ಸಾರಾಂಶ
ಉಳ್ಳಾಲ : ಪ್ರಕೃತಿಯಿಂದ ಮನುಷ್ಯ ದೂರವಾದಂತೆ ಆರೋಗ್ಯ ಸಮಸ್ಯೆಗಳು ಎದುರಾಗಲು ಶುರುವಾದವು. ಪರಿಸರ ಮತ್ತು ಪ್ರಕೃತಿಕ್ಕೆ ಹತ್ತಿರವಾದಷ್ಟು ರೋಗ ಕಡಿಮೆ ಮಾಡಬಹುದು ಎಂದು ಕರ್ನಾಟಕ ವಿದಾನಸಭೆಯ ಸಭಾಧ್ಯಕ್ಷ ಯು. ಟಿ. ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ತೊಕ್ಕೊಟ್ಟು ಕಾಪಿಕಾಡು ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ನಡೆದ ಗೇರು ಮೇಳ ಮತ್ತು ವಿಚಾರ ಸಂಕಿರಣ-2025 ಉದ್ಘಾಟಿಸಿ ಅವರು ಮಾತನಾಡಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಉಳ್ಳಾಲ ಗೇರು ಮತ್ತು ಕೊಕೋ ಅಭಿವೃದ್ಧಿ ನಿರ್ದೇಶನಾಲಯ, ಕೊಚ್ಚಿನ್ ಹಾಗೂ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಇಂದಿನ ದಿನನಿತ್ಯ ಆಹಾರ ಪದ್ಧತಿಯಿಂದ ಒಂದಲ್ಲ ಒಂದು ಸಮಸ್ಯೆ ಗೆ ಕಾರಣವಾಗುತ್ತಿದೆ. ಉಳ್ಳಾಲ ಗೇರು ತಳಿಗೆ ಉಜ್ವಲ ಭವಿಷ್ಯವಿದ್ದು ಎಲ್ಲ ಯುವಕರು, ರೈತರು ಮುಂದೆ ಬಂದು ಗೇರು ಕೃಷಿಯಂತಹ ಬೆಳೆಗಳನ್ನು ಬೆಳೆಸಬೇಕಿದೆ ಎಂದರು.
ತಾಂತ್ರಿಕ ಕೈಪಿಡಿ ಬಿಡುಗಡೆಗೊಳಿಸಿ ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಮತಾ ಡಿ.ಎಸ್ ಗಟ್ಟಿ ಮಾತನಾಡಿ, ಅಡಿಕೆ ಬೆಳೆಗೆ ಮಾತ್ರ ಬೇಡಿಕೆ ಹಾಗೂ ಫಸಲು ಇದೆ ಎಂಬ ದೃಷ್ಟಿಯಿಂದ ರೈತರು ಗೇರು ಕೃಷಿ ಯನ್ನು ಬೆಳೆಯುತ್ತಿಲ್ಲ. ಯಾವುದೇ ಖರ್ಚು ಇಲ್ಲದೇ ಪಾಳು ಬಿದ್ದ ಜಾಗದಲ್ಲಿ ಈ ತಳಿ ಬೆಳೆಸಬಹುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವಮೊಗ್ಗ ಇರುವಕ್ಕಿಯ ಕೆ.ಶಿ.ನಾ.ಕೃ.ತೋ.ವಿ.ವಿ ಕುಲಪತಿ ಡಾ.ಆರ್.ಸಿ ಜಗದೀಶ, ಇಂತಹ ಮೇಳಗಳನ್ನು ಆಯೋಜಿಸಿ ಸ್ಥಳೀಯ ರೈತರನ್ನು ಕರೆಸಿ ರೈತರಿಂದ ರೈತರನ್ನು ಪರಿಚಯಿಸಿ ಸನ್ಮಾನಿಸಿ ವಿಚಾರ ವಿನಿಮಯ ಮಾಡಲಾಗುತ್ತದೆ. ಅವರ ಸಮಸ್ಯೆಗಳನ್ನು ಆಲಿಸಲಾಗುತ್ತದೆ ಎಂದರು.
ಪ್ರತಿ ವರ್ಷ 8 ಲಕ್ಷ ಗೇರು ಸಸಿ ಹಾಗೂ 14 ಲಕ್ಷ ಮೆಣಸು ಬೆಳೆದು ವಿ.ವಿ. ಮೂಲಕ ರೈತರಿಗೆ ಕೊಡಲಾಗುತ್ತಿದೆ. ಬಿದ್ದ ಹಣ್ಣಿನಿಂದ ರಸವನ್ನು ತೆಗೆದು ಜ್ಯೂಸ್ ಮಾಡಲಾಗುತ್ತದೆ. ಸಣ್ಣ ಗೇರು ನಿಂದ ಉಪ್ಪಿನಕಾಯಿ , ಹಣ್ಣಿನಿಂದ ಜೆಲ್ಲಿ , ಜಾಮ್, ಕೆಚಪ್ ತಯಾರಿಸಬಹುದಾಗಿದೆ ಎಂದರು.
ಇರುವಕ್ಕಿ ಕೆ.ಶಿ.ನಾ.ಕೃ.ತೋ.ವಿ.ವಿ.ಯ ವಿಸ್ತರಣಾ ನಿರ್ದೇಶಕರಾದ ಡಾ.ಕೆ.ಟಿ ಗುರುಮೂರ್ತಿ ಅವರು ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸಿದರು.
ಪುತ್ತೂರು ಐ.ಸಿ.ಎ.ಆರ್.-ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ.ಜೆ.ದಿನಕರ್ ಅಡಿಗ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ, ಬ್ರಹ್ಮಾವರ ಡಿಪ್ಲೋಮಾ ಕೃಷಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಲಕ್ಷ್ಮಣ,
ಶಿವಮೊಗ್ಗ ಕೆ.ಶಿ.ನಾ.ಕೃ.ತೋ.ವಿ.ವಿ ಯ ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಪ್ರದೀಪ್ , ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ.ಎಸ್.ಆರ್.ಸೋಮಶೇಖರ್, ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ಮಂಜುನಾಥ್ ಡಿ., ಜಿಲ್ಲಾ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರಾದ ಡಾ.ಹೊನ್ನಪ್ಪ ಗೋವಿಂದ ಗೌಡ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ, ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು, ಮುಖ್ಯಸ್ಥ ಡಾ.ರಮೇಶ ಟಿ.ಜೆ,
ಹಿರಿಯ ಕ್ಷೇತ್ರಾಧೀಕ್ಷಕ ಡಾ.ಶಂಕರ್ ಎಂ.,
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಮಮತಾ ಎನ್.ಶೆಟ್ಟಿ, ಪ್ರಗತಿಪರ ಕೃಷಿಕ ಇನಾಯತ್ ಆಲಿ ಇದ್ದರು.
ಪ್ರಗತಿಪರ ಕೃಷಿಕ ಇರುವೈಲಿನ ಶಂಕರ್ ಶೆಟ್ಟಿ, ಮೂಲ್ಕಿ ಕಿಲ್ಪಾಡಿಯ ಮೊಹಮ್ಮದ್ ಆಲಿ ಇಸ್ಮಾಯಿಲ್, ಬಂಟ್ವಾಳ ಮೂಡಂಬೈಲುವಿನ ನಾರಾಯಣ ನಾಯ್ಕ್, ಸೋಮೇಶ್ವರ ಪಿಲಾರು ಮೇಗಿನಮನೆಯ ಸೀತಾರಾಮ ಶೆಟ್ಟಿ,ಸುಳ್ಯ ಐರ್ವಾನಾಡಿನ ನಮಿತಾ ಪಿ. ವಿ, ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಚಂದ್ರಾವತಿ
ಅವರನ್ನು ಸನ್ಮಾನಿಸಲಾಯಿತು.
ಕೀಟ ಶಾಸ್ತ್ರದ ಪ್ರಾಧ್ಯಾಪಕ ಡಾ.ರೇವಣ್ಣ ರೇವಣ್ಣವರ್,
ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಬೇಸಾಯ ಶಾಸ್ತ್ರದ ಪ್ರಾಧ್ಯಾಪಕ ಡಾ. ಕೆ. ವಿ. ಸುಧೀರ್ ಕಾಮತ್, ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ತೋಟಗಾರಿಕೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಚ್. ಎಸ್. ಚೈತನ್ಯ ವಿಚಾರ ಮಂಡಿಸಿದರು.
ಬ್ರಹ್ಮಾವರ ಸಹ ಸಂಶೋಧನಾ ನಿರ್ದೇಶಕ ಡಾ.ಧನಂಜಯ ಬಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲದ ಮುಖ್ಯಸ್ಥ ಡಾ. ಮಾರುತೇಶ್ ಎ.ಎಂ ಸ್ವಾಗತಿಸಿದರು. ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಉಳ್ಳಾಲದ ಪ್ರವೀಣ್ ಎಸ್. ಕುಂಪಲ ನಿರೂಪಿಸಿದರು ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲದ ಡಾ. ಆರತಿ ಯಾದವಾಡ ವಂದಿಸಿದರು.