ಸಾರಾಂಶ
ದೊಡ್ಡಬಳ್ಳಾಪುರ: ದಕ್ಷಿಣ ಭಾರತದ ಪ್ರಮುಖ ದನಗಳ ಜಾತ್ರೆಯಲ್ಲಿ ಒಂದಾಗಿರುವ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆ ಡಿ.25ರ ಸೋಮವಾರ ಆರಂಭವಾಗಲಿದ್ದು, ಸಿದ್ದತೆಗಳು ಪೂರ್ಣಗೊಂಡಿವೆ.
ಈಗಾಗಲೇ ಘಾಟಿ ಕ್ಷೇತ್ರದತ್ತು ರಾಸುಗಳನ್ನು ರೈತರು ಕರೆತರುತ್ತಿದ್ದು, ವಿಶಾಲ ಮೈದಾನದಲ್ಲಿ ಸಿದ್ದತಾ ಕಾರ್ಯಗಳ ಸಂಭ್ರಮ ಮನೆ ಮಾಡಿದೆ. ಆಕರ್ಷಕ ಪೆಂಡಾಲ್ ಹಾಗೂ ಚಪ್ಪರಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ದನಗಳ ಜಾತ್ರೆಗೆ ಜಿಲ್ಲಾಡಳಿತ ಅಗತ್ಯ ಸಿದ್ದತೆಗಳನ್ನು ಕೈಗೊಂಡಿದ್ದು, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಕ್ರಮ ವಹಿಸಿದೆ. ದನಗಳ ಜಾತ್ರೆ ಬರುವ ಜನವರಿ 5ರವರೆಗೆ ನಡೆಯುವ ನಿರೀಕ್ಷೆ ಇದೆ.ಜನವರಿ 16ರಂದು ಬ್ರಹ್ಮರಥೋತ್ಸವ ನಡೆಯಲಿದ್ದು, ಇದಕ್ಕೂ ಮುನ್ನ ದನಗಳ ಜಾತ್ರೆ ಸಂಪನ್ನಗೊಳ್ಳಲಿದೆ. ದನಗಳ ಜಾತ್ರೆಯಲ್ಲಿ ಕನಿಷ್ಠ 60 ಸಾವಿರದಿಂದ ಗರಿಷ್ಠ 4 ಲಕ್ಷದವರೆಗೂ ಬೆಲೆ ಬಾಳುವ ವಿವಿಧ ತಳಿಯ ರಾಸುಗಳು ಲಭ್ಯವಿರುವ ನಿರೀಕ್ಷೆ ಇದೆ. ಕಳೆದ ಬಾರಿಯೂ ಉನ್ನತ ಹಾಗೂ ಕಟ್ಟುಮಸ್ತಾದ ರಾಸುಗಳ ಮಾರಾಟ, ಖರೀದಿ ಭರಾಟೆ ಕಂಡು ಬಂದಿತ್ತು. ರಾಸು ಕೊಂಡರೆ ಟಗರು ಉಚಿತ ಎಂಬಿತ್ಯಾದಿ ಆಫರ್ಗಳನ್ನೂ ಮಾರಾಟಗಾರರು ನೀಡುವುದು ಸಹಜವಾಗಿರಲಿದೆ.
ಹಗ್ಗ, ಗೆಜ್ಜೆ, ಗೊರಸು ಸೇರಿದಂತೆ ರಾಸುಗಳ ಸಂಬಂಧಿತ ವಸ್ತುಗಳ ಮಾರಾಟ ವ್ಯವಸ್ಥೆಯೂ ಭರದಿಂದ ನಡೆಯುವ ನಿರೀಕ್ಷೆ ಇದೆ. ಹಳ್ಳಿಕಾರ್, ಅಮೃತಮಹಲ್, ಮಲನಾಡ ಗಿಡ್ಡ ಸೇರಿದಂತೆ ಅಪರೂಪದ ದೇಸಿ ತಳಿಗಳು, ಸೀಮೆ ಎತ್ತುಗಳು ಜಾತ್ರೆಯಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಉಪಲಬ್ದವಿರುವ ನಿರೀಕ್ಷೆ ಇದೆ.ದನಗಳ ಜಾತ್ರೆಯ ಕೊನೆ ದಿನ ಕಮಿಟಿ ಸೇರಲಿದ್ದು, ಬಹುಮಾನಗಳನ್ನು ಪ್ರಕಟಿಸಲಿದೆ. ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಗೌರಿಬಿದನೂರು ತಾಲೂಕುಗಳು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿತ್ರದುರ್ಗ, ತುಮಕೂರು, ಮೈಸೂರು, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡಿನ ರೈತರೂ ಮಾರಾಟ-ಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.24ಕೆಡಿಬಿಪಿ10-
ದನಗಳ ಜಾತ್ರೆಗೆ ಘಾಟಿ ಕ್ಷೇತ್ರದಲ್ಲಿ ಸಿದ್ದತೆ ಭರಾಟೆ, ಭರದಿಂದ ಸಾಗಿರುವ ಚಪ್ಪರ ನಿರ್ಮಾಣ ಕಾರ್ಯ.24ಕೆಡಿಬಿಪಿ11- ದೊಡ್ಡಬಳ್ಳಾಪುರದ ಘಾಟಿ ದನಗಳ ಜಾತ್ರೆಗೆ ರಾಸುಗಳನ್ನು ಕರೆತರುತ್ತಿರುವ ರೈತರು.
24ಕೆಡಿಬಿಪಿ12- ಈಗಾಗಲೇ ಜಾತ್ರೆ ಮೈದಾನದಲ್ಲಿ ಸೇರಿರುವ ರಾಸುಗಳು.