ಉತ್ತರ ಕರ್ನಾಟಕದ ಜಾತ್ರೆಗಳ ಪೈಕಿ ಗರಗ ಜಾತ್ರೆ ದೊಡ್ಡ ಜಾತ್ರೆ ಎಂದೇ ಹೆಸರು ಗಳಿಸಿದೆ. ಈ ಜಾತ್ರೆಗೆ ಬೇರೆ ಬೇರೆ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿದ್ದರು. ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಬೆಳಗ್ಗೆ ಮಡಿವಾಳಪ್ಪನವರ ಕರ್ತೃ ಗದ್ದುಗೆಗೆ ವಿಶೇಷ ಅಲಂಕಾರ ಹಾಗೂ ಅಭಿಷೇಕ ಮಾಡಲಾಗಿತ್ತು.

ಧಾರವಾಡ:

ವೈರಾಗ್ಯ ಚಕ್ರವರ್ತಿ, ಪವಾಡ ಪುರುಷ ಎಂದೇ ಹೆಸರಾದ ಸಮೀಪದ ಗರಗ ಕಲ್ಮಠದ ಮಡಿವಾಳೇಶ್ವರ ರಥೋತ್ಸವವು ಬುಧವಾರ ಲಕ್ಷಾಂತರ ಭಕ್ತರ ಹರ್ಷೋದ್ಗಾರಗಳ ಮಧ್ಯೆ ವಿಜೃಂಭಣೆಯಿಂದ ನೆರವೇರಿತು.

ಉತ್ತರ ಕರ್ನಾಟಕದ ಜಾತ್ರೆಗಳ ಪೈಕಿ ಇದು ಸಹ ದೊಡ್ಡ ಜಾತ್ರೆ ಎಂದೇ ಹೆಸರು ಗಳಿಸಿದೆ. ಈ ಜಾತ್ರೆಗೆ ಬೇರೆ ಬೇರೆ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿದ್ದರು. ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಬೆಳಗ್ಗೆ ಮಡಿವಾಳಪ್ಪನವರ ಕರ್ತೃ ಗದ್ದುಗೆಗೆ ವಿಶೇಷ ಅಲಂಕಾರ ಹಾಗೂ ಅಭಿಷೇಕ ಮಾಡಲಾಗಿತ್ತು. ಗರಗ ಕಲ್ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಕಳೆದ ವಾರದಿಂದಲೂ ನಡೆದಿದ್ದವು.

ಬುಧವಾರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಲಕ್ಷಾಂತರ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ಲಕ್ಷಾಂತರ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು. ಸಂಜೆ 4.30ರ ಸುಮಾರಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಲಕ್ಷಾಂತರ ಭಕ್ತರ ಹರ್ಷೋದ್ಗಾರ ಹಾಗೂ ಹರ ಹರ ಮಹಾದೇವ ಎಂಬ ಘೋಷಣೆಗಳೊಂದಿಗೆ ಆರಂಭವಾದ ರಥೋತ್ಸವವು ಮುಂದೆ ಪಾದಗಟ್ಟಿ ವರೆಗೂ ಎಳೆಯಲ್ಪಟ್ಟಿತು. ತೇರು ಎಳೆಯುತ್ತಿದ್ದಂತೆ ಭಕ್ತರು ಉತ್ತತ್ತಿ, ನಿಂಬೆಹಣ್ಣು, ಬಾಳೆಹಣ್ಣು ತೂರಿ ವೈರಾಗ್ಯ ಚಕ್ರವರ್ತಿಗೆ ಭಕ್ತಿಯ ನಮನ ಸಲ್ಲಿಸಿದರು.

ತೇರಿನ ಮುಂಭಾಗದಲ್ಲಿ ಎತ್ತುಗಳಿಂದ ಮಡಿವಾಳೇಶ್ವರರ ಮೂರ್ತಿಯೂ ಎಳೆಯಲ್ಪಟ್ಟಿತ್ತು. ಮಹಿಳಾ ಡೊಳ್ಳು ಕುಣಿತದವರು, ಜಗ್ಗಲಿಗೆ ಮೇಳದವರು ರಥೋತ್ಸವದಲ್ಲಿ ಪಾಲ್ಗೊಂಡು ಜಾತ್ರೆಯ ಮೆರಗು ಹೆಚ್ಚಿಸಿದರು. ಬೇರೆ ಬೇರೆ ಭಾಗಗಳಿಂದ ಜನ ಎತ್ತು, ಚಕ್ಕಡಿ, ಟ್ರ್ಯಾಕ್ಟರ್ ತೆಗೆದುಕೊಂಡು ಜಾತ್ರಾ ಮಹೋತ್ಸವಕ್ಕೆ ಬಂದಿದ್ದರು. ಸಾವಿರಾರು ಜನ ಮಂಗಳವಾರ ಸಂಜೆಯೇ ಬಂದು ದೇವಸ್ಥಾನದ ಆವರಣದಲ್ಲಿ ವಸತಿ ಮಾಡಿದ್ದರು. ಈ ಜಾತ್ರಾ ಮಹೋತ್ಸವದ ಅಂಗವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಸಹ ಮಾಡಲಾಗಿತ್ತು.