‘ಕೌದಿ’ ನಾಟಕ ಅತ್ಯಂತ ಪರಿಣಾಮಕಾರಿಯಾಗಿದೆ: ಪಿ.ರಂಗನಾಥ

| Published : Feb 10 2024, 01:48 AM IST

‘ಕೌದಿ’ ನಾಟಕ ಅತ್ಯಂತ ಪರಿಣಾಮಕಾರಿಯಾಗಿದೆ: ಪಿ.ರಂಗನಾಥ
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಕೈದಿ ನಾಟಕ ಪ್ರದರ್ಶನ ಮಾಡಲಾಯಿತು. ಈ ವೇಳೆ ನಾಟಕ ವೀಕ್ಷಿಸಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಷ್ಟಸುಖಗಳನ್ನು ಹಂಚಿಕೊಂಡು ಕೌದಿ ಹೊಲಿಯುವವರ ಬದುಕನ್ನು ಕಟ್ಟಿಕೊಟ್ಟ ನಾಟಕ ‘ಕೌದಿ’ ಚೆನ್ನಾಗಿದೆ. ಇದು ನಮ್ಮ ಮನಃ ಪರಿವರ್ತನೆ ಆಗುವಂಥ ಪರಿಣಾಮಕಾರಿ ನಾಟಕವಾಗಿದೆ ಎಂದು ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಡಾ.ಪಿ.ರಂಗನಾಥ್ ಹೇಳಿದರು.

ಕೇಂದ್ರ ಕಾರಾಗೃಹದಲ್ಲಿ ಏರ್ಪಡಿಸಿದ್ದ ಗಣೇಶ ಅಮೀನಗಡ ಅವರ ‘ಕೌದಿ’ ನಾಟಕದ ಪ್ರದರ್ಶನ ವೀಕ್ಷಿಸಿ ಬಳಿಕ ಅವರು ಮಾತನಾಡಿ, ಕೌದಿ ನಾಟಕದಿಂದ ಕೈದಿಗಳೂ ಬದಲಾಗಬೇಕು. ಕೌದಿಯಿಂದ ಕಲಿಯುವುದು ಬಹಳವಿದೆ. ಸಹಮತ, ಸಹಬಾಳ್ವೆಯಿಂದ ಬದುಕಬೇಕು ಎಂಬ ಸಂದೇಶವನ್ನು ಕೌದಿ ನಾಟಕ ನೀಡಿತು ಎಂದು ಹೇಳಿದರು.

ಅಧೀಕ್ಷಕರಾದ ಬಿ.ಎಂ.ಕೊಟ್ರೇಶ್ ಮಾತನಾಡಿ, ಕೌದಿಯ ಹಿನ್ನೆಲೆ, ಮಹತ್ವವನ್ನು ಈ ನಾಟಕದಿಂದ ಅರಿತೆವು. ನಮ್ಮ ಜೈಲಿನ ಬಂಧಿಗಳಿಗೆ ಈ ನಾಟಕ ಬಹಳ ಸೇರಿತು. ಯುವತಿಯಾದ ಭಾಗ್ಯಶ್ರೀ ಪಾಳಾ ಅವರು ಮನೋಜ್ಞವಾಗಿ ಅಭಿನಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಎಸ್‍ಐಎಸ್‍ಎಫ್ ಸಹಾಯಕ ಕಮಾಂಡೆಂಟ್ ಜಗನ್ನಾಥ್ ಮಾತನಾಡಿ, ಈ ನಾಟಕ ನೋಡುವಾಗ ನನ್ನ ಬಾಲ್ಯಜೀವನ ನೆನಪಾಯಿತು. ಬೇಸಿಗೆ ರಜೆಯಲ್ಲಿ ನಮ್ಮ ತಾಯಿ ಕೌದಿ ಹೊಲಿಯುವುದನ್ನು ನೋಡುತ್ತ ಕೂಡುತ್ತಿದ್ದೆ. ಈಗಲೂ ನಮ್ಮ ತಾಯಿ ಕೌದಿ ಹೊಲಿಯುತ್ತಾರೆ ಎಂದು ಸ್ಮರಿಸಿದರು.

ಕೈದಿ ಶ್ರವಣಕುಮಾರ್ ಮಾತನಾಡಿ, ನಮ್ಮ ಅಜ್ಜ, ಅಜ್ಜಿ, ತಾಯಿ, ತಂದೆ ಬೆಳೆದದ್ದು ಕೌದಿಯಿಂದಲೇ. ನನ್ನ ಬಾಲ್ಯವೂ ಕೌದಿಯಲ್ಲೇ ಕಳೆಯಿತು. ಕೌದಿ ಹೊಲಿಯುವವರ ಸಮಸ್ಯೆಗಳನ್ನು ಈ ನಾಟಕದಿಂದ ತಿಳಿದುಕೊಂಡೆ ಎಂದರು.

ಕೆಎಸ್‍ಐಎಸ್‍ಎಫ್ ಇನ್ಸ್‌ಪೆಕ್ಟರ್ ವಿಶ್ವನಾಥ ಪಾಟೀಲ, ಸಹಾಯಕ ಅಧೀಕ್ಷಕ ಹುಸೇನ್ ಪೀರ್, ಜೈಲರುಗಳಾದ ವಿ.ಸುನಂದಾ, ಪರಮಾನಂದ ಹರವಾಳ, ಸಾಗರ ಪಾಟೀಲ, ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ, ಕಾರಾಗೃಹದ ಶಿಕ್ಷಕ ನಾಗರಾಜ ಮೂಲಗೆ, ನಾಟಕಕಾರ ಗಣೇಶ ಅಮೀನಗಡ, ನಾಟಕ ನಿರ್ದೇಶಕ ಜಗದೀಶ್ ಆರ್.ಜಾಣಿ, ಕಲಾವಿದೆ ಪದ್ಮಾ ರಾಯಚೂರು ಹಾಗೂ ಬೆಳಕಿನ ಸಂಯೋಜಕ ಸಿದ್ಧಾರ್ಥ ಕಟ್ಟಿಮನಿ ಇದ್ದರು.