ಮೈಸೂರಿಗೆ ಸ್ವಚ್ಛ ನಗರಿ ಹೆಸರು ಬರಲು ಪೌರಕಾರ್ಮಿಕರ ಕೊಡುಗೆ ಅಪಾರ

| Published : Jun 21 2025, 12:49 AM IST

ಮೈಸೂರಿಗೆ ಸ್ವಚ್ಛ ನಗರಿ ಹೆಸರು ಬರಲು ಪೌರಕಾರ್ಮಿಕರ ಕೊಡುಗೆ ಅಪಾರ
Share this Article
  • FB
  • TW
  • Linkdin
  • Email

ಸಾರಾಂಶ

ಸಾಂಸ್ಕೃತಿಕನಗರಿ ಮೈಸೂರಿಗೆ ಸ್ವಚ್ಛ ನಗರಿ ಎಂದು ಹೆಸರು ಬರಲು ಪೌರಕಾರ್ಮಿಕರ ಕೊಡುಗೆ ಅಪಾರವಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಸಾಂಸ್ಕೃತಿಕನಗರಿ ಮೈಸೂರಿಗೆ ಸ್ವಚ್ಛ ನಗರಿ ಎಂದು ಹೆಸರು ಬರಲು ಪೌರಕಾರ್ಮಿಕರ ಕೊಡುಗೆ ಅಪಾರವಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.

ನಗರದ ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪೌರಕಾರ್ಮಿಕರಿಗೆ ಕಾಯಂ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು, 219 ಪೌರಕಾರ್ಮಿಕರಿಗೆ ಕಾಯಂ ನೇಮಕಾತಿ ಪತ್ರ ವಿತರಿಸಿ ಮಾತನಾಡಿದರು.

ಕರ್ನಾಟಕದಲ್ಲಿ 32 ಸಾವಿರ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ 22 ಸಾವಿರ ಪೌರಕಾರ್ಮಿಕರನ್ನು ಸರ್ಕಾರ ಕಾಯಂಗೊಳಿಸಲಾಗಿದೆ. ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳು ಕಾಯಂಗೊಂಡಿರುವ ಪೌರಕಾರ್ಮಿಕರಿಗೂ ಸಿಗಲಿದೆ ಎಂದರು.

ಇಂದು ನೀವೆಲ್ಲಾ ಈಗ ಸರ್ಕಾರಿ ನೌಕರರಾಗಿ ಕಾಯಂ ಆಗುತ್ತಿದ್ದೀರಿ. ಕರ್ನಾಟಕದಲ್ಲಿ ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯ ನಿಮಗೂ ಸಿಗುತ್ತದೆ. ನಿಮ್ಮನ್ನು ಸಿಂಗಾಪುರ್ ಗೂ ಟ್ರೈನಿಂಗ್ ಕಳಿಸಿದ್ದೇನೆ. ಸಂವಿಧಾನದ ಆಶಯವೇ ಕಟ್ಟ ಕಡೆಯ ಮನುಷ್ಯನಿಗೆ ಮೊಟ್ಟ‌ ಮೊದಲ‌ ಆದ್ಯತೆ ನೀಡುವುದೇ ಆಗಿದೆ. ನಮ್ಮ ಸರ್ಕಾರ ಪೌರಕಾರ್ಮಿಕರ ಪರವಾಗಿದ್ದು, ನಿಮಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುತ್ತೇವೆ ಎಂದು ಅವರು ಹೇಳಿದರು.

ನಿಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಎಲ್ಲರೂ ವಿದ್ಯಾಂತರಾಗಬೇಕು. ಸರ್ಕಾರದಿಂದ ಅನೇಕ ಯೋಜನೆಗಳಿವೆ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಶಾಸಕ ತನ್ವೀರ್ ಸೇಠ್ ಮಾತನಾಡಿ, ಇಡೀ ರಾಷ್ಟ್ರದಲ್ಲಿ ಲಕ್ಷಾಂತರ ಪೌರಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟು ನಡೆದುಕೊಂಡಿದ್ದರಿಂದ ನಿಮ್ಮ ಕನಸು ನನಸಾಗಿದೆ. ಸರ್ಕಾರಿ ಸಂಸ್ಥೆಗಳಲ್ಲಿ ಪೌರಕಾರ್ಮಿಕರ ಗುತ್ತಿಗೆ ಪದ್ಧತಿ ಇರಬಾರದು ಎಂದು ನಿರ್ಧರಿಸಿದ್ದರೂ ಸಾಕಾರವಾಗಿಲ್ಲ. ನಂತರ ನಡೆದ ಹೋರಾಟವನ್ನು ಅರ್ಥ ಮಾಡಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿಟ್ಟ ತೀರ್ಮಾನಕ್ಕೆ ಬಂದು ನಿಮ್ಮನ್ನು ಕಾಯಂ ಮಾಡಿದ್ದಾರೆ ಎಂದು ತಿಳಿಸಿದರು.

ಕಾರ್ಮಿಕರು ಎಂದರೆ ಕಸ ವಿಲೇವಾರಿ ಮಾಡುವವರಷ್ಟೇ ಅಲ್ಲ. ಕೇವಲ ಕೆಲಸ ಕಾಯಂ ಮಾಡುವುದಷ್ಠೇ ಅಲ್ಲ. ಸಂಬಳ ಮಾತ್ರವಲ್ಲದೇ ಇನ್ಸೂರೆನ್ಸ್ ಕೂಡ ಮಾಡಲಾಗಿದೆ. ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಜನಸಂಖ್ಯೆ ಒಳಗೊಂಡಿದ್ದು, ಸ್ವಚ್ಛತೆ ಕಾಪಾಡಿಕೊಳ್ಳಬೇಕಿದೆ. ಸ್ವಚ್ಛತೆ ಮಾಡಿದ ಪಟ್ಟ ಪೌರಕಾರ್ಮಿಕರಿಗೆ ಸಲ್ಲಬೇಕು ಎಂದು ಅವರು ಹೇಳಿದರು.

ಪೌರಕಾರ್ಮಿಕರ ಶ್ರಮದಿಂದಲೇ ದಸರಾ ಬಂದಾಗ ನಮ್ಮ ನಗರಕ್ಕೆ ಬರುವಂತಹ ಅನೇಕ ರಾಜ್ಯಗಳಿಂದ, ವಿದೇಶಗಳಿಂದ, ಪ್ರವಾಸಿಗರು ಏಕಕಾಲಕ್ಕೆ ಮೈಸೂರಿಗೆ ಆಗಮಿಸುತ್ತಾರೆ. ನಮ್ಮ ಸ್ವಚ್ಛತೆ ದಿನನಿತ್ಯ ಮಾಡುವಂತಹ ಕೆಲಸ ಬಂದಾಗ ಆ ಶ್ರಮ ಪೌರಕಾರ್ಮಿಕರ ಶ್ರಮದಿಂದ. ದಸರಾ ಉತ್ಸವ ಕೂಡ ಮೆರಗನ್ನು ತಂದು ಕೊಡುವಂತದ್ದು ಪೌರಕಾರ್ಮಿಕರ ಸ್ವಚ್ಛ ಕಾರ್ಯದಿಂದ ಎಂದರು.

ಮಾಜಿ ಮೇಯರ್ ನಾರಾಯಣ್, ಪ್ರಾದೇಶಿಕ ಆಯುಕ್ತ ಡಿ.ಎಸ್. ರಮೇಶ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ನಗರ ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಆಸಿಫ್ ಮೊದಲಾದವರು ಇದ್ದರು.

ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ 150 ಪೌರಕಾರ್ಮಿಕ ಕುಟುಂಬಗಳಿಗೆ ವಸತಿ ಸೌಲಭ್ಯವನ್ನು ಅತಿ ಶೀಘ್ರವಾಗಿ ನೀಡಲಾಗುವುದು. ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 89 ಜನ ಪೌರಕಾರ್ಮಿಕರು ವಿವಿಧ ಕಾರಣಗಳಿಂದ ನಿಧನರಾಗಿದ್ದಾರೆ. ಅವರ ಕುಟುಂಬಕ್ಕೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸಲು ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

- ಡಾ.ಎಚ್.ಸಿ. ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವಕಾಯಂ ಆಗಿರುವವರ ಮೇಲೆ ಒಂದು ಜವಾಬ್ದಾರಿ ಇದೆ. ಕಾಯಂ ಆಗಿದ್ದು ಕೂಡಲೇ ನನಗೆ ಸಂಬಳ ಬರುತ್ತದೆ. ಇನ್ನೂ ಹೆಚ್ಚಿನ ಕೆಲಸದಲ್ಲಿ ಭಾಗಿಯಾಗಿ. ನಿಮ್ಮ ಹಿಂದೆ ಬರುವಂತಹ ಇತರೆ ಪೌರಕಾರ್ಮಿಕರಿಗೆ ಮಾರ್ಗದರ್ಶನ ನೀಡಬೇಕು. ಹೋರಾಟದ ಫಲ ಸ್ವಲ್ಪ ಸಿಕ್ಕಿದೆ. ಪೌರಕಾರ್ಮಿಕರು ಒಂದಾಗಿದ್ದರೆ ಮಾತ್ರವೇ ಕೆಲಸಕ್ಕೆ ಜಯ ಸಿಗುವುದು. ನೀವು ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡಿದಾಗ ನಾವು ಎದೆತಟ್ಟಿ ಹೇಳಬಹುದು ಕೆಲಸ ಇನ್ನೂ ಜಾಸ್ತಿ ಆಗುತ್ತದೆ.

- ತನ್ವೀರ್ ಸೇಠ್, ಶಾಸಕದೇಶದ ಯಾವುದೇ ರಾಜ್ಯದಲ್ಲೂ ಕಾಯಂಗೊಳಿಸುವಿಕೆ ಆಗಿಲ್ಲ. ಎಷ್ಟೋ ಕಡೆಗಳಲ್ಲಿ ಗುತ್ತಿಗೆ ಪದ್ಧತಿಯಲ್ಲೇ ರದ್ದುಪಡಿಸಲಾಯಿತು. ಈಗಿನ ಸರ್ಕಾರ ಪೌರಕಾರ್ಮಿಕರನ್ನು ಕಾಯಂ ಮಾಡಿದೆ. ಎಲ್ಲಾ ಪೌರಕಾರ್ಮಿಕರು ಇದನ್ನು ಸದುಪಯೋಗಪಡಿಸಿಕೊಂಡು ನಿಮ್ಮ ಮಕ್ಕಳಿಗೂ ಭವಿಷ್ಯವನ್ನು ರೂಪಿಸುವಂತೆ ಕೆಲಸವನ್ನು ಮಾಡಬೇಕು.

- ನಾರಾಯಣ್, ಮಾಜಿ ಮೇಯರ್