ಸಾರಾಂಶ
ಹಿರೇಕೆರೂರು: ಇಡಿ ದೇಶಾದ್ಯಂತ ಬಿಜೆಪಿ ಅಲೆ ಹೆಚ್ಚಾಗಿದ್ದು, ಕೇಂದ್ರದಲ್ಲಿ ಮೂರನೇ ಬಾರಿಗೆ ಮತ್ತೆ ಪ್ರಧಾನಿಯಾಗಿ ನರೇಂದ್ರ ಮೋದಿ ಆಧಿಕಾರದ ಚುಕ್ಕಾಣಿ ಹಿಡಿಯುವುದು ಶತಸಿದ್ಧವಾಗಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಮತಯಾಚನೆಗಾಗಿ ತಾಲೂಕಿನ ಇಂಗಳಗೋಂದಿ ಗ್ರಾಪಂಗೆ ಭೇಟಿ ನೀಡಿ, ಅಲ್ಲಿ ಗ್ರಾಪಂ ಸದಸ್ಯರು ಹಾಗೂ ಬಿಜೆಪಿ ಮುಖಂಡರೊಂದಿಗೆ ಚರ್ಚೆ ನಡೆಸಿ, ಆನಂತರ ಅವರು ಮಾತನಾಡಿದರು.ಬಿಜೆಪಿಯಿಂದ ಮಾತ್ರ ಈ ದೇಶದ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಸಾಧ್ಯ. ಎಲ್ಲೆಡೆ ಮೋದಿ ಆಡಳಿತದ ಕಾರ್ಯವೈಖರಿಯನ್ನು ಎಲ್ಲ ಧರ್ಮದ ಮತದಾರರು ಮೆಚ್ಚಿಕೊಂಡಿದ್ದಾರೆ. ಜನಸಂಖ್ಯಾ ಸ್ಫೋಟದ ನಡುವೆ, ಆರ್ಥಿಕ ಪರಿಸ್ಥಿತಿಯಲ್ಲಿ 10 ಸ್ಥಾನದಲ್ಲಿದ್ದ ನಮ್ಮ ದೇಶವನ್ನು 5ನೇ ಸ್ಥಾನಕ್ಕೆ ತಂದಿದ್ದಾರೆ. ಕೋವಿಡ್ ಸಮಯದಲ್ಲಿ ಪ್ರಧಾನಿ ಮೋದಿ ಅವರು ತೆಗೆದುಕೊಂಡ ಕೆಲವು ದಿಟ್ಟ ನಿರ್ಧಾರ, ಉಚಿತ ಲಸಿಕೆ, ಚಿಕಿತ್ಸೆಯಿಂದ ಕೋಟ್ಯಂತರ ಜನರ ಪ್ರಾಣ ಉಳಿದಿದೆ.
ಎಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ಮನೆಯ ಪ್ರತಿ ಸದಸ್ಯನಿಗೆ ತಿಂಗಳಿಗೆ 5 ಕೆಜಿ ಅಕ್ಕಿ ವಿತರಣೆ ಸೇರಿ ಹಲವಾರು ಕಾರ್ಯಗಳನ್ನು ಅವರು ಕೈಗೊಂಡಿದ್ದಾರೆ ಎಂದರು.ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಟಿಎಪಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರಹಳ್ಳಿ, ಬಿ.ಎನ್. ಬಣಕಾರ, ಶಿವಯೋಗಿ ನಾಗಪ್ಪನವರ್, ಗಿರೀಶ. ಬಸವರಾಜ ಮಲಗಿ, ಹೂವಪ್ಪ ಮುದಿಗೌಡ್ರು, ಶಿವನಗೌಡ ಪುಟ್ಟಗೌಡ್ರು, ಸುರೇಶ್ ಮುತ್ತಗಿ, ಜೈಕುಮಾರ್ ಉಪ್ಪಾರ್, ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಸ್ಥಳೀಯರು ಪಾಲ್ಗೊಂಡಿದ್ದರು.