ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಪರಾಧ ಪ್ರಕರಣಗಳಲ್ಲಿ ಜಾಮೀನು ಪಡೆದು ಬಳಿಕ ನ್ಯಾಯಾಲಯದ ವಿಚಾರಣೆಗೆ ಗೈರಾಗುವ ಆರೋಪಿಗಳಿಗೆ ಈಗ ಜೈಲೂಟ ಕಾಯಂಗೊಳಿಸುವ ಪ್ರಬಲ ಅಸ್ತ್ರವೊಂದನ್ನು ನಗರ ಪೊಲೀಸರು ಪ್ರಯೋಗಿಸುತ್ತಿದ್ದಾರೆ.ಜಾಮೀನು ಷರತ್ತು ಮೀರಿದ ತಪ್ಪಿಗೆ ಕಳೆದ ಹನ್ನೊಂದು ತಿಂಗಳ ಅವಧಿಯಲ್ಲಿ 13 ಮಂದಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ. ಇನ್ನೂ 134 ಮಂದಿ ಮೇಲೆ ಜೈಲು ವಾಸದ ತೂಗುಗತ್ತಿ ಬಿದ್ದಿದೆ.
ಹಳೇ ಪ್ರಕರಣಗಳಲ್ಲಿ ಆರೋಪಿಗಳ ಗೈರು ಹೆಚ್ಚಳ ಹಿನ್ನೆಲೆಯಲ್ಲಿ ಜಾಮೀನು ಷರತ್ತು ಪಾಲಿಸದವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಜಾರಿಗೊಳಿಸಿದ್ದಾರೆ.ಹಳೇ ಪ್ರಕರಣಗಳಲ್ಲಿ ಜಾಮೀನು ಷರತ್ತುಗಳನ್ನು ಉಲ್ಲಂಘನೆ ಸಂಬಂಧ ಬಿಎನ್ಎಸ್ 229 (ಎ) ಅಡಿ ಪ್ರತ್ಯೇಕ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗುತ್ತದೆ. ಬಳಿಕ ತ್ವರಿತವಾಗಿ ಆ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಪೊಲೀಸರು ಆರೋಪ ಪಟ್ಟಿ ಸಲ್ಲಿಸುತ್ತಾರೆ. ಆಗ ಹಳೇ ಪ್ರಕರಣ ಇತ್ಯರ್ಥವಾಗುವ ಮುನ್ನವೇ ಜಾಮೀನು ಷರತ್ತು ಉಲ್ಲಂಘನೆ ಪ್ರಕರಣ ಕುರಿತು ನ್ಯಾಯಾಲಯದಲ್ಲಿ ಶೀಘ್ರ ವಿಚಾರಣೆ ಮುಗಿದು ತೀರ್ಪು ಪ್ರಕಟವಾಗುತ್ತಿದೆ. ಇದರಿಂದ ಹಳೇ ಪ್ರಕರಣದಲ್ಲಿ ತಪ್ಪಿದರೂ ಜಾಮೀನು ಷರತ್ತು ಪಾಲಿಸದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಏಕೆ ಈ ಕಠಿಣ ಕ್ರಮದರೋಡೆ, ಕೊಲೆ, ಸುಲಿಗೆ ಹಾಗೂ ವಂಚನೆ ಕೃತ್ಯಗಳು ಮಾತ್ರವಲ್ಲದೆ ಸಣ್ಣಪುಟ್ಟ ಗಲಾಟೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಹ ಆರೋಪಿಗಳು ವಿಚಾರಣೆ ಗೈರಾಗುತ್ತಿದ್ದಾರೆ. ಈ ಸಂಬಂಧ ನ್ಯಾಯಾಲಯ ವಾರೆಂಟ್ ಜಾರಿ ಹಿನ್ನಲೆ ಹಳೇ ಆರೋಪಿಗಳ ಪತ್ತೆಗೆ ಪೊಲೀಸರು ಬೆವರು ಹರಿಸಬೇಕಿದೆ. ಇನ್ನು 20-30 ವರ್ಷಗಳ ಹಳೇ ಪ್ರಕರಣಗಳಲ್ಲಿ ವಾರೆಂಟ್ ಜಾರಿಗೊಳಿಸುವ ಸವಾಲು ಪೊಲೀಸರು ಎದುರಿಸಬೇಕಾಗಿದೆ. ಅಪರಾಧ ಪ್ರಕರಣಗಳಲ್ಲಿ ಜಾಮೀನು ಮಂಜೂರಾತಿ ವೇಳೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯವು ಷರತ್ತು ವಿಧಿಸಿರುತ್ತದೆ. ಹೀಗಿದ್ದರೂ ಕೆಲವರು ಉದಾಸೀನತೆ ತೋರುತ್ತಾರೆ. ಈ ಹಿನ್ನಲೆ ಜಾಮೀನು ನಿಯಮ ಪಾಲಿಸದವರಿಗೆ ಬಿಎನ್ಎಸ್ 229 (ಎ)ರಡಿ ಪ್ರತ್ಯೇಕ ಪ್ರಕರಣ ದಾಖಲಿಸುವಂತೆ ಆಯುಕ್ತರು ಸೂಚಿಸಿದ್ದಾರೆ.
5 ತಿಂಗಳು ಜೈಲೂಟಜಾಮೀನು ನಿಯಮ ಉಲ್ಲಂಘನೆ ಪ್ರಕರಣದಲ್ಲಿ ದೊಡ್ಡನೆಕ್ಕುಂದಿಯ ವಿಶ್ವನಾಥ್ ರೆಡ್ಡಿ ಅಲಿಯಾಸ್ ವಿಶ್ವಾಸ್ಗೆ 5 ತಿಂಗಳ ಶಿಕ್ಷೆಯನ್ನು ನ್ಯಾಯಾಲಯವು ವಿಧಿಸಿದೆ. ಇದೂ ಜಾಮೀನು ನಿಯಮ ಪಾಲಿಸದ ತಪ್ಪಿಗೆ ಶಿಕ್ಷೆಗೆ ಗುರಿಯಾದ ಪ್ರಥಮ ಪ್ರಕರಣವಾಗಿದೆ. 2012ರ ಹಲ್ಲೆ ಪ್ರಕರಣದ ವಿಚಾರಣೆ ಗೈರಾದ ಕಾರಣಕ್ಕೆ ವಿಶ್ವಾಸ್ನ ಮೇಲೆ ನ್ಯಾಯಾಲಯವು ವಾರೆಂಟ್ ಜಾರಿಗೊಳಿಸಿತ್ತು. ಆಗ ಆತನನ್ನು ಬಂಧಿಸಿದ ಜೆ.ಬಿ.ನಗರ ಠಾಣೆ ಪೊಲೀಸರು, ವಿಶ್ವಾಸ್ನನ್ನು ವಿರುದ್ಧ ಬಿಎನ್ಎಸ್ 229 (ಎ)ರಡಿ ಪ್ರತ್ಯೇಕ ಪ್ರಕರಣ ದಾಖಲಿಸಿದರು. ಈ ಪ್ರಕರಣದ ವಿಚಾರಣೆ ನಡೆಸಿ ಆತನಿಗೆ 5 ತಿಂಗಳು ಶಿಕ್ಷೆ ವಿಧಿಸಿ ನ್ಯಾಯಾಲಯವು ಆದೇಶಿದೆ. ಆದರೆ ಆತನ ಮೇಲೆ ಹಳೇ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರೆದಿದೆ.
4 ದಿನ ಜೈಲಿಗೆ12 ವರ್ಷಗಳ ಹಿಂದೆ ಅಪರಾಧ ಪ್ರಕರಣದಲ್ಲಿ ಜಾಮೀನು ಪಡೆದು ಎಚ್ಎಎಲ್ ರಾಜು ಹೊರಬಂದಿದ್ದ. ನಂತರ ಹಳೇ ಪ್ರಕರಣದ ವಿಚಾರಣೆಗೆ ಹಾಜರಾಗದೆ ಆತ ನಿರ್ಲಕ್ಷ್ಯತನ ತೋರಿದ್ದ. ಆಗ ಆತನ ಮೇಲೆ ನ್ಯಾಯಾಲಯವು ವಾರೆಂಟ್ ಜಾರಿಗೊಳಿಸಿತು. ಅಂತೆಯೇ ತನಿಖೆಗಿಳಿದ ಹಲಸೂರು ಪೊಲೀಸರು, ಕೊನೆಗೆ ರಾಜುನನ್ನು ಬಂಧಿಸಿದ ಪೊಲೀಸರು, ಜಾಮೀನು ನಿಯಮ ಉಲ್ಲಂಘನೆ ಸಂಬಂಧ ಆತನ ಮೇಲೆ ಪ್ರತ್ಯೇಕ ಪ್ರಕರಣ ದಾಖಲಿಸಿದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ರಾಜುಗೆ 4 ದಿನಗಳು ಜೈಲು ಶಿಕ್ಷೆ ವಿಧಿಸಿತು.