- ರೋಟರಿ ಕ್ಲಬ್ ನಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಉಚಿತ ನೇತ್ರ ತಪಾಸಣೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಪಂಚೇಂದ್ರಿಯಗಳಲ್ಲಿ ಕಣ್ಣು ಅತಿ ಮುಖ್ಯ ಅಂಗ ಎಂದು ರೋಟರಿ ಜಿಲ್ಲೆ 3182 ರ ವಲಯ 6 ರ ನಿಯೋಜಿತ ಉಪ ರಾಜ್ಯಪಾಲ ಎಚ್.ಎಸ್.ಮೋಹನ್ ತಿಳಿಸಿದರು.

ಬುಧವಾರ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ರೋಟರಿ ಕ್ಲಬ್ ನಿಂದ ಉಡುಪಿ ಪ್ರಸಾದ್ ನೇತ್ರಾಲಯದ ಸಹಕಾರದೊಂದಿಗೆ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. 6 ನೇ ತರಗತಿಯಿಂದ ಪಿಯುಸಿವರೆಗೆ ಮಕ್ಕಳ ಕಣ್ಣಿನ ತಪಾಸಣೆ ಅತಿ ಮುಖ್ಯ. ಆ ಸಂದರ್ಭದಲ್ಲಿ ಮಕ್ಕಳ ದೃಷ್ಟಿಯಲ್ಲಿ ವ್ಯತ್ಯಾಸಗಳು ಪ್ರಾರಂಭವಾಗುತ್ತದೆ. ರೋಟರಿ ಸಂಸ್ಥೆ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತದೆ. ವಿಶ್ವದಲ್ಲಿ ಪೋಲಿಯೋ ನಿರ್ಮೂಲನೆಗೆ ರೋಟರಿ ಪಾತ್ರ ಅತಿ ದೊಡ್ಡದು. ಹೊಸದಾಗಿ ರೋಟರಿ ಸಂಸ್ಥೆಯಿಂದ ಮಹಿಳೆಯರ ಎದೆ ಕ್ಯಾನ್ಸರ್ ಬಾರದ ರೀತಿಯಲ್ಲಿ ಉಚಿತ ಔಷಧಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಅತಿಥಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಮಾತನಾಡಿ, ಮಕ್ಕಳು ಮೊಬೈಲ್, ಟಿ.ವಿ.ನೋಡುವುದನ್ನು ಕಡಿಮೆ ಮಾಡಿದರೆ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು. ರೋಟರಿ ಕ್ಲಬ್ ಸಮಾಜ ಸೇವೆಯಲ್ಲಿ ಮಂಚೂಣಿ ಯಲ್ಲಿದೆ. ರೋಟರಿ ಸಂಸ್ಥೆ ವಿವಿಧ ಶಾಲೆಗೆ ಅನೇಕ ಮೂಲಭೂತ ಸೌಕರ್ಯ ಒದಗಿಸಿಕೊಟ್ಟಿದೆ ಎಂದರು


ಸಭೆ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ ಮಾತನಾಡಿ, ರೋಟರಿ ಯಿಂದ ಈಗಾಗಲೇ 2 ಕಣ್ಣಿನ ತಪಾಸಣೆ ಶಿಬಿರ ನಡೆಸಿದ್ದೇವೆ. ಜೂ. 20 ರಂದು ಇನ್ನೊಂದು ಕಣ್ಣಿನ ತಪಾಸಣೆ ಶಿಬಿರ ನಡೆಸಲಿದ್ದೇವೆ. ರೋಟರಿ ಕ್ಲಬ್ ಉದ್ದೇಶವೇ ಸಮಾಜ ಸೇವೆ ಎಂದರು. ರೋಟರಿ ನಿಯೋಜಿತ ಅಧ್ಯಕ್ಷ ಪಿ.ಎಸ್.ವಿದ್ಯಾನಂದಕುಮಾರ್ ಮಾತನಾಡಿ ರೋಟರಿ ಸಂಸ್ಥೆಯಿಂದ ಮಕ್ಕಳ ನೇತ್ರ ತಪಾಸಣೆ ಉದ್ದೇಶ ವಿವರಿಸಿದರು.

ಇದೇ ಸಂದರ್ಭದಲ್ಲಿ ಎನ್. ಆರ್.ಪುರ ರೋಟರಿ ಸಂಸ್ಥೆಯಿಂದ ರೋಟರಿ 3182 ರ ವಲಯ 6 ರ ನಿಯೋಜಿತ ಉಪ ರಾಜ್ಯಪಾಲ ಎಚ್.ಎಸ್.ಮೋಹನ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಅವರನ್ನು ಗೌರವಿಸಲಾಯಿತು.

ಕೆಪಿಎಸ್ ನ ಹಿರಿಯ ಪ್ರಾಥಮಿಕ, ಪ್ರೌಢ ಶಾಲಾ ವಿಭಾಗ ಹಾಗೂ ಮೌಲಾನ ಆಜಾದ್ ಪ್ರೌಢ ಶಾಲೆ ಮಕ್ಕಳು ಸೇರಿ 450 ಮಕ್ಕಳ ನೇತ್ರ ತಪಾಸಣೆ ನಡೆಸಲಾಯಿತು.

ವೇದಿಕೆಯಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಕಟಗಳಲೆ ಲೋಕೇಶ್,ಉಡುಪಿ ಪ್ರಸಾದ್ ನೇತ್ರಾಲಯದ ನೇತ್ರ ತಜ್ಞ ಡಾ.ಆಶ್ರತ್, ಕೆಪಿಎಸ್ ಎಸ್.ಡಿ.ಎಂ.ಸಿ.ಉಪಾಧ್ಯಕ್ಷ ಉದಯ ಗಿಲ್ಲಿ, ಸದಸ್ಯ ಅಭಿನವ ಗಿರಿರಾಜ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಂಜುಂಡಪ್ಪ, ಶಾಲಾ ಮುಖ್ಯೋಪಾಧ್ಯಾಯ ಚಂದ್ರಯ್ಯ ಇದ್ದರು.