ಜಾತ್ರೆಗಳ ಆಚರಣೆ ನಮ್ಮ ಮನಸ್ಸುಗಳನ್ನು ಶುದ್ಧೀಕರಣ ಮಾಡುವುದಾಗಿದೆ. ಜಾತ್ರಾ ಮಹೋತ್ಸವಗಳು ಕೇವಲ ಮನರಂಜನೆಗೆ ಮಾತ್ರವಲ್ಲದೆ ಆಚರಣೆ, ಸಂಪ್ರದಾಯ, ಸಂಸ್ಕೃತಿಯನ್ನ ಇಂದಿನ ಪೀಳಿಗೆಗೆ ತಿಳಿಸಿಕೊಡುವುದಾಗಿದೆ.

ಮುಳಗುಂದ: ಎಲ್ಲ ಧರ್ಮೀಯರ ಸಮಾಗಮವೇ ಜಾತ್ರೆ. ಸೌಹಾರ್ದತೆಯಿಂದ ಧಾರ್ಮಿಕ ಕಾರ್ಯಕ್ರಮ ಆಚರಿಸುವ ಮೂಲಕ ಮನಸ್ಸುಗಳನ್ನು ಕಟ್ಟುವ ಕೆಲಸವನ್ನು ಜಾತ್ರೆಗಳು ಮಾಡುತ್ತಿವೆ ಎಂದು ಗದುಗಿನ ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ತಿಳಿಸಿದರು.

ಪಟ್ಟಣದ ಐತಿಹಾಸಿಕ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಅನುಭಾವ ಗೋಷ್ಠಿಯಲ್ಲಿ ಮಾತನಾಡಿದರು.ಜಾತ್ರೆಗಳ ಆಚರಣೆ ನಮ್ಮ ಮನಸ್ಸುಗಳನ್ನ ಶುದ್ಧೀಕರಣ ಮಾಡುವುದಾಗಿದೆ. ಜಾತ್ರಾ ಮಹೋತ್ಸವಗಳು ಕೇವಲ ಮನರಂಜನೆಗೆ ಮಾತ್ರವಲ್ಲದೆ ಆಚರಣೆ, ಸಂಪ್ರದಾಯ, ಸಂಸ್ಕೃತಿಯನ್ನ ಇಂದಿನ ಪಿಳಿಗೆಗೆ ತಿಳಿಸಿಕೊಡುವುದಾಗಿದೆ. ಇಲ್ಲಿ ನಡೆಯುವ ಶರಣ, ಸಂತರ ಪುರಾಣ ಪ್ರವಚನಗಳಲ್ಲಿನ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ನಡೆಸಬೇಕಾದ ಅಗತ್ಯತೆ ಇದೆ ಎಂದರು.

ಬೆಳಗಾವಿ ಬಸವ ಬೆಳವಿ ಚಿರಂತೇಶ್ವರ ವಿರಕ್ತಮಠದ ಶರಣಬಸವ ದೇವರು ಉಪನ್ಯಾಸ ನೀಡಿ, ಬಾಲಲೀಲಾ ಮಹಾಂತ ಶಿವಯೋಗಿಗಳು ತ್ರಿಕಾಲ ಜ್ಞಾನಿಗಳು, ಮಹಾನ್ ವೈರಾಗ್ಯಗಳು, ತಮ್ಮ ತ್ರಿಕಾಲ ಜ್ಞಾನದಿಂದಲೇ ಮೈಸೂರು ರಾಜರ ರೋಗವನ್ನು ಗುಣಪಡಿಸಿದ್ದರು. ಅದಕ್ಕೆ ಪ್ರತಿಯಾಗಿ ರಾಜನು ನೀಡಿದ ರತ್ನಖಚಿತ ಸನ್ಮಾನಗಳಿಗೆ ಅಂಟಿಕೊಳ್ಳದೆ ಅವನ್ನೆಲ್ಲ ತ್ಯಜಿಸಿ ಕೇವಲ ಒಂದು ಕುಂಬಳ ಸೊರಟಗಿ ತೆಗೆದುಕೊಂಡು ಬಂದರು. ಅಷ್ಟು ವೈರಾಗ್ಯ ಮೂರ್ತಿಗಳು ಶಿವಯೋಗಿಗಳು ಎಂದರು.

ಸಾನ್ನಿಧ್ಯ ವಹಿಸಿದ್ದ ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಮಾತನಾಡಿದರು. ರಾಮಣ್ಣಾ ಕಮಾಜಿ, ಗೌರಮ್ಮಾ ಬಡ್ನಿ, ಎಸ್.ಎಂ. ನೀಲಗುಂದ, ಅಶೋಕ ಸೋನಗೋಜಿ, ಜಗದೀಶ ಬಟ್ಟೂರ, ನಾಗರಾಜ ದೇಶಪಾಂಡೆ, ಸಂಜಯ ನೀಲಗುಂದ, ಡಾ. ಎಸ್.ಸಿ. ಚವಡಿ, ಎಂ.ಎಂ. ಶೇಖ, ಎ.ಡಿ. ಮುಜಾವರ, ಹೊನ್ನಪ್ಪ ಜೋಗಿ, ಎಂ.ಎಂ. ಜಮಾಲಸಾಬನವರ, ಫಕ್ಕೀರಯ್ಯ ಅಮೋಘಿಮಠ ಸೇರಿದಂತೆ ಜಾತ್ರಾ ಸಮಿತಿ ಸದಸ್ಯರು ಇದ್ದರು.