ಸಾರಾಂಶ
ಕಾನೂನು ಅರಿವು ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಕೆಂಪರಾಜುಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಪ್ರತಿಯೊಂದು ಸಮಸ್ಯೆಗಳಿಗೂ ಸಂವಿಧಾನದಲ್ಲಿ ಉತ್ತರ ಕಂಡುಕೊಳ್ಳಬಹುದು. ಸಂವಿಧಾನ ಓದಿ ಅರ್ಥೈಸಿಕೊಂಡರೆ ಅದರ ಮಹತ್ವ ಮೌಲ್ಯಗಳು ಅರ್ಥವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆಂಪರಾಜು ಅಭಿಪ್ರಾಯಪಟ್ಟರು.ನಗರದ ಜಿಲ್ಲಾ ವಕೀಲರ ಭವನದಲ್ಲಿ ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸರಸ್ವತಿ ಕಾನೂನು ಕಾಲೇಜು ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಲಾಗಿದ್ದ, ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಭಾರತದ ಸಂವಿಧಾನ ಶ್ರೇಷ್ಠ ಹಾಗೂ ಪ್ರಬುದ್ಧವಾಗಿದೆ. ಪ್ರಪಂಚದ ಎಲ್ಲಾ ರಾಷ್ಟ್ರಗಳು ಭಾರತದ ಸಂವಿಧಾನವನ್ನು ಮೆಚ್ಚಿಕೊಂಡಿವೆ ಎಂದರು.
ಸಂವಿಧಾನ ನಮ್ಮಲ್ಲರಿಗೂ ತಾಯಿ ಇದ್ದಂತೆ. ಇದರ ಮಹತ್ವ ಹಾಗೂ ಮೌಲ್ಯಗಳನ್ನು ಅರಿತು ಕೊಳ್ಳಬೇಕು. ಜಗತ್ತೇ ಮೆಚ್ಚಿದ ಸಂವಿಧಾನ ದೊರೆತಿರುವುದು ನಮ್ಮೆಲ್ಲರ ಪುಣ್ಯ. ಸಂವಿಧಾನ ಮೂಲಭೂತ ಹಕ್ಕುಗಳನ್ನು ನೀಡಿದೆ. ಇದರಡಿ ನಮ್ಮ ಬದುಕು ಸುಗಮವಾಗಿ ನಡೆಯುತ್ತಿದೆ. ಸಂವಿಧಾನದ ಶ್ರೇಷ್ಠತೆಯನ್ನು ಮುಂದಿನ ತಲೆಮಾರಿಗೆ ತಿಳಿಸಿಕೊಡಬೇಕಾಗಿದೆ. ದೇಶದ ಜ್ವಲಂತ ಸಮಸ್ಯೆಗಳಿಗೆ ಸಂವಿಧಾನ ಉತ್ತರ ನೀಡಿದೆ. ಹಲವು ಮಹನೀಯರ ಹಗಲು ಇರುಳು ಎನ್ನದೇ ಪರಿಶ್ರಮಪಟ್ಟು, ತಮ್ಮ ಅನುಭವದಿಂದ ಸಂವಿಧಾನಕ್ಕೆ ರೂಪಕೊಟ್ಟಿದ್ದಾರೆ ಎಂದರು.ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್ ಸುಧಾದೇವಿ ಮಾತನಾಡಿ, ಸಂವಿಧಾನದಿಂದ ಸಮಾಜದ ಎಲ್ಲಾ ವರ್ಗದವರಿಗೂ ನ್ಯಾಯ ಸಿಕ್ಕಿದೆ. ಪ್ರತಿಯೊಬ್ಬ ಪ್ರಜೆಗೂ ಸಂವಿಧಾನದ ಆಶಯಗಳ ಮಹತ್ವ ತಲುಪಿಸಬೇಕು. ಪ್ರತಿಯೊಬ್ಬರೂ ಸಂವಿಧಾನ ಗೌರವಿಸಬೇಕು. ಸಂವಿಧಾನದ ಮೂಲ ಪ್ರತಿಯನ್ನು ಕೈ ಬರಹ ಮೂಲಕ ಬರೆಯಲಾಗಿದೆ. 16.22 ಇಂಚು ಅಳತೆ ಚರ್ಮದ ಕಾಗದಗಳ ಈ ಕೃತಿಯು 3.75 ಕೆ.ಜಿ ತೂಕ ಇದೆ. ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯಲಾಗಿದೆ. ಅಮೆರಿಕ ಮತ್ತು ಬ್ರಿಟನ್ ಸಂವಿಧಾನದ ಕೆಲವು ಉಪಬಂಧಗಳನ್ನು ಎರವಲು ಪಡೆದುಕೊಂಡು ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ. ಸಂವಿಧಾನ ಅಂಗೀಕಾರ ಸಮಯದಲ್ಲಿ 284 ಸದಸ್ಯರು ಒಪ್ಪಿ ಸಹಿ ಮಾಡಿದ್ದಾರೆ. 2 ವರ್ಷ 11 ತಿಂಗಳು 18 ದಿನಗಳ ಕಾಲ ಚರ್ಚಿಸಿ ಸಂವಿಧಾನವನ್ನು ರಚಿಸಲಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ವೈ. ತಿಪ್ಪೇಸ್ವಾಮಿ ಮಾತನಾಡಿ ಸಂವಿಧಾನದ ಪ್ರಸ್ತಾವನೆ ಮೆದುಳು ಇದ್ದಂತೆ. ಇಂದಿನ ಯುವ ಪೀಳಿಗೆ ಸಂವಿಧಾನವನ್ನು ಅರ್ಥಮಾಡಿಕೊಂಡು ಓದುಬೇಕು. ಸಂವಿಧಾನ ಸುಂದರ ಬದುಕು ಕೊಟ್ಟಿದೆ ಎಂದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಸಂವಿಧಾನದ ಮಹತ್ವ ಕುರಿತು ಉಪನ್ಯಾಸ ನೀಡಿದರು.ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಮರ್ಪಿಸಲಾಯಿತು.ನ್ಯಾಯಾಧೀಶರುಗಳಾದ ಉಜ್ವಲ ವೀರಣ್ಣ, ಚೈತ್ರಾ,ಅನಿತಾ ಕುಮಾರಿ, ನೇಮಿಚಂದ್, ಸಹನ, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ ಅನಿಲ್ ಕುಮಾರ್, ವಕೀಲರುಗಳಾದ ಎಂ. ಮೂರ್ತಿ, ಹನುಮಂತಪ್ಪ, ಗಿರೀಶ್ ಸೇರಿದಂತೆ ಕಾನೂನು ವಿದ್ಯಾರ್ಥಿಗಳು ಇದ್ದರು.