ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಅಂಗವಿಕಲ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಂಗವಿಕಲ ನೌಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರಿಗೆ ಮನವಿ ಸಲ್ಲಿಸಿದರು.ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ಶೇ.6ರಷ್ಟು (ರಾಜ್ಯ ಸರ್ಕಾರಿ ಅಂಗವಿಕಲ ನೌಕರರಿಗೆ) ಪ್ರಯಾಣ ಭತ್ಯೆಯ ಆದೇಶವನ್ನು ಸರ್ಕಾರ ಕೂಡಲೇ ಹೊರಡಿಸಬೇಕು, ಅಂಗವಿಕಲ ಸರ್ಕಾರಿ ನೌಕರರಿಗೆ ವೇತನ ಆಯೋಗ ನೀಡಿದ ಎಲ್ಲಾ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು, ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಅಂಗವಿಕಲ ನೌಕರರಿಗೆ ಕೇಂದ್ರ ಸರ್ಕಾರ ಡಿಸೆಂಬರ್ 28, 2023ರಂದು ಎ, ಬಿ, ಸಿ, ಮತ್ತು ಡಿ ವೃಂದದ ಹುದ್ದೆಗಳಿಗೆ ಬಡ್ತಿಯಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿದೆ. ಅದರಂತೆ ಕರ್ನಾಟಕ ಸರ್ಕಾರವು ಸಿ ಮತ್ತು ಡಿ ವೃಂದದ ಹುದ್ದೆಗಳಿಗೆ ಮಾತ್ರ ಬಡ್ತಿಯಲ್ಲಿ ಮೀಸಲಾತಿ ನೀಡಿದೆ. ಅದೇ ರೀತಿಯಾಗಿ ಎ ಮತ್ತು ಬಿ ವೃಂದದ ಹುದ್ದೆಗಳಿಗೂ ಬಡ್ತಿಯಲ್ಲಿ ಮೀಸಲಾತಿಯನ್ನು ಕಲ್ಪಿಸಿ ಶೀಘ್ರವಾಗಿ ಆದೇಶವನ್ನು ಹೊರಡಿಸಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದರು.
ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ ಮಾತನಾಡಿ, ರಾಜ್ಯದ ಶಾಲಾ ಕಾಲೇಜುಗಳಲ್ಲಿನ ಶಿಕ್ಷಕರು, ಉಪನ್ಯಾಸಕರು ಹಾಗೂ ಬೋಧಕೇತರ ಅಂಗವಿಕಲ ನೌಕರರ ಸೇವಾವಧಿಯಲ್ಲಿ ಒಂದು ಬಾರಿ ನೀಡುವ ವರ್ಗಾವಣೆ ಪ್ರಕ್ರಿಯೆ ನಿಯಮವನ್ನು ಕೈಬಿಡುವುದು. ಹಾಗೂ ಅವರ ಪರಿಸ್ಥಿತಿಗನುಗುಣವಾಗಿ ಆದ್ಯತೆಯ ಮೇರೆಗೆ ಸೇವಾ ಅವಧಿಯಲ್ಲಿ ಎಷ್ಟು ಬಾರಿಯಾದರು ವರ್ಗಾವಣೆಯನ್ನು ಪಡೆಯಲು ಮುಕ್ತ ಅವಕಾಶವನ್ನು ಕಲ್ಪಿಸುವುದು. ರಾಜ್ಯದಲ್ಲಿ ವಿಶೇಷಚೇತನ ಅರ್ಹತೆಯುಳ್ಳ ವಿದ್ಯಾವಂತ ನಿರುದ್ಯೋಗಿಗಳಿಗೆ ಸಾಮಾಜಿಕ ನ್ಯಾಯದನ್ವಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಿಂದಿನಿಂದಲೂ ಮೀಸಲಿರಿಸಿದ್ದ ಭರ್ತಿ ಮಾಡದೇ ಖಾಲಿ ಇರುವ ಬ್ಯಾಕ್ಲಾಗ್ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪಿನಂತೆ ಕೂಡಲೇ ಭರ್ತಿ ಮಾಡುವಂತೆ ಆಗ್ರಹಿಸಿದರು.ರಾಜ್ಯದ ನಿರುದ್ಯೋಗಿ ವಿಕಲಚೇತನರ ಜೀವನ ನಿರ್ವಹಣೆ ಹಾಗೂ ಸಾಮಾಜಿಕ ಭದ್ರತೆಗಾಗಿ ನೀಡುತ್ತಿರುವ ಪೋಷಣಾ ಭತ್ಯೆಯನ್ನು ತಿಂಗಳಿಗೆ ಕನಿಷ್ಠ ₹5 ಸಾವಿರ ಮಂಜೂರು ಮಾಡುವುದು. ಗ್ರಾಮೀಣ ಪುನರ್ವಸತಿ ಯೋಜನೆಯಡಿಯಲ್ಲಿ ಗೌರವಧನ ಆಧಾರದಲ್ಲಿ ಸುಮಾರು 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವಿಶೇಷ ಚೇತನ ಕಾರ್ಯಕರ್ತರನ್ನು ಖಾಯಂಗೊಳಿಸುವುದು ಹಾಗೂ ಉದ್ಯೋಗ ಭದ್ರತೆಯನ್ನು ನೀಡುವುದು. ಇಲ್ಲವೇ ಕನಿಷ್ಠ ವೇತನಜಾರಿ ಮಾಡಿ ಅವರಿಗೆ ಜೀವನ ಭದ್ರತೆಯನ್ನು ಒದಗಿಸಬೇಕು. ಅಂಗವಿಕಲ ವ್ಯಕ್ತಿಗಳ ಅಧಿನಿಯಮ 2016ರ ಅನ್ವಯ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ವಿಕಲಚೇತನರಿಗೆ ಉಂಟು ಮಾಡುತ್ತಿರುವ ಶೋಷಣೆಯನ್ನು ತಪ್ಪಿಸಲು ಸೂಕ್ತವಾದ ಕಠಿಣ ಕ್ರಮಗಳನ್ನು ಕೈ ಗೊಳ್ಳುವುದು. ಕರ್ನಾಟಕದಲ್ಲಿ ವಿಕಲಚೇತನರಿಗೆ ಪ್ರಯಾಣದಲ್ಲಿ ನೀಡುತ್ತಿರುವ ರಿಯಾಯಿತಿ ಬಸ್ ಪಾಸ್ 100 ಕಿ.ಮೀಗೆ ಮಿತಿಗೊಳಿಸಿರುವುದನ್ನು ಕೈಬಿಟ್ಟು ಇಡೀ ರಾಜ್ಯದಾದ್ಯಂತ ಪ್ರಯಾಣಿಸಲು ಶಕ್ತಿ ಯೋಜನೆ ಮಾದರಿಯಲ್ಲಿ ಯೋಜನೆಯನ್ನು ರೂಪಿಸಿ ವಿಶೇಷಚೇತನರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸಂಘದ ಗೌರವಾಧ್ಯಕ್ಷ ಮಾರುತಿ ವಡ್ಡರ, ಕಾರ್ಯದರ್ಶಿ ಬಸವರಾಜ ಗಿರಿನಿವಾಸ, ಖಜಾಂಚಿ ಜುಬೇರ ಕೆರೂರ, ಲಿಂಗದಳ್ಳಿ, ಕೂಡಗಿ, ಅರವತ್ತು, ಸಾಬು ಲಿಂಗದಳ್ಳಿ, ಆರ್.ಬಿ.ಗೌಡರ, ಹಳಕೇರಿ, ಹೊಸಮನಿ, ಶೀಳಿನ ಉಣ್ಣಿಬಾವಿ, ಮಾನಪ್ಪ ಪತ್ತಾರ, ವಿಜಯಕುಮಾರ ಪತ್ತಾರ, ಸಂಜೀವ ಗಾಯಕವಾಡ, ಆನಂದ ಉಣ್ಣಿಬಾವಿ, ಪೂರ್ಣಿಮಾ ರೆಡ್ಡಿ, ಗುಲಗಂಜಿ ರಿಯಾಝ, ಹಕೀಮ, ಮಾನಪ್ಪ ಪತ್ತಾರ, ಸಾಬು ಹೊಸಮನಿ ಮುಳ್ಳಾಮಠ, ಮಂಜಣ್ಣಿ ಅಲಬಾಳಮಠ ಸೊನ್ನಗಿ ಉಮರಾಣಿ ಇದ್ದರು.