ಸಾರಾಂಶ
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿ.ಸಿ.ಪಿ.ಎ.ಎಸ್.) ಇದರ ಆಶ್ರಯದಲ್ಲಿ ದೇವದಾಸಿಯರ ಕುರಿತು, ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿ.ಎಚ್.ಯು.) ಹಿರಿಯ ಕಲಾ ಇತಿಹಾಸಕಾರ್ತಿ ಡಾ. ಬಿಂದಾ ಪರಾಂಜಪೆ ಉಪನ್ಯಾಸ ನೀಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಐತಿಹಾಸಿಕವಾಗಿ ದೇವದಾಸಿಯರು ಮತ್ತು ತವಾಯಿಫ್ಗಳು ಭಾರತದಲ್ಲಿ ಸಂಗೀತ, ನೃತ್ಯ ಮತ್ತು ಕಲೆಗಳ ವಿಕಾಸಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ, ಆದರೆ ಅವರನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿ.ಎಚ್.ಯು.) ಹಿರಿಯ ಕಲಾ ಇತಿಹಾಸಕಾರ್ತಿ ಡಾ. ಬಿಂದಾ ಪರಾಂಜಪೆ ಹೇಳಿದರು.ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿ.ಸಿ.ಪಿ.ಎ.ಎಸ್.) ಇದರ ಆಶ್ರಯದಲ್ಲಿ ದೇವದಾಸಿಯರ ಕುರಿತು, ವಿಶೇಷ ಉಪನ್ಯಾಸ ನೀಡಿದರು.
ವಾಸ್ತವವಾಗಿ ದೇವದಾಸಿಯರು ಮತ್ತು ತವೈಫ್ಗಳು ಸಂಗೀತ ಮತ್ತು ನೃತ್ಯವನ್ನು ಉತ್ತಮಗೊಳಿಸಿದ್ದು, ಅದು ಇಂದು ಶಾಸ್ತ್ರೀಯ ಸ್ಥಾನಮಾನವನ್ನು ಗಳಿಸಿದೆ. ಶಿಷ್ಟಾಚಾರಗಳನ್ನು ಕಲಿಯಲು ಮತ್ತು ಶಿಷ್ಟಾಚಾರಗಳನ್ನು ಕಂಡುಕೊಳ್ಳಲು ಚಿಕ್ಕ ಮಕ್ಕಳನ್ನು ಅವರ ಬಳಿಗೆ ಕಳುಹಿಸುವ ಕಾಲವಿತ್ತು. ಆ ದಿನಗಳಲ್ಲಿ ಅವರು ಗೌರವ ಮತ್ತು ಸ್ವಾಭಿಮಾನವನ್ನು ಅನುಭವಿಸಿದರು. ದೇವದಾಸಿಯರು ಮತ್ತು ತವೈಫ್ಗಳು ನಮ್ಮ ಸಂಯೋಜಿತ ಸಂಸ್ಕೃತಿಯ ಭಾಗವಾಗಿದ್ದಾರೆ ಎಂದು ಹೇಳಿದರು.ನಂತರ ಬಂದ ಬ್ರಿಟಿಷರು ಅದನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಿಕೊಂಡರು. ಅವರ ವೃತ್ತಿಯನ್ನು ಅಪಮೌಲ್ಯಗೊಳಿಸಿದರು, ಇಂದು ದುರದೃಷ್ಟವಶಾತ್, ಸಮಾಜವು ಅವರ ವಿರುದ್ಧ ತಾರತಮ್ಯದ ಭಾವನೆಯನ್ನು ಹೊಂದಿದೆ ಎಂದು ಬಿಂದಾ ಪಾರಂಜಪೆ ವಿಷಾದಿಸಿದರು.
ಜಿ.ಸಿ.ಪಿ.ಎ.ಎಸ್. ಮುಖ್ಯಸ್ಥ ಡಾ. ವರದೇಶ್ ಹಿರೇಗಂಗೆ ಸಂವಾದ ನಡೆಸಿಕೊಟ್ಟರು. ಡಾ. ಭ್ರಮರಿ ಶಿವಪ್ರಕಾಶ್ ವಂದಿಸಿದರು. ರಂಜನಿ ಸ್ಮಾರಕ ಟ್ರಸ್ಟ್ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲು ಡಾ. ಬಿಂದಾ ಅವರು ಉಡುಪಿಗೆ ಆಗಮಿಸಿದ್ದಾರೆ.