ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ನಾವು ಸಂಸ್ಥೆ ಹಾಗೂ ಗುಡ್ ಮೈಂಡ್ಸ್ ಹದಿನೈದು ದಿನಗಳ ಕಾಲ ಪಟ್ಟಣದ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ‘ಮಕ್ಕಳ ಬಾಲ್ಯ ಕಟ್ಟುವ ಹಬ್ಬ’ ಹೆಸರಿನ ಮಕ್ಕಳ ಶಿಬಿರ ಶನಿವಾರ ಮುಕ್ತಾಯಗೊಂಡಿತು.ಮಕ್ಕಳು ತಾವೇ ರಚಿಸಿದ ಕವಿತೆಗಳು, ಕಥೆಗಳು, ನಾಟಕಗಳು, ನಟನೆ, ನಿರೂಪಣೆ ಹಾಗೂ ನೃತ್ಯಗಳ ಮೂಲಕ ತಮ್ಮ ಕಲಾತ್ಮಕ ಸಾಮರ್ಥ್ಯವನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು. ಗ್ರಾಮೀಣ ಆಟಗಳನ್ನು ಕಲಿತು ಸಂಭ್ರಮಿಸಿದರು.ಕಾರ್‍ಯಕ್ರಮದಲ್ಲಿ ನಾವು ಸಂಸ್ಥೆಯ ಕಾರ್‍ಯಕಾರಿ ನಿರ್ದೇಶಕಿ ಸುಮನ ಮಾತನಾಡಿ, ಈ ಅವಧಿಯಲ್ಲಿ ಮಕ್ಕಳ ಸೃಜನಾತ್ಮಕತೆ ಮತ್ತು ಪ್ರತಿಭೆಯನ್ನು ಉತ್ತೇಜಿಸುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳನ್ನು ಹೋಲಿಕೆ ಮಾಡುವುದಕ್ಕಿಂತ ಅವರ ಸ್ವಭಾವ ಮತ್ತು ಆಸಕ್ತಿಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ. ಮಕ್ಕಳನ್ನು ಇರುವಂತೆ ಸ್ವೀಕರಿಸಬೇಕಿದೆ. ಎಲ್ಲ ಮಕ್ಕಳು ವಿಭಿನ್ನ ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಪ್ರತಿ ಮಗುವಿನ ವೈಶಿಷ್ಟ್ಯತೆಯನ್ನು ಗೌರವಿಸಲೇಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ಜೊತೆಗೆ ಅವರ ಆಲೋಚನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ವೇದಿಕೆ ಒದಗಿಸುವುದು ಈ ಹಬ್ಬದ ಮುಖ್ಯ ಉದ್ದೇಶವಾಗಿತ್ತು ಎಂದು ಹೇಳಿದರು.ನಾವು ಸಂಸ್ಥೆಯ ಸಂಸ್ಥಾಪಕ ಗೌತಮ್ ಕಿರಗಂದೂರು, ಮಕ್ಕಳ ಸೃಜನಶೀಲತೆ ಸಮಾಜದ ಅಭಿವೃದ್ಧಿಗೆ ದಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸಂಪನ್ಮೂಲ ವ್ಯಕ್ತಿಗಳಾದ ಡಾ. ಸಂಜೀವ್ ಕುಮಾರ್ ಮತ್ತು ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಅವರು ಮಕ್ಕಳ ಮನೋವಿಕಾಸದ ಬಗ್ಗೆ ಮಾರ್ಗದರ್ಶನ ನೀಡಿದರು. ಮಕ್ಕಳ ಪೋಷಕರು ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಕ್ಕಳ ಪ್ರತಿಭೆಯನ್ನು ಮೆಚ್ಚಿದರು. ಮಕ್ಕಳ ಬಾಲ್ಯ ಕಟ್ಟುವ ಹಬ್ಬದ ಅಂಗವಾಗಿ ಹಕ್ಕಿಗೊಂದು ಗುಟುಕು-೨೦೨೬ ಅಭಿಯಾನದಲ್ಲಿ ಭಾಗವಹಿಸಿ ವಿಜೇತರಾದ ಕಾಸರಗೋಡಿನ ಕಿರಣ್, ಉಡುಪಿಯ ಅನಘ ಅವರಿಗೆ ಬಹುಮಾನ ಕಳುಹಿಸಿಕೊಡಲಾಯಿತು.