ಸಾರಾಂಶ
ಬಸಮ್ಮ ಎಸ್.ಎಂ.ಕೊಟ್ರಯ್ಯ ದತ್ತಿ ಕಾರ್ಯಕ್ರಮದಲ್ಲಿ 12ನೇ ಶತಮಾನದ ಬಸವ ದರ್ಶನ ಕುರಿತು ಉಪನ್ಯಾಸ
ಕನ್ನಡಪ್ರಭ ವಾರ್ತೆ ಕೊಟ್ಟೂರುಸರಳ ಕನ್ನಡ ಭಾಷೆಯಲ್ಲಿ 12 ನೇ ಶತಮಾನದಲ್ಲಿ ಅಸಂಖ್ಯಾತ ಶರಣರಿಂದ ರಚನೆಯಾಗಿರುವ ವಚನ ಸಾಹಿತ್ಯ ಇಡೀ ವಿಶ್ವಕ್ಕೆ ದೊಡ್ಡ ಕೊಡುಗೆಯಾಗಿದೆ ಎಂದು ಕನ್ನಡ ಪ್ರಾಧ್ಯಾಪಕಿ ಸಿ.ಎಂ. ಸಿಂಧು ಗಿರೀಶ ಹೇಳಿದರು.
ಪಟ್ಟಣದ ಕೊಟ್ಟೂರು ಕಟ್ಟೇಮನಿ ಭೂತ ಬುಜಂಗ ಹಿರೇಮಠದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಲಿಂ.ಸೊನ್ನದ ಮರುಡಿ ಮಠದ ಬಸಮ್ಮ ಎಸ್.ಎಂ.ಕೊಟ್ರಯ್ಯ ದತ್ತಿ ಕಾರ್ಯಕ್ರಮದಲ್ಲಿ 12ನೇ ಶತಮಾನದ ಬಸವ ದರ್ಶನ ಕುರಿತು ಉಪನ್ಯಾಸ ನೀಡಿದರು.ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳ ಕನ್ನಡಯಲ್ಲಿ ವಚನಗಳನ್ನು ಬಸವಣ್ಣನವರು ಸೇರಿದಂತೆ ಅನೇಕರು ರಚಿಸಿದ್ದರು. ಬಸವಣ್ಣನವರ ಅಂದಿನ ಸಾಮಾಜಿಕ ನ್ಯಾಯ ಇಂದಿಗೂ ಮಾದರಿಯಾಗಿದೆ. ವ್ಯಕ್ತಿ ಮತ್ತು ಸಮಾಜ ಕಲ್ಯಾಣ ಎಂಬ ಎರಡು ಗಿರಿ ಒಳಗೊಂಡಿರುವುದೇ ವಚನ ಸಾಹಿತ್ಯವಾಗಿದೆ. 24700 ವಚನಗಳನ್ನು ಶರಣರು ರಚಿಸಿದ್ದರು. ಬಸವಣ್ಣನವರು 1.90 ಲಕ್ಷ ಜಂಗಮರನ್ನು ಕಲ್ಯಾಣಕ್ಕೆ ಕರೆ ತಂದಿದ್ದರು. ಬಸವಣ್ಣ ಮತ್ತು ಅವರ ವಚನ ಸಾಹಿತ್ಯ ಟೀಕಿಸುವ ಅನೇಕ ಕಾರ್ಯಗಳು ಬಹು ಹಿಂದಿನಿಂದಲೂ ನಡೆದಿದ್ದವು. ಆದರೆ ಬಸವಣ್ಣನವರು ಹಾಕಿಕೊಟ್ಟ ಸಾಮಾಜಿಕ ಸಮಾನತೆ, ಕಲ್ಯಾಣ ಕ್ರಾಂತಿ ಯಾರಿಂದಲೂ ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ನಿವೃತ್ತ ಎಇಒ, ದತ್ತಿ ದಾನಿ ಎಚ್.ಹಾಲಯ್ಯ ಮಾತನಾಡಿ, ಶರಣ ಸಾಹಿತ್ಯ ಪರಿಷತ್ ಸ್ಥಾಪನೆ ಉದ್ದೇಶ ಸಾರ್ಥಕವಾಗಬೇಕಾದರೆ ಎಲ್ಲ ಶರಣ ಹಾಗೂ ವಚನ ಜನರಿಗೆ ಅರ್ಥ ಮಾಡಿಸಬೇಕಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ತಾಲೂಕು ಶಸಾಪ ಅಧ್ಯಕ್ಷ ದೇವರಮನಿ ಕರಿಯಪ್ಪ ಮಾತನಾಡಿ, ಶರಣರ ವಚನಗಳ ಸಾರ ಸಮಾಜಕ್ಕೆ ತಿಳಿಸುವುದು ಅವಶ್ಯವಾಗಿದೆ. ಪರಿಷತ್ನ ಕಾರ್ಯಕ್ರಮಗಳ ಮೂಲಕ ಶರಣ ಪರಿಚಯ ಮಾಡುವ ಕಾರ್ಯ ನಡೆಸಲಾಗುತ್ತಿದೆ ಎಂದರು.
ಪರಿಷತ್ ಖಜಾಂಚಿ ಎ.ಚಂದ್ರಣ್ಣ, ತಾಲೂಕು ಕಸಾಪ ಅಧ್ಯಕ್ಷ ದೇವರಮನಿ ಕೊಟ್ರೇಶ್, ನಿವೃತ್ತ ಸಂಸ್ಕೃತ ಉಪನ್ಯಾಸಕ ಡಿ. ಕೊಟ್ರೇಶ್, ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ. ಸುಜಾತ ಮಾತನಾಡಿದರು. ಪರಿಷತ್ನ ಉಪಾಧ್ಯಕ್ಷೆ ಎಸ್.ಎಂ. ನಳಿನ ದತ್ತಿ ಪರಿಚಯ ಮಾಡಿದರು.ಸದಸ್ಯ ಮತ್ತಿಹಳ್ಳಿ ನಾಗರಾಜ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಹೊಂಬಾಳೆ ಮಂಜುನಾಥ, ಸಹ ಕಾರ್ಯದರ್ಶಿ ಜಿ.ಸಿದ್ದಣ್ಣ ನಿರ್ವಹಿಸಿದರು.