ಕೃಷಿ ಪರಂಪರೆ ಹೊಂದಿರುವ ಭಾರತ ದೇಶದಲ್ಲಿ ನೆಲ ತಾಯಿ ಎಂದು ನಂಬಿ ಕ್ಷಾತ್ರ ಪರಂಪರೆಗೆ ಸಂಸ್ಕೃತಿ ಸರಂಕ್ಷಣೆ ಹಿಂದೂಗಳು ಒಗ್ಗಟ್ಟಾಗಿರುವುದರಿಂದ ಭಾರತ ದೇಶ ಬಲಿಷ್ಠ ಆರ್ಥಿಕ ಶಕ್ತಿಯಾಗಿ ರೂಪುಗೊಂಡಿದೆ ಎಂದು ಸುಳ್ಯದ ಉದ್ಯಮಿ ನವೀನ ಸುಬ್ರಹ್ಮಣ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಕೃಷಿ ಪರಂಪರೆ ಹೊಂದಿರುವ ಭಾರತ ದೇಶದಲ್ಲಿ ನೆಲ ತಾಯಿ ಎಂದು ನಂಬಿ ಕ್ಷಾತ್ರ ಪರಂಪರೆಗೆ ಸಂಸ್ಕೃತಿ ಸರಂಕ್ಷಣೆ ಹಿಂದೂಗಳು ಒಗ್ಗಟ್ಟಾಗಿರುವುದರಿಂದ ಭಾರತ ದೇಶ ಬಲಿಷ್ಠ ಆರ್ಥಿಕ ಶಕ್ತಿಯಾಗಿ ರೂಪುಗೊಂಡಿದೆ ಎಂದು ಸುಳ್ಯದ ಉದ್ಯಮಿ ನವೀನ ಸುಬ್ರಹ್ಮಣ್ಯ ಹೇಳಿದರು. ಐಗೂರು ಮಂಡಲದ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಭಾರತ ದೇಶದ ಮೇಲೆ 1000 ವರ್ಷಗಳಿಗೂ ಅಧಿಕ ಕಾಲ ವಿದೇಶಿಯರು ದಂಡೆತ್ತಿ ಬಂದು ದೇವಾಲಯಗಳನ್ನು ಧ್ವಂಸಗೊಳಿಸಿ, ವಜ್ರ ವೈಡೂರ್‍ಯಗಳನ್ನು ಕೊಂಡೊಯ್ದರು. ಆಯಾ ಕಾಲದಲ್ಲಿ ಹುಟ್ಟಿದ ಸಮಾಜ ಸುಧಾರಕರು, ರಾಜ ವಂಶಸ್ಥರು ಭಾರತದ ಪುನರ್ ನಿರ್ಮಾಣದಲ್ಲಿ ಸಂಸ್ಕೃತಿ, ಪರಂಪರೆ, ಕೌಟುಂಬಿಕ ಮೌಲ್ಯಗಳನ್ನು ಉಳಿಸಿಕೊಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಸಮಾಜದೊಳಗಿನ ಕೊರತೆಯನ್ನು ನೀಗಿಸಿ ಆಯಾ ಕಾಲಘಟ್ಟದಲ್ಲಿ ಶಿವಾಜಿ ಮಹಾರಾಜರು, ಶ್ರೀ ನಾರಾಯಣ ಗುರುಗಳು ಈ ನೆಲದ ಸಂಸ್ಕೃತಿ ಪರಂಪರೆಯನ್ನು ಉಳಿಸಿದ್ದಾರೆ. ಹಿಂದೂಗಳಲ್ಲಿನ ಜಾತಿ ವ್ಯವಸ್ಥೆ ಕೀಳು ಮೇಲು ಭಾವನೆಯನ್ನು ತೊರೆದು ಎಲ್ಲರೂ ಒಗ್ಗಟ್ಟಾಗಿ ಕೌಟುಂಬಿಕ ಮೌಲ್ಯಗಳನ್ನು ಕಟ್ಟಿಕೊಂಡು ಬದುಕಿದರೆ ಭಾರತ ದೇಶ ಇನ್ನಷ್ಟು ಸದೃಢವಾಗಲಿದೆ ಎಂದು ನುಡಿದರು.

ಆರ್ಶಿವಚನ ನೀಡಿದ ಅರಕಲಗೋಡು ಬಸವಪಟ್ಟಣ ತೋಟಂದಾರ್ಯ ಮಠದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ, ಸನಾತನ ಪರಂಪರೆ ಉಳಿವಿಗಾಗಿ ಭಾರತ ಅಸ್ತಿತ್ವ ಕಾಪಾಡಲು ಹಿಂದೂ ಸಂಸ್ಕೃತಿ, ಆಚಾರ ವಿಚಾರ ಉಳಿಸಲು 100 ವರ್ಷಗಳ ಹಿಂದೆ ಸ್ಥಾಪನೆಯಾದ ಆರ್‌ಎಸ್‌ಎಸ್ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಕೌಟುಂಬಿಕ ಮೌಲ್ಯಗಳ ಪ್ರಭೋಧನೆ, ಸಾಮರಸ್ಯ ಬದುಕು, ಸ್ವದೇಶಿ ಕಲ್ಪನೆ, ಪರಿಸರ ರಕ್ಷಣೆಯಿಂದ ಹಿಂದೂ ಸಮಾಜ ವಿಶ್ವಕ್ಕೆ ಮಾದರಿಯಾಗಿ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ನುಡಿದರು.ಭಾರತ ಮಾತೆಯನ್ನು ಪೂಜಿಸುವ ಹಿಂದೂ ಮಹಿಳೆಯರು ಮಕ್ಕಳಿಗೆ ಕೌಟಂಬಿಕ ಮೌಲ್ಯಗಳು ಧರ್ಮ ನಿಷ್ಠೆ ಸಂಸ್ಕಾರಗಳನ್ನು ಸಣ್ಣ ಪ್ರಯಾದಲ್ಲೇ ಕಲಿಸಿಕೊಡಬೇಕು. ಮಕ್ಕಳಲ್ಲಿ ಮಾತೃ ವಾತ್ಸಲ್ಯ, ಕೌಟುಂಬಿಕ ಬದುಕಿನ ಜೀವನ ಶೈಲಿ ಕಲಿಸದಿದ್ದರೆ ವೃದ್ಯಾಪದಲ್ಲಿ ಹಿರಿಯ ಜೀವಗಳಿಗೆ ಆಶ್ರಯ ಇಲ್ಲದಂತಾಗುತ್ತದೆ. ವೈಚಾರಿಕ ಸೋಗಲಾಡಿತನದಿಂದ ಹಿಂದೂಗಳಲ್ಲೇ ಕೆಲವು ರಾಜಕಾರಣಿಗಳು ವಿದೇಶದ ನೆಲಗಳಲ್ಲಿ ಭಾರತ ದೇಶದ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡುವುದು ಖಂಡನೀಯ ಎಂದು ಹೇಳಿದರು. ಹಿಂದೂ ಸಂಗಮ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸೈನಿಕ ಎಂ.ಎಸ್. ಕಾಳಪ್ಪ ಮಾತನಾಡಿ, ಧರ್ಮ ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ ಹಿಂದೂ ಧರ್ಮದಲ್ಲಿ ಸಂಕಷ್ಟ ಕಾಲದಲ್ಲಿ ಶಂಕರಾಚಾರ್ಯರು, ಮಾದವಚಾರ್ಯರು, ಶಿವಾಜಿ ಮಹಾರಾಜರು ಸೇರಿದಂತೆ ಅಪಾರ ಸಮಾಜ ಸುಧಾರಕರು ಕೊಡುಗೆ ನೀಡಿರುವುದನ್ನು ಸ್ಮರಿಸಬಹುದಾಗಿದೆ. ಭಗವದ್ಗೀತೆ ಶ್ಲೋಕಗಳನ್ನು ಪ್ರತಿಯೊಬ್ಬರು ಮನೆಗಳಲ್ಲಿ ಪಠಿಸಬೇಕು ಎಂದು ಅವರು ಹೇಳಿದರು. ಶೋಭಾಯಾತ್ರೆ:

ಹೊಸತೋಟದಿಂದ ನಡೆದ ಶೋಭಾಯಾತ್ರೆಯಲ್ಲಿ ಪೂರ್ಣಕುಂಭದೊಂದಿಗೆ ಮಹಿಳೆಯರು, ಭಗವಾಧ್ವಜವನ್ನು ಹಿಡಿದುಕೊಂಡ ಮಕ್ಕಳು, ಪುರುಷರು ಸಾಗಿ ಕಾಜೂರು ಯಡವಾರೆ ಜಂಕ್ಷನ್‌ನಲ್ಲಿ ಸಮಾಪ್ತಿಗೊಂಡಿತು. ಆ ನಂತರ ಕಾಜೂರು ಜಂಕ್ಷನ್‌ನಿಂದ ಶ್ರೀ ರಾಮ, ಆಂಜನೇಯ, ಭಾರತಾಂಭೆ, ಶಿವಾಜಿ ಮಹಾರಾಜರ ಭಾವಚಿತ್ರವನ್ನು ಅಲಂಕೃತ ಮಂಟಪದಲ್ಲಿ ತರಲಾಯಿತು. ಹಿಂದೂ ಭಾಂಧವರು ಜೈ ಬಾರತ್, ಜೈ ಶ್ರೀರಾಮ್, ಜೈಹನುಮಾನ್ ಜಯಘೋಷದೊಂದಿಗೆ, ಚೆಂಡೆ ವಾದ್ಯಗೋಷ್ಠಿಯೊಂದಿಗೆ ಕಾಜೂರು ಹರಿಹರ ಯುವಕ ಸಂಘದ ಆವರಣಕ್ಕೆ ಆಗಮಿಸಿ ಸಮಾಗಮಗೊಂಡಿತು. ಪುಟಾಣಿ ಮಕ್ಕಳ ನೃತ್ಯ ಕಾರ್ಯಕ್ರಮ ಜನಮನ ಸೂರೆಗೊಂಡಿತು.