ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ಶಿವರಾತ್ರಿ ಸಂಭ್ರಮ: ಡಾ.ವೀರಣ್ಣ ಚರಂತಿಮಠ ಕನ್ನಡಪ್ರಭ ವಾರ್ತೆ ಬಾಗಲಕೋಟೆಭಕ್ತಿ ಮತ್ತು ಪೂಜೆ ಮನುಷ್ಯನಲ್ಲಿ ಸಾತ್ವಿಕ ಭಾವ ಹುಟ್ಟಿಸುವ ವಿಶಿಷ್ಟ ಅನುಭೂತಿಗಳು. ಮನುಷ್ಯನಲ್ಲಿರುವ ರಜೋಗುಣಗಳು ಅಳಿದು ಸಾತ್ವಿಕ ಭಾವ ನೆಲೆಗೊಳ್ಳಬೇಕು. ಎಲ್ಲಿ ಸಾತ್ವಿಕ ಭಾವವಿರುತ್ತದೆ, ಅಲ್ಲಿ ನಾಡು ಸಮೃದ್ಧವಾಗಿರುತ್ತದೆ ಎಂದು ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು. ನಗರದ ಬಿ.ವಿ.ವಿ.ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯ ಆವರಣದಲ್ಲಿರುವ ಶಿವಾಲಯದಲ್ಲಿ ಶಿವರಾತ್ರಿ ನಿಮಿತ್ತ ಭಾನುವಾರ ಮಹಾಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಶ್ವರ ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ. ನಾಡಿನ ಜನತೆಗೆ ಒಳ್ಳೆಯದಾಗಲಿ ಮತ್ತು ನಾಡು ಸುಭಿಕ್ಷವಾಗಿರಲಿ ಎಂದು ಶಿವಾಲಯದಲ್ಲಿ ಮಹಾಪೂಜೆಯನ್ನು ನೆರವೇರಿಸಲಾಯಿತು. ಈ ದಿನ ಸಾವಿರಾರು ಭಕ್ತರು ಶಿವಾಲಯಕ್ಕೆ ಆಗಮಿಸಿ ಶಿವನ ದರ್ಶನ ಪಡೆದು ಧನ್ಯತೆ ಅನುಭವಿಸಿದರು. ಕಳೆದ ಅನೇಕ ವರ್ಷಗಳಿಂದ ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಶಿವಾಲಯದಲ್ಲಿ ಪ್ರತಿ ಮಹಾಶಿವರಾತ್ರಿಯಂದು ಮಹಾಪೂಜೆ ಮತ್ತು ಸಂಗೀತ ಶಿವರಾತ್ರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಶಿವನ ದರ್ಶನಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.ಬಿ.ವಿ.ವಿ ಸಂಘದ ಬಾಗಲಕೋಟೆ ಅಕ್ಕನ ಬಳಗದ ಮಾತೆಯರಿಂದ ಸಾಮೂಹಿಕ ಶ್ರೀರುದ್ರ ಪಾರಾಯಣ ನಡೆಯಿತು. ಮಹಾಶಿವರಾತ್ರಿ ನಿಮಿತ್ತ ಶಿವಾಲಯದಲ್ಲಿ ಶಿವನ ಮೂರ್ತಿಗೆ ಮಾಡಿದ ವಿಶೇಷ ಅಲಂಕಾರ ಕಣ್ಮನಗಳನ್ನು ಸೆಳೆಯುವಂತಿತ್ತು. ನಗರದ ಸಾರ್ವಜನಿಕರು ಸರತಿ ಸಾಲಿನಲ್ಲಿ ಬಂದು ಶಿವನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.ಶಿವಾಲಯದಲ್ಲಿ ನಡೆದ ಮಹಾಪೂಜೆಯ ಸಂದರ್ಭ ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್.ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ.ಸಜ್ಜನ (ಬೇವೂರ), ಬಿ.ವಿ.ವಿ ಸಂಘದ ಗೌರವಾನ್ವಿತ ಸದಸ್ಯರಾದ ವೀರಣ್ಣ ಹಲಕುರ್ಕಿ, ವಿಜಯ ಅಂಗಡಿ ಮತ್ತು ಕುಮಾರ ಜಿಗಜಿನ್ನಿ, ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ, ಸುಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಿ.ಇ.ಒ ಡಾ.ನವೀನ ವಿ.ಚರಂತಿಮಠ, ಉಪಪ್ರಾಚಾರ್ಯ ಡಾ.ಸಿ.ಎಸ್.ಹಿರೇಮಠ ಮತ್ತು ಎಲ್ಲ ಆರೋಗ್ಯ ಮಹಾವಿದ್ಯಾಲಯಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.