ಹುಬ್ಬಳ್ಳಿ:
ಎಲ್ಲೆಡೆ ಹಿಂದೂ ಯುವತಿಯರನ್ನು ವ್ಯವಸ್ಥಿತವಾಗಿ ಲವ್ ಜಿಹಾದ್ಗೆ ನೂಕುವ ಯತ್ನ ನಡೆಯುತ್ತಿದ್ದು, ಇದಕ್ಕೆಲ್ಲ ಭಯೋತ್ಪಾಧಕ ಸಂಘಟನೆಗಳ ಬೆಂಬಲವಿದೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆ ನಿವಾಸಕ್ಕೆ ಸೋಮವಾರ ಭೇಟಿ ನೀಡಿ ಪಾಲಕರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸಭೆ ಸೇರಿ ನಿರ್ಧಾರ:ಈ ಪ್ರಕರಣದಲ್ಲಿ ಆರೋಪಿ ಸಮೀರ್ ಮುಲ್ಲಾ ಪೊಲೀಸ್ ಕಸ್ಟಡಿಯಲ್ಲಿ ಇದ್ದುಕೊಂಡೇ ವೀಡಿಯೋ ಹೇಳಿಕೆ ನೀಡುತ್ತಾನೆ. ಹೀಗಾದರೆ ಪೊಲೀಸರು ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದ ಯತ್ನಾಳ, ಇಂತಹವನ ಮೇಲೆ ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಹಿಂದೂಪರ ಸಂಘಟನೆ ಸುಮ್ಮನಿರುವುದಿಲ್ಲ. ಒಂದು ವಾರದೊಳಗೆ ನಗರದಲ್ಲಿ ಎಲ್ಲ ಹಿಂದೂ ಬಾಂಧವರು ಸೇರಿ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಕಾಂಗ್ರೆಸ್ ಬೆಂಬಲ:
ಇಂತಹ ಕೃತ್ಯಗಳಿಗೆ ಕಾಂಗ್ರೆಸ್ ಹಾಗೂ ಮುಸ್ಲಿಂ ಮುಖಂಡರ ಬೆಂಬಲವಿದೆ ಎಂದು ಆರೋಪಿಸಿರುವ ಯತ್ನಾಳ, ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಪೊಲೀಸರು ಸಹ ಹಣ ತೆಗೆದುಕೊಂಡು ಪ್ರಕರಣವನ್ನು ಸರಿಯಾಗಿ ವಿಚಾರಣೆ ಮಾಡುತ್ತಿಲ್ಲ. ಇವರಿಗೆ ಧರ್ಮ, ಕಾನೂನು, ದೇಶದ ರಕ್ಷಣೆ ಬಗ್ಗೆ ಗೌರವವಿಲ್ಲ ಎಂದು ಕಿಡಿಕಾರಿದರು.
ಈ ವೇಳೆ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಸೇರಿದಂತೆ ಹಲವರಿದ್ದರು.