ಕನ್ನಡಪ್ರಭವಾರ್ತೆ ನಾಪೋಕ್ಲು

ದಕ್ಷಿಣ ಕನ್ನಡ ಜಿಲ್ಲೆಯಿಂದ ಕೊಡಗಿಗೆ ಬಂದು ಅಭಿವೃದ್ಧಿ ಕಾಣುತ್ತಿರುವ ಬಿಲ್ಲವ ಸಮಾಜ ಜಿಲ್ಲೆಯ ಅತಿದೊಡ್ಡ ಸಮುದಾಯ. ಜಿಲ್ಲೆಯ ಅಭಿವೃದ್ಧಿಗೆ ಈ ಸಮಾಜದ ಕೊಡುಗೆ ಅಪಾರ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ಇಲ್ಲಿನ ಕೊಡವ ಸಮಾಜದಲ್ಲಿ ಬಿಲ್ಲವ ಸಮಾಜದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಆಟಿಡೊಂಜಿ ದಿನ ಕಾರ್ಯಕ್ರಮ, ಬಿಲ್ಲವ ಸಮುದಾಯ ಭವನದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು. 5 ಲಕ್ಷ ರು. ಸಹಾಯಧನ: ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ ನಾಪೋಕ್ಲುವಿನಲ್ಲಿ ಒಂದು ಉತ್ತಮ ಕಾರ್ಯಕ್ರಮ ಮಾಡಿ ಬಿಲ್ಲವ ಸಮಾಜ ತುಂಬಾ ಹೆಸರಾಗುತ್ತಿದೆ. ಈ ಸಮಾಜಕ್ಕಾಗಿ 5 ಲಕ್ಷ ರು. ಸಹಾಯಧನ ನೀಡುತ್ತಿದ್ದೇನೆ. ಸಮಾಜವನ್ನು ಮೇಲಕ್ಕೆತ್ತುವ ಕೆಲಸವನ್ನು ಹಾಗೂ ಸರ್ಕಾರದ ಸೌಲಭ್ಯವನ್ನು ಜನರಿಗೆ ತಲುಪಿಸುವ ಕೆಲಸವನ್ನು ಸಂಘ ನಿರ್ವಹಿಸಲಿ. ಸಮಾಜದ ಏಳಿಗೆಯಾಗಲಿ ಎಂದರು.

ಮಾಜಿ ಶಾಸಕ ಕೆ ಜಿ. ಬೋಪಯ್ಯ ಮಾತನಾಡಿ ಉತ್ತಮ ಬಿಲ್ಲವ ಸಮಾಜ ನಿರ್ಮಾಣದಿಂದ ಸಮಾಜ ಸುಭದ್ರವಾಗಲಿದೆ ಎಂದರು.

ಸೋಲೂರು ರಾಮನಗರದ ಆರ್ಯ ಈಡಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ವಿಖ್ಯಾತಾನಂದ ಸ್ವಾಮೀಜಿ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚಾರ, ವಿಚಾರ ಕಲಿಸಿ. ಮಕ್ಕಳಿಗೆ ಭವಿಷ್ಯದ ಬಗ್ಗೆ ಅರಿವು ಮೂಡಿಸಬೇಕು ಎಂದರು.


ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಸುರೇಶ ನಂಜಪ್ಪ ಮಾತನಾಡಿ ಹಿಂದೂ ರಾಷ್ಟ್ರಕ್ಕೆ ಬೆನ್ನುಲುಬಾಗಿ ನಿಂತ ಕೊಡಗಿನ ಸಮುದಾಯಗಲಲ್ಲಿ ಬಿಲ್ಲವ ಸಮುದಾಯದ ಪಾತ್ರ ಪ್ರಮುಖವಾದುದು ಎಂದರು.

ಉದ್ಯಮಿ ಎಡಿಕೇರಿ ಪ್ರಸನ್ನ ಮಾತನಾಡಿ ಹಿಂದೂ ಸಮಾಜ ಕಟ್ಟುವಲ್ಲಿ ಬಿಲ್ಲವ ಸಮಾಜದ ಕೊಡುಗೆ ಸದಾ ಇರಲಿ ಎಂದರು. ಕಾರ್ಯಕ್ರಮ ಉದ್ಘಾಟನೆ: ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಪ್ರತಿಪ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಇದಕ್ಕೂ ಮುನ್ನ ಬಿಲ್ಲವ ಸಮುದಾಯ ಭವನ ಶಂಕು ಸ್ಥಾಪನೆಯನ್ನು ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ವಿಖ್ಯಾತಾನಂದ ಸ್ವಾಮೀಜಿ ಮತ್ತು ಶಾಸಕ ಎ.ಎಸ್.ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ನೆರವೇರಿಸಿದರು. ಬಳಿಕ ಕೊಡವ ಸಮಾಜದಲ್ಲಿ ರಕ್ತದಾನ ಶಿಬಿರ ನಡೆಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನೀಡಲಾಯಿತು. ಆಟಿ ಮಾಸದ ಸಾಂಪ್ರದಾಯಿಕ ತಿನಿಸುಗಳ ಪ್ರದರ್ಶನ ಆಯೋಜಿಸಲಾಗಿತ್ತು.

ವಿರಾಜಪೇಟೆ ಬಿಲ್ಲವ ಸಮಾಜದ ಅಧ್ಯಕ್ಷ ಬಿಎಂ ಗಣೇಶ್ ಸೋಮವಾರಪೇಟೆ ಬಿಲ್ಲವ ಸಮಾಜದ ಅಧ್ಯಕ್ಷ ಚಂದ್ರಹಾಸ, ಕುಶಾಲನಗರ ಬಿಲ್ಲವ ಸಮಾಜದ ಅಧ್ಯಕ್ಷ ಸುಧೀರ್, ಸುಂಟಿಕೊಪ್ಪ ಬಿಲ್ಲವ ಸಮಾಜದ ಅಧ್ಯಕ್ಷ ಮಣಿ ಮುಕೇಶ್, ಸಿದ್ದಾಪುರ ಬಲ್ಲವ ಸಮಾಜದ ಅಧ್ಯಕ್ಷ ರಂಜನ್ ಬಿ.ವಿ ,ಮದೆನಾಡು ಬಿಲ್ಲವ ಸಮಾಜದ ಅಧ್ಯಕ್ಷ ತಾರಾನಾಥ ಬಿ. ಎಸ್ ಉಪಸ್ಥಿತರಿದ್ದರು. ಬಿ .ಎಂ. ಪ್ರತೀಪ್ ವಂದಿಸಿದರು.