ಈ ಬಾರಿ ಗೆಲ್ಲುವ ವಿಶ್ವಾಸ ಹೆಚ್ಚಿಸಿದೆ: ದಿನೇಶ್‌

| Published : May 24 2024, 12:57 AM IST

ಈ ಬಾರಿ ಗೆಲ್ಲುವ ವಿಶ್ವಾಸ ಹೆಚ್ಚಿಸಿದೆ: ದಿನೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ಜಿಲ್ಲಾ ಕೇಂದ್ರದಲ್ಲಿ ಪದವೀಧರರ ಭವನ ನಿರ್ಮಿಸಿ ಪದವೀಧರರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ತರಬೇತಿ ನೀಡಲಾಗುವುದು

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ನಾನು ಮತದಾರರ ವಿಶ್ವಾಸಗಳಿಸಿದ್ದು, ಇದರಿಂದಾಗಿ ದೃಢ ಸಂಕಲ್ಪ ಮಾಡಿ ಸ್ಪರ್ಧಿಸುತ್ತಿದ್ದೇನೆ. ಕಳೆ ಬಾರಿ ಅಲ್ಪ ಮತಗಳಿಂದ ಸೋತಿದ್ದೆ. ಈ ಬಾರಿ ಗೆಲ್ಲುವ ವಿಶ್ವಾಸ ಹೆಚ್ಚಿಸಿದೆ ಎಂದು ನೈರುತ್ಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಸ್.ಪಿ.ದಿನೇಶ್ ಹೇಳಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ ಪಕ್ಷದಿಂದ ಎರಡು ಬಾರಿ ಸ್ಪರ್ಧಿಸಿ ಅಲ್ಪಮತಗಳ ಅಂತರದಿಂದ ಸೋತಿದ್ದೆ. ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಮತದಾರರು ಭಾರೀ ಬಹುಮತದಿಂದ ನನ್ನನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ನಾನು ಆಯ್ಕೆಯಾದಲ್ಲಿ ನನಗೆ ಸಿಗುವ ಅನುದಾನವನ್ನು ಪ್ರತಿ ಜಿಲ್ಲಾ ಕೇಂದ್ರದಲ್ಲಿ ಪದವೀಧರರ ಭವನ ನಿರ್ಮಿಸಿ ಪದವೀಧರರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ತರಬೇತಿ ನೀಡಲಾಗುವುದು. ಹಾಗೂ ಅಲ್ಲಿ ಎಲ್ಲಾ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು, ಇದು ನನ್ನ ಕನಸು ಎಂದರು.

ಇತ್ತೀಚಿನ ಚುನಾವಣೆಗಳು ಕಲುಷಿತಗೊಳ್ಳುತ್ತಿವೆ. ಇದೇನಿದ್ದರು ಹಣಬಲವೋ, ಜನಬಲವೋ ಎಂಬುವುದರ ಮೇಲೆ ನಿಂತಿದೆ. ಈಗಾಗಲೇ ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಹಣವನ್ನು ಕೆಲವರು ಖರ್ಚು ಮಾಡುತ್ತಿದ್ದಾರೆ. ತೋಟಗಳು, ಕ್ಲಬ್‍ಗಳು ಭರ್ತಿಯಾಗ ತೊಡಗಿವೆ. ಹಣದ ಮೇಲೆ ಚುನಾವಣೆ ನಿಂತಿರುವುದು ಬೇಸರ ತಂದಿದೆ ಎಂದರು.

ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಹಿನ್ನೆಲೆ ಕೈ ನಾಯಕರಿಂದ ವಾಪಸ್ ಪಡೆಯಲು ಒತ್ತಡವಿತ್ತು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಾಪಸ್ ಪಡೆಯಲು ಸೂಚನೆ ನೀಡಿದ್ದರು. ರಾಜ್ಯ ಉಸ್ತುವಾರಿ ಮಯೂರ್ ಜಯಕುಮಾರ್ ಹಾಗೂ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್ ಮನೆಗೆ ಬಂದಿದ್ದರು. ನಾನು ಎಲ್ಲರಲ್ಲೂ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆಗೆ ಆಗ್ರಹ ಮಾಡಿದ್ದೆ. ಈಗ ಅನಿವಾರ್ಯವಾಗಿ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಈಗಿನ ಚುನಾವಣೆ ಸಂದರ್ಭದಲ್ಲಿ ಪದವೀಧರ ಮತದಾರರಿಗೆ ಪಾರ್ಟಿ ಆಯೋಜನೆ ಮಾಡಲಾಗುತ್ತಿದೆ. ಈ ಹಿಂದೆ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಸ್ಪರ್ಧೆ ಮಾಡಿದಾಗ ಆರೋಗ್ಯಕರ ಸ್ಪರ್ಧೆ ನಡೆಯುತ್ತಿತ್ತು. ಶಿವಮೊಗ್ಗ ಜಿಲ್ಲೆ ಎಲ್ಲಾ ಪದವೀಧರ ಮತದಾರರು ಬದಲಾವಣೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಈ ಬಾರಿ ನೈರುತ್ಯ ಪದವೀಧರ ಕ್ಷೇತ್ರದಿಂದ ನನ್ನ ಗೆಲುವು ಖಾತರಿಯಾಗಿದೆ. ಉಡುಪಿ, ಮಂಗಳೂರು ವ್ಯಾಪ್ತಿಯಲ್ಲಿ 32,000 ಮತದಾರರು ಕೊಡಗು ಭಾಗದಲ್ಲಿ 4000 ಮತದಾರರಿದ್ದಾರೆ. ಮೂಲ ಕಾಂಗ್ರೆಸಿಗರಿಗೆ ಅವಕಾಶ ಕೊಟ್ಟಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಇದೆ. ಹಣ ಬಲವೋ? ಜನ ಬಲವೋ? ಎನ್ನುವ ನಿಟ್ಟಿನಲ್ಲಿ ಈ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಪಕ್ಷೇತರ ಸ್ಪರ್ಧಿಸಿ ಗೆಲುವು ಸಾಧಿಸಿ ಅವಕಾಶ ಹೆಚ್ಚಿದೆ. ಈ ಬಾರಿ ಕರಾವಳಿ ವರ್ಸಸ್ ಮಲೆನಾಡು ಜಿಲ್ಲೆ ಆಗಲಿದೆಯಾ ಎಂದು ನನಗನಿಸುವುದಿಲ್ಲ. ವೈಯಕ್ತಿಕವಾಗಿ ಅಭ್ಯರ್ಥಿಗಳ ವರ್ಚಸ್ಸು ಕೆಲಸ ಮಾಡುವ ವ್ಯಕ್ತಿ ಆರಿಸಲಿದ್ದಾರೆ. ಪದವೀಧರ ಕ್ಷೇತ್ರದಲ್ಲಿ ಸಾಕಷ್ಟು ಹೋರಾಟ ಮಾಡಿದ್ದೇನೆ. ಈ ಹಿನ್ನೆಲೆ ತಮ್ಮ ಕೈಲಾದ ಸಹಕಾರ ನೀಡಲು ಪದವೀಧರರು ಸಿದ್ಧರಾಗಿದ್ದಾರೆ ಎಂದು ತಿಳಿಸಿದರು.

ಎಬಿವಿಪಿ ಮತ್ತು ಎನ್ಎಸ್ಎ ಸೇರಿ ಯಾವುದೇ ಪಕ್ಷದ ಸಂಘಟನೆಗಳಲ್ಲಿ ಮುಂದೇನೋ ಆಗುತ್ತೇನೆ ಎಂದು ಹೋರಾಟ ಮಾಡಬೇಡಿ. ಎಲ್ಲಾ ಪಕ್ಷಗಳಲ್ಲೂ ಮರ ಬೆಳೆದು ನಿಂತ ಮೇಲೆ ಬುಡ ಕಟ್ಟು ಮಾಡಿ ಬೇರೆಯವರಿಗೆ ಅವಕಾಶ ನೀಡುವ ಪದ್ಧತಿ ಇದೆ. ಬಿಜೆಪಿಯಲ್ಲಿ ಧರ್ಮಪ್ರಸಾದ್, ಗಿರೀಶ್ ಪಟೇಲ್ ಸೇರಿ ಹಲವರಿಗೆ ತಳ ಹಂತದಿಂದ ಬಂದ ನಾಯಕರಿಗೆ ಬೆಲೆ ಸಿಕ್ಕಿಲ್ಲ. ಆಯನೂರು ಮಂಜುನಾಥ್ ಪದವೀಧರರ ಕ್ಷೇತ್ರದ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಯಾಕೆ? ಯಾವ ಪದವೀಧರರು ಅವರಿಗೆ ರಾಜೀನಾಮೆ ಕೊಡಿ ಎಂದು ಹೇಳಿರಲಿಲ್ಲ. ಪದವೀಧರರ ಧ್ವನಿಯಾಗಿ ಕೆಲಸ ಮಾಡಲು ನಮಗೂ ಬರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಭಾಸ್ಕರ್, ಪ್ರೊ. ಕಲ್ಲಣ್ಣ, ಪ್ರೊ. ನಾರಾಯಣ್, ಈಶ್ವರ್, ವಿಜಯ್, ವೆಂಕಟಚಲ ಉಪಸ್ಥಿತರಿದ್ದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಳೆದ 10 ತಿಂಗಳ ಹಿಂದೆಯೇ ಟಿಕೆಟ್‌ ನೀಡುವುದಾಗಿ ಭರವಸೆ ನೀಡಿ ತಯಾರಿ ನಡೆಸಲು ಸೂಚಿಸಿದ್ದರು. ಆದರೆ ವರಿಷ್ಠರು ಕೆಪಿಸಿಸಿ ಅಧ್ಯಕ್ಷರ ಗಮನಕ್ಕೂ ಬರದೆ ಇತ್ತೀಚೆಗೆ ಕಾಂಗ್ರೆಸ್‍ಗೆ ಬಂದ ವ್ಯಕ್ತಿಗೆ ಟಿಕೇಟ್ ನೀಡಿದ್ದಾರೆ. ನಾನು ಈಗಾಗಲೇ 16 ಸಾವಿರ ಮತದಾರರಿಗೆ ಪತ್ರ ಮೂಲಕ ಸ್ಪರ್ಧೆ ಮಾಡುವ ಬಗ್ಗೆ ಮನವಿ ಮಾಡಿಕೊಂಡಿದ್ದು ಅಲ್ಲದೇ ರಿಫ್ಲೇ ಕಾರ್ಡ್ ಕಳುಹಿಸಿದ್ದೆ. ಅವರು ಸ್ಪರ್ಧೆ ಮಾಡುವಂತೆ ಸೂಚಿಸಿದ್ದರಿಂದ ಸ್ಪರ್ಧೆ ಮಾಡಿದ್ದೇನೆ. ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರು ಜೈರಾಮ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹಾಗೂ ಇನ್ನಿತರರು ನನಗೆ ಮನವೋಲಿಸಿದರು. ಆದರೂ, ನಾನು ಸ್ಪರ್ಧೆ ಮಾಡಿದ್ದೇನೆ. ಮನವೋಲಿಸಿದ ಎಲ್ಲರಿಗೂ ನಾನು ಕ್ಷಮೆ ಕೇಳುತ್ತೇನೆ.

ಎಸ್‌.ಪಿ.ದಿನೇಶ್‌, ನೈರುತ್ಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ.