ಸಾರಾಂಶ
ವಜ್ರ ಮಹೋತ್ಸವ । ಸಮಾರೋಪ ಸಮಾರಂಭ । ಸ್ಮರಣ ಸಂಚಿಕೆ ಬಿಡುಗಡೆ
ಕನ್ನಡಪ್ರಭ ವಾರ್ತೆ ದಾವಣಗೆರೆಕಲೆ ಮತ್ತು ಕಲಾವಿದರ ಬದ್ಧತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಅಂತಹ ಸಾಧನೆಯನ್ನು ದಾವಣಗೆರೆ ದೃಶ್ಯಕಲಾ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ಮೆರೆಯುತ್ತಿರುವುದು ನಾವು, ನೀವೆಲ್ಲರೂ ಹೆಮ್ಮೆಪಡುವ ಸಂಗತಿಯಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಶ್ಲಾಘಿಸಿದರು.
ನಗರದ ದಾವಿವಿ ದೃಶ್ಯಕಲಾ ಮಹಾ ವಿದ್ಯಾಲಯದ ಬಯಲು ರಂಗ ಮಂದಿರದಲ್ಲಿ ಕಾಲೇಜಿನ ವಜ್ರ ಮಹೋತ್ಸವದ ಸಮಾರೋಪದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಕಲೆ, ಹಾಡು, ಅಭಿನಯ ಇವೆಲ್ಲವೂ ನಮ್ಮನ್ನು ಬೇರೆಯದ್ದೇ ಜಗತ್ತಿಗೆ ಕೊಂಡೊಯ್ಯುತ್ತವೆ ಎಂದರು.ಕಾಲೇಜು ಅಭಿವೃದ್ಧಿಗೆ 12 ಲಕ್ಷ ರು. ಅನುದಾನ ನೀಡಿದ್ದು, ಇಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ಬದುಕನ್ನು ಕಟ್ಟಿಕೊಂಡು, ತಮ್ಮ ಕಲಾ ಸೇವೆಯನ್ನು ವಿಸ್ತರಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಕಾಲೇಜಿನ ವಜ್ರ ಮಹೋತ್ಸವದ ಅಂಗವಾಗಿ ಕಾಲೇಜಿನಿಂದ 84 ಕಾರ್ಯಕ್ರಮ ಆಯೋಜಿಸದ್ದು, ಹಳೆ ವಿದ್ಯಾರ್ಥಿಗಳನ್ನು ಮರಳಿ ಕಾಲೇಜಿಗೆ ತಂದಿದ್ದಲ್ಲದೇ, ಹಳೆಯ ವಾತಾವರಣವನ್ನು ಮತ್ತೆ ಹಸಿರಾಗಿಸಿದ ಎಲ್ಲರೂ ಅಭಿನಂದನಾರ್ಹರು ಎಂದು ಹೇಳಿದರು.
ಕ್ಯಾಂಟೀನ್ ಕೆಲಸಕ್ಕೆ ದೃಶ್ಯಕಲಾ ಕಾಲೇಜಿಗೆ ಬಂದಿದ್ದ ಹರೀಶ ಆಚಾರ್ಯ ಕಲಾ ನಿರ್ದೇಶಕರಾಗಿ ಮುಂಬೈನಲ್ಲಿ ಬದುಕನ್ನು ಕಟ್ಟಿಕೊಂಡು, ಯಶೋಗಾಥೆ ಮೆರೆದಿರುವುದು ನಮ್ಮ ಕಣ್ಣುಗಳ ಮುಂದಿದೆ. ಹಾಗಾಗಿ ಕಲೆಯನ್ನು ಕರಗತ ಮಾಡಿಕೊಳ್ಳಲು, ಕ್ರಿಯಾಶೀಲತೆ ಹೊಂದಲು ಕಠಿಣ ಶ್ರಮಪಡಬೇಕು. ಕಲೆ ಮತ್ತು ಕಲಾವಿದರ ಬದ್ಧತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು.ರಾಷ್ಟ್ರೀಯ ಶುದ್ಧಗಾಳಿ ಕಾರ್ಯಕ್ರಮದಡಿ ಸಸಿ ನೆಟ್ಟು, ಪೋಷಣೆ ಮಾಡಲು 3 ಲಕ್ಷ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಚಿತ್ರಕಲೆಯ ಬಗ್ಗೆ ಹೆಚ್ಚು ಮಾಹಿತಿ, ಮಾರ್ಗದರ್ಶನ ನೀಡಬೇಕು. ಮೊಬೈಲ್ ಗೀಳಿನಿಂದ ಮಕ್ಕಳನ್ನು ಹೊರ ತರಲು ಚಿತ್ರಕಲೆ ಮಾತ್ರವೇ ಸೂಕ್ತ ಪರಿಹಾರ. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿದರೆ ಉತ್ತಮ ಅಭಿರುಚಿ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಕಾಲೇಜು ಪ್ರಾಚಾರ್ಯ ಡಾ.ಜೈರಾಜ ಚಿಕ್ಕಪಾಟೀಲ ಮಾತನಾಡಿ, ವರ್ಷವಿಡೀ ಕಾಲೇಜಿನ ವಜ್ರ ಮಹೋತ್ಸವ ಸಂಭ್ರಮ ಆಚರಿಸಿದ್ದೇವೆ. ಚಿತ್ರಕಲಾ ಶಿಬಿರ, ಕಾರ್ಯಾಗಾರ, ವಿಚಾರ ಸಂಕಿರಣ, ಚಿತ್ರಕಲಾ ಹಾಗೂ ಶಿಲ್ಪಕಲಾ ಪ್ರದರ್ಶನ ಸೇರಿ, ಅನೇಕ ಕಾರ್ಯಕ್ರಮಗಳನ್ನು ಪ್ರತಿ ತಿಂಗಳು ಮಾಡಿದ್ದೇವೆ. ಕಲಾವಿದರಿಗೆ ಅಗತ್ಯ ಕೌಶಲ್ಯ ನೀಡಿದ್ದೇವೆ. ಕಲಾ ವಿದ್ಯಾರ್ಥಿಗಳಿಗೆ ದತ್ತಿ ನಿಧಿ ಸ್ಥಾಪಿಸಿದ್ದು, ಇದನ್ನು 75 ವರ್ಷಕ್ಕೆ ಕೊಂಡೊಯ್ಯುವ ಸಂಕಲ್ಪ ಮಾಡಿದ್ದೇವೆ ಎಂದರು.ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ, ಕುಲ ಸಚಿವ ಶಬ್ಬೀರ ಬಾಷಾ ಗಂಟಿ, ರಾಜ್ಯ ವಿಶ್ವವಿದ್ಯಾಲಯಗಳ ಬೋಧಕರ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ, ನಿವೃತ್ತ ಪ್ರಾಧ್ಯಾಪರ ಪ್ರೊ.ಸಿ.ಎಚ್.ಮುರುಗೇಂದ್ರಪ್ಪ, ಹಿರಿಯ ಚಿತ್ರಕಲಾವಿದ ಚಿ.ಸು.ಕೃಷ್ಣ ಸೆಟ್ಟಿ, ಎ.ಮಹಲಿಂಗಪ್ಪ, ಹಿರಿಯ ಸಾಹಿತಿ, ಪತ್ರಕರ್ತ ಬಾ.ಮ.ಬಸವರಾಜಯ್ಯ ಇತರರು ಇದ್ದರು.