ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ
ದೀನ ದಲಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದೇ ಕಾಂಗ್ರೆಸ್ ಪಕ್ಷದ ದೊಡ್ಡ ಸಾಧನೆ ಎಂದು ಚಿತ್ರದುರ್ಗ ಸಂಸದ ಹಾಗೂ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದು ಒಂದು ವರ್ಷ ೨ ತಿಂಗಳಾಯಿತು. ಅಧಿಕಾರಕ್ಕೆ ಬರುವ ಮುಂಚೆ ಸಿದ್ದರಾಮಯ್ಯನವರು ಅನೇಕ ಭರವಸೆಗಳನ್ನು ನೀಡಿದರು. ಅಭಿವೃದ್ಧಿ ವಿಚಾರದಲ್ಲಿ ದೀನ ದಲಿತರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುವುದು, ಭರವಸೆಗಳನ್ನು ನೀಡಿ ಅಧಿಕಾರ ಬಂದಿದ್ದೀರಿ. ಅಧಿಕಾರಕ್ಕೆ ಬಂದ ಮೇಲೆ ದೀನ ದಲಿತರಿಗೆ ಬಜೆಟ್ನಲ್ಲಿ ಮೀಸಲಿಟ್ಟಿದ್ದ ₹೨೪ ಸಾವಿರ ಕೋಟಿ ಹಣವನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ, ಗ್ಯಾರಂಟಿಗಳಿಗೆ ವಿನಿಯೋಗ ಮಾಡಿದ್ದೀರಿ. ಇದು ಅನ್ಯಾಯ ಮತ್ತು ಅಧಿಕಾರ ದುರುಪಯೋಗ ಎಂದು ಕಿಡಿಕಾರಿದರು.
₹೨೪ ಸಾವಿರ ಕೋಟಿ ದಲಿತರಿಗೆ ಮೀಸಲಿಟ್ಟ ಹಣವನ್ನು ಮರಳಿ ನೀಡಿ ಉದ್ಯೋಗ, ಶಿಕ್ಷಣ, ಭೂ ಒಡೆತನದಲ್ಲಿ ಭೂಮಿ ಕೊಡಿಸುವುದು, ಉದ್ಯೋಗಪತಿ ಮಾಡಲು ದಲಿತರ ಜೀವನ ಮಟ್ಟ ಸುಧಾರಿಸಬೇಕು. ಸಿದ್ದರಾಮಯ್ಯ ಸರ್ಕಾರ ಮಾಡದೇ ಇದ್ದರೆ ಬಿಜೆಪಿಯಿಂದ ತೀವ್ರ ಹೋರಾಟ ಮಾಡಬೇಕಾಗುತ್ತದೆ. ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಸರ್ಕಾರ ಖಜಾನೆ ಕೂಡ ಹಗಲು ದರೋಡೆಯಾಗಿದೆ. ವಾಲ್ಮೀಕಿ ನಿಗಮದಲ್ಲಿ ₹೧೮೭ ಕೋಟಿ ಹಣ ದುರುಪಯೋಗವಾಗಿದೆ. ಮುಖ್ಯಮಂತ್ರಿ ಅಧೀನದಲ್ಲಿ ಹುಜುರ ಖಜಾನೆಯಲ್ಲಿಯೇ ಅವ್ಯವಹಾರವಾಗಿದ್ದು ತನಿಖೆಯಿಂದ ತಿಳಿದುಬಂದಿದೆ ಎಂದು ಆರೋಪಿಸಿದರು.ಈ ವೇಳೆ ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷ ಸಂಗನಗೌಡ ಕಾತರಕಿ, ಲೋಕಣ್ಣ ಕತ್ತಿ, ಎಂ.ಎಂ.ವಿರಕ್ತಮಠ, ವ್ಹಿ.ಎಂ.ತೆಗ್ಗಿ, ಬಿ.ವ್ಹಿ.ಹಲಕಿ, ಅರುಣ ಕಾರಜೋಳ, ಯಮನಪ್ಪ ಹೊರಟ್ಟಿ, ವಿರೇಶ ಪಂಚಕಟ್ಟಿಮಠ, ಬಿ.ಎಲ್.ಬಬಲಾದಿ, ಸಿದ್ರಾಮಪ್ಪ ದೇಸಾಯಿ, ಪಿಕೆಪಿಎಸ್ ಅಧ್ಯಕ್ಷ ಹೊಳಬಸು ಕಾಜಗಾರ, ಕಾಶಲಿಂಗ ಮಾಳಿ, ಗೋಪಾಲಗೌಡ ಪಾಟೀಲ, ಮಲಿಕ ಭಾಗವಾನ, ಹಿತ್ತಲಮನಿ, ವಿಠ್ಠಲ ಬಾವಲತ್ತಿ, ವಿಜಯ ದೇಸಾಯಿ ಇತರರು ಇದ್ದರು.