ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಶಿಕ್ಷಣ ಕ್ಷೇತ್ರಕ್ಕೆ ಲಿಂಗಾಯತ ಮಠಗಳ ಕೊಡುಗೆ ಅಪಾರವಾಗಿದೆ ಎಂದು ನಿಡಸೋಸಿಯ ಸಿದ್ಧಸಂಸ್ಥಾನ ಮಠದ ಡಾ.ಶ್ರೀಮನ್ನಿರಂಜನ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿ ಹೇಳಿದರು.ಪಟ್ಟಣದ ಪದ್ಮಾ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಮಟ್ಟದ ಲಿಂಗಾಯತ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಲಿಂಗಾಯತ ಮಠಗಳು ಶಿಕ್ಷಣದ ಜೊತೆಗೆ ವಸತಿ ನಿಲಯಗಳನ್ನು ಪ್ರಾರಂಭಿಸಿದ ಹಿನ್ನೆಲೆಯಲ್ಲಿ ಶಿಕ್ಷಣ ವ್ಯವಸ್ಥೆ ಉತ್ತರ ಕರ್ನಾಟಕದಲ್ಲಿ ತುಂಬಾ ಚೆನ್ನಾಗಿ ಬೆಳೆದುಕೊಂಡು ಬಂದಿದೆ ಎಂದರು.
ಲಿಂಗಾಯತ ಧರ್ಮ ಜಗತ್ತಿನಲ್ಲಿಯೇ ಅತ್ಯಂತ ಸರಳ ಧರ್ಮವಾಗಿದ್ದು ಪ್ರತಿಯೊಬ್ಬರು ಎದೆಯ ಮೇಲೆ ಲಿಂಗಧಾರಣೆ ಮಾಡಿಕೊಳ್ಳಬೇಕು. ಹಣೆಗೆ ವಿಭೂತಿ ಧರಿಸಬೇಕೆಂದು ಸಲಹೆ ನೀಡಿದ ಅವರು ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ಮಠಗಳ ಏಳ್ಗೆಗೆ ಅನುದಾನ ನೀಡಿದ್ದು ಬೇರೆ ಸರ್ಕಾರದ ಆಡಳಿತಾವಧಿಯಲ್ಲಿ ಅಷ್ಟೊಂದು ಕೊಡುಗೆ ನೀಡಿಲ್ಲ ಎಂದು ತಿಳಿಸಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯಧ್ಯಕ್ಷ ಸೋಮನಗೌಡ ಪಾಟೀಲ ಮಾತನಾಡಿ, ಲಿಂಗಾಯತ ಸಮಾಜಕ್ಕೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. 80 ಉಪ ಪಂಗಡಗಳನ್ನು ಹೊಂದಿರುವ ಸಮಾಜ ಮೀಸಲಾತಿ ಪಡೆಯಲು ಹರಸಾಹಸ ಪಡುವಂತಾಗಿದೆ. ಸಾಕಷ್ಟು ಶಿಕ್ಷಣ ಪಡೆದರೂ ಸರ್ಕಾರಿ ನೌಕರಿ ಗಗನಕುಸುಮವಾಗುತ್ತಿದೆ. ಹಾಗಾಗಿ ಸಮಾಜದ ಜನರು ಒಗ್ಗಟ್ಟಾಗಿ ಹೋರಾಟ ಮಾಡಬೇಕೆಂದರು.
ಸಾನ್ನಿಧ್ಯ ವಹಿಸಿದ್ದ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ಜಗಜ್ಯೋತಿ ಬಸವಣ್ಣ ಅವರು ನೂರಾರು ಶರಣರೊಂದಿಗೆ ಅನುಭವ ಮಂಟಪ ಕಟ್ಟಿ ಜಗತ್ತಿಗೆ ಪ್ರಜಾಪ್ರಭುತ್ವದ ಮಾದರಿಯನ್ನು ಮೊದಲ ಭಾರಿಗೆ ಪರಿಚಯಿಸಿದರು. ಕೆಲಸಕ್ಕೆ ಕಾಯಕ ಎಂದು ಬೋಧಿಸಿದರು. ಭೋಜನಕ್ಕೆ ದಾಸೋಹ ಎಂದು ಕರೆದು ಇವರೆಡರ ಮಹತ್ವವನ್ನು ವಚನಗಳ ಮೂಲಕ ಜಗತ್ತಿಗೇ ಸಾರಿದರು ಎಂದು ಹೇಳಿದರು.ಹರಿಹರ ಪೀಠದ ವಚನಾನಂದ ಸ್ವಾಮೀಜಿ ಲಿಂಗಾ ದೀಕ್ಷಾ ಕಾರ್ಯಕ್ರಮ ನಡೆಸಿಕೊಟ್ಟರು. ಬಳಿಕ ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ಪುತ್ಥಳಿಯಿಂದ ಕಾರ್ಯಕ್ರಮ ನಿಯೋಜಿತ ಸ್ಥಳದವರೆಗೆ ನೂರಾರು ಮಹಿಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಪಂಚಮಸಾಲಿ ಲಿಂಗಾಯತ ಸಮಾಜದ ಅಧ್ಯಕ್ಷ ಅಣ್ಣಪ್ಪ ಹಳಿಜೋಳೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ, ಹತ್ತರಗಿಯ ಸಿದ್ದೇಶ್ವರ ಸ್ವಾಮೀಜಿ, ಬೆಂಡವಾಡದ ಗುರುಸಿದ್ಧ ಸ್ವಾಮೀಜಿ, ನಂದಿಕುರಳಿಯ ವೀರಭದ್ರ ಸ್ವಾಮೀಜಿ, ಲಕನೌದ ಬಾಲಯೋಗಿ ಮಹಾರಾಜ, ಬೆಳಗಾವಿ ಜಿಲ್ಲಾಧ್ಯಕ್ಷ ಪರಗೌಡ ದರೂರ, ನವದೆಹಲಿಯ ರಾಷ್ಟ್ರವಾದ ರಾಷ್ಟ್ರೀಯ ಅಧ್ಯಕ್ಷ ರಿತೇಶ ತೋಮರ, ಕಲ್ಮೇಶ ಕಿವಡ, ಮಲ್ಲಪ್ಪ ಕಲ್ಲಟ್ಟಿ, ಶಂಕರಗೌಡ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ಸುನೀಲ ಪಾಟೀಲ, ಮೀನಾಕ್ಷಿ ಪಾಟೀಲ, ಅನಸೂಯಾ ಚನ್ನವರ ಉಪಸ್ಥಿತರಿದ್ದರು.