ಕನ್ನಡಪ್ರಭ ವಾರ್ತೆ ಹಳಿಯಾಳ

ಪಟ್ಟಣದ ಪೇಟೆಯ ಶ್ರೀ ಬಸವೇಶ್ವರ ದೇವರ ರಥೋತ್ಸವವು ಮಂಗಳವಾರ ಮಧ್ಯಾಹ್ನ ಸಂಭ್ರಮದಿಂದ ನೆರವೇರಿತು. ರಥೋತ್ಸವದುದ್ದಕ್ಕೂ ಹಳದಿ ಭಂಡಾರ ಸೇರಿದಂತೆ ಇತರ ಯಾವುದೇ ಸಾಮಗ್ರಿ ಬಳಸದೇ ಪರಿಸರ ಹಾಗೂ ಮಾನವ ಸ್ನೇಹಿ ರಥೋತ್ಸವ ನೆರವೇರಿಸಿದ್ದು ಗಮನಾರ್ಹವಾಗಿತ್ತು.

ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಯಿಂದ ಆಗಮಿಸಿದ ಭಕ್ತಾಧಿಗಳು ಭಕ್ತಿ ಶ್ರದ್ಧೆಯಿಂದ ರಥವನ್ನು ಎಳೆದು ಭಕ್ತಿಯ ಪರಾಕಾಷ್ಠೆ ಮೆರೆದರು. ಹರ ಹರ ಮಹಾದೇವ, ಬಸವೇಶ್ವರ ಮಹಾರಾಜ ಕೀ ಜೈ ಎಂಬ ಮುಗಿಲು ಮುಟ್ಟುವ ಘೋಷಣೆಗಳೊಂದಿಗೆ ರಥ ಎಳೆಯಲಾಯಿತು. ಈ ಬಾರಿಯ ರಥೋತ್ಸವದಲ್ಲಿ ಬಾರಿ ಸಂಖ್ಯೆಯಲ್ಲಿ ಸೇರಿದ ಚಿಕ್ಕಮಕ್ಕಳು ಜೈಕಾರದ ಘೋಷಣೆಗಳೊಂದಿಗೆ ರಥವನ್ನು ಏಳೆದು ಸಂಭ್ರಮಿಸಿದ್ದು ವಿಶೇಷವಾಗಿತ್ತು. ವಾದ್ಯ ಮೇಳಗಳ ನಿನಾದ, ಗರಡಿ ಮಜಲುಗಳ ಸಂಗೀತ, ವಿವಿಧ ವೇಷ ಭೂಷಣಗಳ ರೂಪಕಗಳಿಂದ ರಥೋತ್ಸವಕ್ಕೆ ಬಾರಿ ಮೆರಗು ಬಂತು. ಭಕ್ತರು ರಥಕ್ಕೆ ಹಣ್ಣು, ಹೂವು, ಉತ್ತತ್ತಿ, ಕರ್ಜೂರ, ಮಿಠಾಯಿ ಇತ್ಯಾದಿಗಳನ್ನು ಎಸೆದು ತಮ್ಮ ಹರಕೆ ತೀರಿಸಿಕೊಂಡು ಪ್ರಾರ್ಥಿಸಿ ಪುಣಿತರಾದರು.56ನೇ ಜಾತ್ರಾ ಮಹೋತ್ಸವದ ನಿಮಿತ್ತ ಪೇಟೆಯ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಸಮಿತಿಯವರು ವಿಶೇಷ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಜಾತ್ರಾ ಮಹೋತ್ಸವದ ಸಿದ್ಧತೆ ಕೈಗೊಂಡಿದ್ದರು. ರಥೋತ್ಸವದ ನಿಮಿತ್ತ ಮಧ್ಯಾಹ್ನ ಭಕ್ತಾಧಿಗಳಿಗಾಗಿ ಮಹಾ ಅನ್ನಪ್ರಸಾದ ವಿತರಣೆಯು ನಡೆಯಿತು. ಮಂಗಳವಾರ ಮಧ್ಯಾಹ್ನ ದೇವಸ್ಥಾನದ ಬಳಿ ನಡೆದ ಧಾರ್ಮಿಕ ಪೂಜಾವಿಧಿಯಲ್ಲಿ ಧಾರವಾಡ ಮುರುಘಾಮಠದ ಶ್ರೀ ಮ.ನಿ.ಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಪೇಟೆಯ ರಥ ಬೀದಿಯ ಮೂಲಕ ಆರಂಭಗೊಂಡ ರಥೋತ್ಸವವು ಶಿವಾಜಿ ವೃತ್ತದವರೆಗೆ ತಲುಪಿ ತದನಂತರ ದೇವಸ್ಥಾನಕ್ಕೆ ಮರಳಿತು. ದೇವಸ್ಥಾನದಿಂದ ಜವಾಹರ ಓಣಿ, ಜವಳಿ ಓಣಿಯ ಮೂಲಕ ವಿರಕ್ತಮಠದವರೆಗೆ ತೆರಳಿ, ಅಲ್ಲಿ ಪೂಜಾ ವಿಧಿಗಳ ನಂತರ ಮತ್ತೇ ಬಂದ ಮಾರ್ಗದಿಂದಲೇ ಮರಳಿ ದೇವಸ್ಥಾನದ ಬಳಿ ಬಂದು ಮುಕ್ತಾಯಗೊಂಡಿತು. ದೇವಸ್ಥಾನ ಟ್ರಸ್ಟ್ ಸಮಿತಿಯವರು, ಸಮಾಜದ ಮುಖಂಡರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. -----

21ಎಚ್.ಎಲ್.ವೈ-1: ಪಟ್ಟಣದ ಪೇಟೆಯ ಶ್ರೀ ಬಸವೇಶ್ವರ ದೇವರ ರಥೋತ್ಸವವು ಸಂಭ್ರಮದಿಂದ ನೆರವೇರಿತು.