ಸಂವಿಧಾನದ ಆಶಯಗಳು ನಮ್ಮ ನೆಲದ ಅಸ್ಮಿತೆ

| Published : Jan 31 2025, 12:47 AM IST

ಸಾರಾಂಶ

ಧರ್ಮದ ದುರುಪಯೋಗ ಮಾಡಿಕೊಳ್ಳುವುದನ್ನೇ ಹುಸಿ ಕರ್ತವ್ಯವಾಗಿ ಮಾಡಿಕೊಂಡ ಕೆಲವರು ದೇಶ ಒಡೆಯಲೆತ್ನಿಸುತ್ತಿದ್ದಾರೆ

ಗಜೇಂದ್ರಗಡ: ಜಗತ್ತಿನ ಯಾವ ಧರ್ಮವೂ ಹಿಂಸಾರೂಪಿಗಳಾಗಲು ಮನುಷ್ಯರನ್ನು ಪ್ರಚೋದಿಸುವುದಿಲ್ಲ, ಸಂವಿಧಾನದ ಆಶಯಗಳು ನಮ್ಮ ನೆಲದ ಅಸ್ಮಿತೆ ಎಂದು ಪ್ರಗತಿಪರ ಚಿಂತಕ ಬಿ. ಪೀರಭಾಷಾ ಹೇಳಿದರು.

ಸ್ಥಳೀಯ ಶಾದಿ ಮಹಲ್‌ನಲ್ಲಿ ನಡೆದ ಅಂಜುಮನ್ ಇಸ್ಲಾಂ ಕಮಿಟಿ, ಪ್ರಗತಿಪರ, ಕನ್ನಡಪರ, ರೈತಪರ, ಟಿಪ್ಪು ಸುಲ್ತಾನ್ ಕಮೀಟಿ, ಕಟ್ಟಡ ಕಾರ್ಮಿಕ, ಕೃಷಿಕೂಲಿಕಾರ, ಸಿಐಟಿಯು, ಎಸ್‌ಎಫ್‌ಐ ಹಾಗೂ ಡಿವೈಎಫ್‌ಐ ಸಂಘಟನೆಗಳ ಆಶ್ರಯದಲ್ಲಿ ಗುರುವಾರ ನಡೆದ ಮಹಾತ್ಮ ಗಾಂಧಿ ಹುತಾತ್ಮ ದಿನ, ಸೌಹಾರ್ದ ಸಂಕಲ್ಪ ಪ್ರತಿಜ್ಞಾ ವಿಧಿ ಸಮಾರಂಭದಲ್ಲಿ ಮಾತನಾಡಿದರು.

ಧರ್ಮದ ದುರುಪಯೋಗ ಮಾಡಿಕೊಳ್ಳುವುದನ್ನೇ ಹುಸಿ ಕರ್ತವ್ಯವಾಗಿ ಮಾಡಿಕೊಂಡ ಕೆಲವರು ದೇಶ ಒಡೆಯಲೆತ್ನಿಸುತ್ತಿದ್ದಾರೆ ಎಂದು ದೂರಿದ ಅವರು, ಸಮಾನತೆಯ ಆಶಯ ಬದಿಗೊತ್ತಿ ಭಾವೋದ್ರೇಕವನ್ನು ಸಹಜವಾಗಿಸುವ ಕೆಲಸವು ನಡೆಯುವುದರ ಜತೆಗೆ ದ್ವೇಷದ ಬೆಂಕಿಯಲ್ಲಿ ಭಾರತದ ನೈಜ ಭಾವಕೋಶ ಸುಡಲೆತ್ನಿಸುವ ಘಟನೆಗಳು ವರದಿಯಾಗುತ್ತಿವೆ. ನಮ್ಮದು ಸೌಹಾರ್ದ ಭಾರತವೆಂಬ ಮನೋಧರ್ಮಕ್ಕೆ ಧಕ್ಕೆ ತರುತ್ತಿದ್ದಾರೆ. ಇಂತಹ ಸಂಕಟದ ಸನ್ನಿವೇಶದಲ್ಲಿ ಗಾಂಧಿಯವರ ಸೌಹಾರ್ದ ಭಾರತದ ಪರಿಕಲ್ಪನೆ ತುಂಬಾ ಪ್ರಸ್ತುತವಾಗುತ್ತದೆ ಎಂದರು.

ಪುರಸಭೆ ಮಾಜಿ ಸದಸ್ಯ,ಕಾರ್ಮಿಕ ಸಂಘಟನೆ ಮುಖಂಡ ಎಂ.ಎಸ್. ಹಡಪದ ಮಾತನಾಡಿ, ಸೌಹಾರ್ದತೆ ಜೀವಮಾನದ ಉದ್ದಕ್ಕೂ ಪ್ರತಿಪಾದಿಸುತ್ತ ಬಂದ ಗಾಂಧಿಯವರ ಹತ್ಯೆ ಜಗತ್ತನ್ನೇ ತಲ್ಲಣಗೊಳಿಸಿತ್ತು. ಯಾವುದೇ ಧರ್ಮದ ಮೂಲಭೂತವಾದವು ಜೀವಹತ್ಯೆಗೂ ಹಿಂಜರಿಯುವುದಿಲ್ಲ ಎಂಬ ಅರಿವಿಗೊಂದು ಅಮಾನವೀಯ ಸಾಕ್ಷಿಯಾಗಿತ್ತು. ಎಲ್ಲ ಧರ್ಮಗಳ ಮೂಲಭೂತವಾದ ಎಷ್ಟರ ಮಟ್ಟಿಗೆ ಜೀವ ವಿರೋಧಿಯಾಗಬಲ್ಲದು ಎಂಬ ಕಟು ಕಠೋರ ವಾಸ್ತವ ಮನುಷ್ಯ ಮನಸ್ಸಿನವರೆಲ್ಲ ಅರ್ಥ ಮಾಡಿಕೊಳ್ಳಬೇಕಾದ ಜರೂರತ್ತು ಅಂದಿಗೂ ಇಂದಿಗೂ ಅಂತಃಕರಣದ, ಒಂದು ಮೌಲ್ಯವಾಗಿದೆ. ನಿಜವಾದ ಧರ್ಮ ಮತ್ತು ಮನೋಧರ್ಮಗಳು ಯಾವತ್ತೂ ಹಿಂಸೆ ಮತ್ತು ಹತ್ಯೆಗಳ ಅಸ್ತ್ರವಾಗುವುದಿಲ್ಲ ಎಂದ ಅವರು, ನಾವು ಸೌಹಾರ್ದತೆಯ ಬದುಕನ್ನು ಉಳಿಸಿಬೇಕಿದೆ. ಕೋಮುವಾದಿಗಳಿಂದ ಈ ದೇಶ ರಕ್ಷಣೆ ಮಾಡಬೇಕಿದೆ ಎಂದರು.

ಸಂಗಾತ ಪತ್ರಿಕೆಯ ಸಂಪಾದಕ ಡಾ. ಟಿ.ಎಸ್.ಗೊರವರ, ಬಸವರಾಜ ಕೊಟಗಿ, ಎ.ಡಿ.ಕೋಲಕಾರ, ಕಾಲಜ್ಞಾನ ಮಠದ ಶರಣಬಸವ ಸ್ವಾಮೀಜಿ, ಮಾತನಾಡಿದರು. ಟೆಕ್ಕದ ದರ್ಗಾದ ನಿಜಾಮುದ್ದಿನಷಾ ಮಕಾನದಾರ ಸೌಹಾರ್ದ ಸಂಕಲ್ಪದಿನದ ಪ್ರತಿಜ್ಞಾವಿಧಿ ಭೋದಿಸಿದರು.

ಪ್ರಗತಿಪರ ಚಿಂತಕ ಪ್ರೊ. ಬಿ.ಎ. ಕೆಂಚರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಬಾಲು ರಾಠೋಡ, ದಾವಲಸಾಬ್‌ ತಾಳಿಕೋಟಿ, ನಾಸೀರ ಸುರಪುರ, ಗುರುಲಿಂಗ ಓದಸುಮಠ, ಮೆಹಬೂಬ್ ಹವಾಲ್ದಾರ, ನಿವೃತ್ತ ಶಿಕ್ಷಕ ಬಿ.ಎನ್.ಜಾಲಿಹಾಳ, ನೀಲಮ್ಮ ಹಿರೇಮಠ, ಮಾಸುಮಲಿ ಮದಗಾರ, ಚೆನ್ನಪ್ಪ ಗುಗಲೋತ್ತರ, ಚಂದ್ರು ರಾಠೋಡ, ಫಯಾಜ್ ತೋಟದ ಸೇರಿದಂತೆ ಬೀದಿ ಬದಿ ವ್ಯಾಪಾರಸ್ಥರು, ಅಂಗನವಾಡಿ ನೌಕರರು, ವಿದ್ಯಾರ್ಥಿಗಳು, ಕಟ್ಟಡ ಕಾರ್ಮಿಕರು ಸೇರಿದಂತೆ ಇತರರು ಇದ್ದರು.