ್ದು ಎಂಬ ಅಂತರ್ಯುದ್ದ ನಡೆಯುತ್ತಿರುತ್ತದೆ. ಮನಸ್ಸು ಒಳ್ಳೆಯವನ್ನು ರೂಢಿಸಿಕೊಳ್ಳುವ ಮನೋಧರ್ಮ ಬೆಳೆಸಿಕೊಂಡು ದೇವಾಲಯಗಳಿಗೆ ಭೇಟಿ ನೀಡಿ ಸದಾಶಾಂತಚಿತ್ತವಾಗಿ ನೆಮ್ಮದಿಯಿಂದ ಜೀವನ ನಡೆಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷ ವಾಸುದೇವ್, ಸದಸ್ಯ ಸಾಧತ್ ಉಲ್ಲಾ, ಮುಖಂಡ ಬೀರಗೊಂಡನಹಳ್ಳಿ ಮಲ್ಲೇಶ್, ಮುಖಂಡರು, ಭಕ್ತಾದಿಗಳು ಉಪಸ್ಥಿತರಿದ್ದರು.---ಪೋಟೋ 3 : ತ್ಯಾಮಗೊಂಡ್ಲು ಪಟ್ಟಣದ ಗ್ರಾಮದೇವತಾ ಜಾತ್ರಾ ಮಹೋತ್ಸವದಲ್ಲಿ ಶಾಸಕ ಶ್ರೀನಿವಾಸ್ ಭಾಗವಹಿಸಿದ್ದರು.