ಬೀರೂರು ತಾಲೂಕಿನ ಇತಿಹಾಸ ಪ್ರಸಿದ್ಧ ಅಂತರಘಟ್ಟೆ ಅಧಿದೇವತೆ ಶ್ರೀ ದುರ್ಗಾಂಬಾ ದೇವಿ ಬ್ರಹ್ಮರಥೋತ್ಸವ ಶನಿವಾರ ಬೆಳಗಿನ ಜಾವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ದೇವಿಗೆ ಕಾಳು ಮೆಣಸು, ಕೊಬ್ಬರಿ, ಬಾಳೆಹಣ್ಣು, ಕೋಳಿಗಳನ್ನು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದ ಭಕ್ತರು ಹರಕೆ ಹೊತ್ತಿದ್ದ

ಕನ್ನಡಪ್ರಭ ವಾರ್ತೆ, ಬೀರೂರು

ತಾಲೂಕಿನ ಇತಿಹಾಸ ಪ್ರಸಿದ್ಧ ಅಂತರಘಟ್ಟೆ ಅಧಿದೇವತೆ ಶ್ರೀ ದುರ್ಗಾಂಬಾ ದೇವಿ ಬ್ರಹ್ಮರಥೋತ್ಸವ ಶನಿವಾರ ಬೆಳಗಿನ ಜಾವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಕಳೆದ ಒಂದು ವಾರದಿಂದ ಜಾತ್ರಾಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು ಶುಕ್ರವಾರ ರಾತ್ರಿ ಉತ್ಸವ ಮೂರ್ತಿಯನ್ನು ಸಾಂಪ್ರದಾಯಿಕ ಪುಷ್ಪೋತ್ಸವದೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಸಿದರು. ಶನಿವಾರ ಬೆಳಿಗ್ಗೆ ದೇವಾಲಯದಲ್ಲಿ ದೇವಿ ಮೂಲವಿಗ್ರಹಕ್ಕೆ ಸಂಕಲ್ಪ ಸೇವೆಗಳ ಅಭಿಷೇಕ, ವಿಶೇಷ ಪೂಜೆ ನಡೆಯಿತು. ದೇಗುಲದ ಪ್ರಾಂಗಣದಲ್ಲಿ ರಥ ಎಳೆಯುವ ಮುನ್ನ ದೇವಿಯ ಉತ್ಸವ ನಡೆಸಿದರು. ಈ ಬಾರಿ ವಿಶೇಷವಾಗಿ ನಂದಿ, ತ್ರಿಶೂಲ ಹಾಗೂ ದೇವಿ ಕಣ್ಣಿನರಚಿತವಾದ ಹೂವಿನ ಅಲಂಕಾರದೊಂದಿಗೆ ರಥಗೋಪುರವನ್ನು ನಿರ್ಮಾಣಮಾಡಿದ್ದು ಭಕ್ತರ ಕಣ್ಮನ ಸೆಳೆಯಿತು. ದೇವಿ ಉತ್ಸವ ಮೂರ್ತಿಯನ್ನು ಅಲಂಕೃತಗೊಂಡ ರಥದಲ್ಲಿ ಪ್ರತಿಷ್ಟಾಪಿಸಲಾಯಿತು. ಬೆಳಿಗ್ಗೆ 7ಕ್ಕೆ ನಡೆದ ಬಲಿಪ್ರಧಾನಪೂಜೆ ನೆರವೇರಿಸಿ ನಂತರ ನೆರೆದಿದ್ದ ಸಹಸ್ರರಾರು ಭಕ್ತರು ದೇವಿ ರಥವನ್ನು ಹರ್ಷೋದ್ಗಾರ ದಿಂದ ಎಳೆದು ಸಂಭ್ರಮಿಸಿದರು. ದೇವಿ ಉತ್ಸವ ಮೂರ್ತಿಯನ್ನು ಮಧ್ಯಾಹ್ನ ರಥದಿಂದ ತೆರವುಗೊಳಿಸುವ ಮುನ್ನ ಬೃಹತ್ ಬಾಳೆಹಣ್ಣಿನ ರಾಶಿಪೂಜೆ ನಡೆಸಲಾಯಿತು. ರಥ ಸಾಗುತ್ತಿದ್ದಂತೆ ಹರಕೆ ಹೊತ್ತಿದ್ದ ದೇವಿ ಭಕ್ತರು ಕಾಳು ಮೆಣಸು, ಕೊಬ್ಬರಿ, ಬಾಳೆಹಣ್ಣು ಜೊತೆಗೆ ಕೋಳಿಗಳನ್ನು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು. ಕಡೂರು, ತರೀಕೆರೆ, ಅಜ್ಜಂಪುರ, ಹೊಸದುರ್ಗ ಸೇರಿದಂತೆ ನೆರೆಯ ಜಿಲ್ಲೆಗಳ ಭಾಗಗಳಿಂದ ಸುಮಾರು 10 ಸಾವಿರಕ್ಕೂ ಅಧಿಕ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು. ಸುತ್ತಮುತ್ತಲ ಗ್ರಾಮೀಣ ಭಾಗದ ಭಕ್ತರು ಸಾಂಪ್ರಾದಾಯಿಕವಾಗಿ ಅಲಂಕೃತಗೊಂಡ ಎತ್ತಿನಗಾಡಿಗಳೊಂದಿಗೆ ಆಗಮಿಸಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಕಡೂರು ಮತ್ತು ತರೀಕೆರೆ ಕ್ಷೇತ್ರದ ಶಾಸಕ ಕೆ.ಎಸ್.ಆನಂದ್, ಜಿ.ಎಚ್.ಶ್ರೀನಿವಾಸ್, ತರೀಕೆರೆ ಉಪವಿಭಾಗಾಧಿಕಾರಿ ಎನ್.ವಿ, ನಟೇಶ್, ರಥದ ಬಳಿ ವಿಶೇಷ ಪೂಜೆ ಸಲ್ಲಿಸಿದರು. ಕಡೂರು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾಪಂ ಇಒ ಸಿ.ಆರ್. ಪ್ರವೀಣ್, ಅಂತರಘಟ್ಟೆ ಗ್ರಾಪಂ ಅಧ್ಯಕ್ಷ ಕರಿಯಪ್ಪ, ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಆಸಂಧಿಕಲ್ಲೇಶ್, ಅಂಜನಪ್ಪ, ಮೋಹನ್ಕುಮಾರ್, ಕಂಸಾಗರ ಸೋಮಶೇಖರ್, ಅರೇಹಳ್ಳಿ ಶಿವು ಸೇರಿದಂತೆ ಕಂದಾಯ ವಿಭಾಗದ ಅಧಿಕಾರಿಗಳು ಗ್ರಾಪಂ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಪೂಜೆಯಲ್ಲಿ ಭಾಗಿಯಾಗಿದ್ದರು. ದೇವಾಲಯ ಮುಜರಾಯಿ ಇಲಾಖೆ ಸುರ್ಪದಿಗೆ ಒಳಪಡುವ ಹಿನ್ನಲೆಯಲ್ಲಿ ಕಂದಾಯ ವಿಭಾಗದ ಅಧಿಕಾರಿಗಳು ಮತ್ತು ಪಂಚಾಯಿತಿಯಿಂದ ಅಗತ್ಯ ಸೌಲಭ್ಯ ಕಲ್ಪಿಸಿಕೊಡಲಾಯಿತು. ಪೊಲೀಸರು ಸೂಕ್ತ ಭದ್ರತೆ ಒದಗಿಸಿದ್ದರು. ಜಾತ್ರಾ ಸಮಿತಿ ಸೇರಿದಂತೆ ಸಂಘ ಸಂಸ್ಥೆಗಳಿಂದ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಯಿತು. ವಾರಾಂತ್ಯದ ರಜೆ ಹಿನ್ನಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಭಕ್ತರ ಪ್ರಮಾಣ ಹೆಚ್ಚಾಗಿ ನೂಗುನುಗ್ಗಲು ಹೆಚ್ಚಾಗಿ ಕಂಡು ಬಂದಿತು. ಜನಸಂಖ್ಯೆ ದಟ್ಟಣಿ ಹೆಚ್ಚಾದ ಹಿನ್ನಲೆಯಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಸಂಜೆಯವರೆಗೂ ಕಾಡಿತು. ದೇವಸ್ಥಾನಕ್ಕೆ ಬರುವ ಭಕ್ತರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲ ಭಕ್ತರ ಮೊಬೈಲ್‌ ಗಳು ಜನದಟ್ಟಣೆಯಲ್ಲಿ ನಾಪತ್ತೆಯಾದವು. 31ಬೀರೂರು3ಕಡೂರು ತಾಲೂಕಿನ ಅಧಿದೇವತೆ ಅಂತರಘಟ್ಟೆ ಶ್ರೀ ದುರ್ಗಾಂಬ ದೇವಿ ಬ್ರಹ್ಮರಥೋತ್ಸವ ಸಹಸ್ರರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.