ಕುವೆಂಪು ವಿವಿ ವ್ಯಾಪ್ತಿ ಎಲ್ಲ ಕಾಲೇಜುಗಳಲ್ಲಿ ಸಮಸ್ಯೆ

| Published : Feb 01 2024, 02:00 AM IST

ಸಾರಾಂಶ

ಶಿವಮೊಗ್ಗ ಜಿಲ್ಲೆ ಪ್ರತಿಷ್ಠಿತ ಕುವೆಂಪು ವಿಶ್ವವಿದ್ಯಾಲಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಇದರ ಪರಿಣಾಮ ವಿ.ವಿ. ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾಲೇಜುಗಳು ಸಮಸ್ಯೆಗಳನ್ನು ಎದುರಿಸುತ್ತಿವೆ. ಪಾಠಗಳು, ಪರೀಕ್ಷೆಗಳು ಸರಿಯಾಗಿ ನಡೆಯುತ್ತಿಲ್ಲ. ವಿದ್ಯಾರ್ಥಿ ವೇತನಕ್ಕೆ ತೊಂದರೆಯಾಗಿದೆ. ಮುಖ್ಯವಾಗಿ ವಿ.ವಿ.ಗೆ ಕಾಯಂ ಕುಲಪತಿ ಹಾಗೂ ಕುಲಸಚಿವರು (ಶೈಕ್ಷಣಿಕ) ಇನ್ನೂ ನೇಮಕವೇ ಆಗಿಲ್ಲ ಎಂದು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಶಿವಮೊಗ್ಗದಲ್ಲಿ ಬುಧವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕುವೆಂಪು ವಿಶ್ವವಿದ್ಯಾಲಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಇದರ ಪರಿಣಾಮ ವಿ.ವಿ. ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾಲೇಜುಗಳು ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಟೀಕಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಒಂದು ಕಡೆ ಪಾಠಗಳು ನಡೆಯುತ್ತಿಲ್ಲ. ಅಧ್ಯಾಪಕರು ಇಲ್ಲ. ಪರೀಕ್ಷೆಗಳು ಸಮಯಕ್ಕೆ ಸರಿಯಾಗಿ ನಡೆಯುತ್ತಿಲ್ಲ. ವಿದ್ಯಾರ್ಥಿ ವೇತನಕ್ಕೆ ತೊಂದರೆಯಾಗಿದೆ. ಹೊಸ ವಿಷಯಗಳಿಗೆ ಯಾರು ಪಾಠ ಮಾಡಬೇಕು ಎಂಬುವುದೇ ಗೊತ್ತಿಲ್ಲ. ಮುಖ್ಯವಾಗಿ ವಿ.ವಿ.ಗೆ ಕಾಯಂ ಕುಲಪತಿ ಹಾಗೂ ಕುಲಸಚಿವರು (ಶೈಕ್ಷಣಿಕ) ಇನ್ನೂ ನೇಮಕವೇ ಆಗಿಲ್ಲ ಎಂದು ಆರೋಪಿಸಿದರು.

ಜ.24ಕ್ಕೆ ಸೆಮಿಸ್ಟರ್‌ ಮುಕ್ತಾಯವಾಗಬೇಕಿತ್ತು. 25ಕ್ಕೆ ಪರೀಕ್ಷೆಗಳು ಆರಂಭವಾಗಬೇಕಿತ್ತು. ಆದರೆ, ಪರೀಕ್ಷಾ ದಿನಾಂಕಗಳನ್ನು ಕಾರಣಗಳು ಇಲ್ಲದೇ ಮುಂದೂಡಲಾಗಿದೆ. ತಮ್ಮ ವೈಫಲ್ಯತೆ ಮುಚ್ಚಿಕೊಳ್ಳಲು ಪರೀಕ್ಷೆಗಳನ್ನು ಮುಂದೂಡಿದರೆ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ವರ್ಷದ ಗತಿಯೇನು? ಎನ್‍ಇಪಿ ಅಂಕಪಟ್ಟಿ ಕೊಟ್ಟಿಲ್ಲ, ಆನ್‍ಲೈನ್ ಅಂಕಪಟ್ಟಿಗಳು ದೋಷಪೂರಿತವಾಗಿವೆ. ಅಂಕಪಟ್ಟಿಯಲ್ಲಿ ಎನ್‍ಎಸ್‍ಎಸ್ ಕ್ರೀಡೆ ಮತ್ತು ಇತರೆ ವಿಷಯಗಳನ್ನು ನಮೂದಿಸಿಲ್ಲ. ವಿದ್ಯಾರ್ಥಿ ವೇತನಕ್ಕೆ ಕಷ್ಟವಾಗಬಹುದು. ಪ್ರಾಂಶುಪಾಲರು ಅಸಹಾಯಕರಾಗಿದ್ದಾರೆ. ಜಿ.ಪಂ. ಸಿಇಒ ಅವರೇ ಕುಲಸಚಿವ ಆಗಿರುವುದರಿಂದ ಅವರಿಗೆ ಕಾರ್ಯದ ಒತ್ತಡ ಇರುತ್ತದೆ. ಹಾಗಾಗಿ, ಅನಗತ್ಯ ವಿಳಂಬ ಆಗುತ್ತದೆ ಎಂದು ದೂರಿದರು.

ಈ ಎಲ್ಲ ಸಮಸ್ಯೆಗಳನ್ನು ಇಟ್ಟುಕೊಂಡು ನಾಳೆ ಅಥವಾ ನಾಡಿದ್ದು, ಸುಮಾರು 15 ಕಾಲೇಜುಗಳ ಪ್ರಾಂಶುಪಾಲರ ಜೊತೆಗೂಡಿ ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಅವರನ್ನು ಭೇಟಿ ಮಾಡಿ, ಸಮಸ್ಯೆಗಳನ್ನು ಗಮನಕ್ಕೆ ತರಲಾಗುವುದು ಮತ್ತು ರಾಜ್ಯಪಾಲರು ಮಧ್ಯೆ ಪ್ರವೇಶ ಮಾಡಿ, ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವೈ.ಎಚ್. ನಾಗರಾಜ್, ಪ್ರಮುಖರಾದ ಶಿ.ಜು.ಪಾಶ, ಐಡಿಯಲ್ ಗೋಪಿ, ಮುಕ್ತಿಯಾರ್‌ ಅಹಮದ್, ಸೈಯ್ಯದ್‍ ವಾಹಿದ್‍ ಅಡ್ಡು , ಸಂತೋಷ್ ಆಯನೂರು ಇದ್ದರು.

- - - ಬಾಕ್ಸ್‌-1

ಶಾಮನೂರು ಹೇಳಿಕೆ ಬಿಜೆಪಿಗೆ ಒಳಹೊಡೆತ ಕೆಲವರು ನನ್ನ ವಿರುದ್ಧ ಪಕ್ಷದ ನಾಯಕರಿಗೆ ದೂರು ಕೊಟ್ಟಿದ್ದಾರೆ. ಪ್ರೇತಾತ್ಮಗಳಿಗೆ ಉತ್ತರಿಸುವ ಅವಶ್ಯಕತೆ ಇಲ್ಲ ಎಂದು ಆಯನೂರು ಮಂಜುನಾಥ್‌ ಹೇಳಿದರು.

ಶಿವಮೊಗ್ಗದ ಬೆಕ್ಕಿನ ಕಲ್ಮಠದ ಸಮಾರಂಭದಲ್ಲಿ ಶಾಮನೂರು ಶಿವಶಂಕರಪ್ಪ ಅವರು, ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದ್ದರು. ಅದನ್ನು ಖಂಡಿಸಿ ಅವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್‍ಗೆ ದೂರು ಕೊಡಲು ಇವರಿಗೆ ತಾಕತ್ತಿಲ್ಲ. ಹೈಕಮಾಂಡ್ ನನಗೆ ನೋಟಿಸ್ ಕೊಟ್ಟರೆ ಉತ್ತರ ನೀಡುತ್ತೇನೆ ಎಂದರು.

ಶಾಮನೂರು ಶಿವಶಂಕರಪ್ಪ ಅವರಿಂದ ಅಚಾತುರ್ಯವಾಗಿದೆ ನಿಜ. ಮತ್ತೊಂದು ರೀತಿಯಲ್ಲಿ ಕಾಂಗ್ರೆಸ್‍ಗೆ ಲಾಭವೂ ಆಗಿದೆ. ಅವರ ಹೇಳಿಕೆಯಿಂದ ವೀರಶೈವರಲ್ಲದ ಹಿಂದುಳಿದ ವರ್ಗಗಳು ಜಾಗೃತಗೊಂಡಿವೆ. ಇದು ಕಾಂಗ್ರೆಸ್‍ಗೆ ಲಾಭವು ಆಗುತ್ತದೆ. ಬಹುಶಃ ಇದನ್ನು ಗಮನದಲ್ಲಿಟ್ಟುಕೊಂಡು ಶಾಮನೂರು ಅವರು ಬಿಜೆಪಿಗೆ ಒಳಹೊಡೆತ ಹೊಡಿದ್ದಿದ್ದಾರೆ. ಬೆಕ್ಕಿನಕಲ್ಮಠದ ಸಮಾರಂಭದಲ್ಲಿಯೇ ಅಧ್ಯಕ್ಷತೆ ವಹಿಸಿದ್ದ ಈ ಮಹಾನುಭವರು ಕೊನೆಪಕ್ಷ ಶಾಮನೂರು ಹೇಳಿಕೆಯನ್ನು ಅಲ್ಲಿಯೇ ಹೇಳಿ ಉತ್ತರ ನೀಡಬಹುದಿತ್ತು. ಅವರು ಬಾಯಿಯೇ ಬಿಡಲಿಲ್ಲ ಎಂದರು.

- - - ಬಾಕ್ಸ್‌-2 ಶೆಟ್ಟರ್‌ ಹೋದ ಮಾತ್ರಕ್ಕೆ ಎಲ್ಲರೂ ಬಿಜೆಪಿಗೆ ಹೋಗಲ್ಲ

ಶಿವಮೊಗ್ಗ: ಜಗದೀಶ್ ಶೆಟ್ಟರು ಒಬ್ಬರು ಬಿಜೆಪಿಗೆ ಹೋದ ಮಾತ್ರಕ್ಕೆ ಎಲ್ಲರೂ ಅವರ ಹಿಂದೆ ಹೋಗಲ್ಲ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಹೇಳಿದರು.

ಲಕ್ಷ್ಮಣ್ ಸವದಿ ಬಿಜೆಪಿಗೆ ಹೋಗಲ್ಲ. ಮಾಧ್ಯಮದವರು ಈ ರೀತಿಯ ಪ್ರಶ್ನೆ ಕೇಳಿದರೆ ಗೊಂದಲ ಸೃಷ್ಟಿಯಾಗುತ್ತದೆ. ಬಿಜೆಪಿಗೆ ಹೋಗುವುದು, ಬಿಡುವುದು ಅವರ ವೈಯಕ್ತಿಕ ನಿಲುವು. ಆದರೆ, ನನ್ನ ವಿಷಯದಲ್ಲಿ ಬಿಜೆಪಿಗೆ ವಾಪಸ್ ಆಗುವ ಸಾಧ್ಯತೆ ಇಲ್ಲವೇ ಇಲ್ಲ ಎಂದರು.

ಮಾಗಡಿಯ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಾಲಕೃಷ್ಣ ಹೇಳಿಕೆ ಆ ಅರ್ಥದಲ್ಲಿ ಇರಲಿಲ್ಲ. ಅಕ್ಷತೆಗೆ ಮತ ಹಾಕುತ್ತಿರೋ ಅಥವಾ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗೆ ಮತ ಹಾಕುತ್ತಿರೋ ಎಂದಿದ್ದಾರೆ. ಒಂದು ವೇಳೆ ಅಕ್ಷತೆಗೆ ನೀವು ಮತ ಹಾಕಿದರೆ ಗ್ಯಾರಂಟಿ ಬೇಡ ಎಂದಾಗುತ್ತದೆ ಎಂದಿದ್ದಾರೆ. ಗ್ಯಾರಂಟಿಗಳನ್ನು ನಿಲ್ಲಿಸುತ್ತೇವೆ ಎಂಬ ಅರ್ಥದಲ್ಲಿ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಇದು ಶಾಸಕರ ವೈಯಕ್ತಿಕ ಅಭಿಪ್ರಾಯ. ಸರ್ಕಾರದ ಅಭಿಪ್ರಾಯವಲ್ಲ. ಅವರ ಹೇಳಿಕೆಯನ್ನು ಹೇಗೆ ಬೇಕಾದರೂ ಅರ್ಥ ಮಾಡಿ ಕೊಳ್ಳುವಂತಿದೆ. ಬಾಲಕೃಷ್ಣ ಅವರ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದರು.

- - - -31ಎಸ್‌ಎಂಜಿಕೆಪಿ05: ಆಯನೂರು ಮಂಜುನಾಥ್‌