ಕೊಪ್ಪಳ: ನಮ್ಮ ಭಾಗದ ಪ್ರಸಿದ್ಧ ದೇವಸ್ಥಾನವಾಗಿರುವ ಹುಲಗಿಯ ಶ್ರೀ ಹುಲಿಗೆಮ್ಮದೇವಿಯ ದೇವಸ್ಥಾನ ಅಭಿವೃದ್ಧಿಪಡಿಸಲು ಹಲವು ಯೋಜನೆಗಳನ್ನು ರೂಪಿಸಿದ್ದೇವೆ. ಈಗಾಗಲೇ ಹಲವು ಕಾಮಗಾರಿಗಳನ್ನು ಕೈಗೊಂಡಿದ್ದು, ಈಗಾಗಲೇ ಹಲವು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್‌ ಹೇಳಿದರು.

ಹಿಟ್ನಾಳ ಜಿಪಂ ಕ್ಷೇತ್ರ ವ್ಯಾಪ್ತಿಯ ಹಿಟ್ನಾಳ, ಕಂಪಸಾಗರ, ಹುಲಿಗಿ, ಮುನಿರಾಬಾದ್ ಆರ್.ಎಸ್., ಹಳೇಲಿಂಗಾಪುರ, ಹೊಸಲಿಂಗಪುರ, ಮಟ್ಟಿ, ಮುದ್ಲಾಪುರ, ಹೊಳೆ ಮುದ್ಲಾಪುರ, ಮುನಿರಾಬಾದ್ ಡ್ಯಾಮ್ ಹಾಗೂ ಹೊಸಳ್ಳಿ ಗ್ರಾಮದಲ್ಲಿ ಸುಮಾರು ₹12.38 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ, ಹುಲಗಿಯಲ್ಲಿ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್‌, ನಿನ್ನೆ ಬೆಂಗಳೂರಿನಲ್ಲಿ ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿಯಾಗಿ ಶ್ರೀ ಹುಲಿಗೆಮ್ಮ ದೇವಿಯ ಜಾತ್ರೆಗೆ ಆಹ್ವಾನಿಸಿದ್ದೇನೆ. ಈ ಸಂದರ್ಭದಲ್ಲಿ ಇನ್ನೂ ₹72 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶೀಘ್ರದಲ್ಲಿ ಟೆಂಡರ್ ಕರೆಯಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಸಚಿವರ ಗಮನಕ್ಕೆ ತಂದಿದ್ದೇನೆ. ಶ್ರೀ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಹಿಟ್ನಾಳ ಕ್ರಾಸ್ ಮೂಲಕ ಹೆಚ್ಚಿನ ಭಕ್ತರು ಸಂಚಾರ ಮಾಡುತ್ತಿರುವುದರಿಂದ ಈಗಾಗಲೇ ಆ ರಸ್ತೆಗೆ ₹4.20 ಕೋಟಿ ಅನುದಾನ ನೀಡಿದ್ದು, ಈಗಾಗಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಅಡಿಗಲ್ಲು: ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ₹4 ಕೋಟಿ ವೆಚ್ಚದಲ್ಲಿ ಹಾಗೂ ಹೊಸಹಳ್ಳಿ ಗ್ರಾಮದಲ್ಲಿ ₹4 ಕೋಟಿ ವೆಚ್ಚದಲ್ಲಿ ಸರ್ಕಾರಿ ಪ್ರಾಥಮಿಕ /ಪ್ರೌಢಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸಿ ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅಡಿಗಲ್ಲು ನೆರವೇರಿಸಿದರು.

ಹಿಟ್ನಾಳ ಗ್ರಾಮದಲ್ಲಿ ₹25 ಲಕ್ಷ ವೆಚ್ಚದಲ್ಲಿ ಭಾವಸಾರ ಕ್ಷತ್ರಿಯ ಹಾಗೂ ₹25 ಲಕ್ಷ ವೆಚ್ಚದ ಆರ್ಯವೈಶ್ಯ ಸಮಾಜದ ಸಮುದಾಯ ಭವನ, ಹುಲಿಗಿಯಲ್ಲಿ ₹25 ಲಕ್ಷ ವೆಚ್ಚದಲ್ಲಿ ಭೋವಿ ಸಮಾಜದ, ₹25 ಲಕ್ಷ ವೆಚ್ಚದಲ್ಲಿ ಸವಿತಾ ಸಮಾಜದ ಹಾಗೂ ₹20 ಲಕ್ಷ ವೆಚ್ಚದಲ್ಲಿ ವಾಲ್ಮೀಕಿ ಸಮಾಜದ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ, ವಿ.ಆರ್. ಪಾಟೀಲ್, ಜಿಪಂ ಮಾಜಿ ಸದಸ್ಯ ಗವಿಸಿದ್ದಪ್ಪ ಕರಡಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಬಾಲಚಂದ್ರನ್ ಮುನಿರಾಬಾದ್, ಕೆ.ಎಂ. ಸೈಯದ್, ವಿಶ್ವನಾಥ ರಾಜೂರು, ಫಾಲಾಕ್ಷಪ್ಪ ಗುಂಗಾಡಿ, ಯಂಕಪ್ಪ ಹೊಸಳ್ಳಿ, ಚಿನ್ನಿ ಆರ್.ಎಸ್., ಈರಣ್ಣ ಹುಲಿಗಿ, ಧರ್ಮಣ್ಣ ಕಂಪಸಾಗರ, ಪ್ರಶಾಂತ ಗೌಡ್ರು, ನಾರಾಯಣ ಬಿಲಂಕರ್, ವೆಂಕಟೇಶ್ ಹಿಟ್ನಾಳ, ಸೋಮಶೇಖರ ಹಿಟ್ನಾಳ, ಹನಮಂತಪ್ಪ ಹ್ಯಾಟಿ, ಶರಣಪ್ಪ ಉಪ್ಪಾರ್, ಮಾರುತಿ ಬಗನಾಳ, ರಾಮಮೂರ್ತಿ ಮುನಿರಾಬಾದ್, ಬಸಣ್ಣ ಬೇವೂರು, ಅಶೋಕ್ ಹಿಟ್ನಾಳ, ಹನುಮಂತ ಗಿಡ್ಡಾಲಿ, ತಹಸೀಲ್ದಾರ್ ಬಸವರಾಜ, ಅಕ್ಬರ್ ಪಲ್ಟಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.