ಸಾರಾಂಶ
ಕನ್ನಡಪ್ರಭವಾರ್ತೆ ಮಾಗಡಿ
ವೈದ್ಯಕೀಯ ಕ್ಷೇತ್ರದಲ್ಲಿ 65 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದೇನೆ. ವೈದ್ಯಕೀಯ ಕ್ಷೇತ್ರವನ್ನು ಅರ್ಧಕ್ಕೆ ನಿಲ್ಲಿಸಿ ರಾಜಕಾರಣಕ್ಕೆ ಬಂದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ವಿರೋಧ ಪಕ್ಷದವರಿಗೆ ಟಾಂಗ್ ನೀಡಿದರು.ಜೆಡಿಎಸ್, ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯರು ವೈದ್ಯವೃತ್ತಿಯನ್ನೇ ಮಾಡಬೇಕು, ರಾಜಕಾರಣ ಮಾಡಬಾರದು ಎಂಬ ವಿರೋಧಿಗಳ ಹೇಳಿಕೆಗೆ ಉತ್ತರಿಸಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಅರ್ಧಕ್ಕೆ ನಿಲ್ಲಿಸಿ ರಾಜಕಾರಣಕ್ಕೆ ಬಂದಿಲ್ಲ. ಕ್ರಿಕೆಟ್ನಲ್ಲಿ ಹೊಸದಾಗಿ ಬಂದ ಆಟಗಾರರೇ 200 ರನ್ನು ಹೊಡೆದಿರುವ ಉದಾಹರಣೆಗಳಿದೆ. ಅನುಭವ ಇರುವ ಆಟಗಾರ ಸೊನ್ನೆಗೆ ಔಟ್ ಆಗಿದ್ದಾರೆ. ಕ್ಷೇತ್ರದ ಪರಿಚಯ ಮಾಡಿಕೊಳ್ಳುತ್ತಿದ್ದು ನನ್ನದೇ ಆದ ಕಲ್ಪನೆಯ ಮೂಲಕ ಕ್ಷೇತ್ರದ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಶೀಘ್ರದಲ್ಲೇ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸಾಧಕರನ್ನು ಗುರುತಿಸಿ ಅವರ ಸಾಧನೆಯ ಆಧಾರದ ಮೇಲೆ ಅವಕಾಶ ಕೊಡುತ್ತಿದ್ದಾರೆ. ಅಮೆರಿಕ ಮತ್ತು ಇಂಗ್ಲೆಂಡ್ನಲ್ಲಿ ಪರಿಣಿತರಿಗೆ ಹೆಚ್ಚಿನ ಅವಕಾಶ ಕೊಡುವ ರೀತಿ ಮೋದಿ ಕೂಡ ಅನುಭವ ಇರುವವರನ್ನು ರಾಜಕಾರಣದಲ್ಲಿ ಬೆಳೆಸುತ್ತಿದ್ದು ನಾನು ಕೂಡ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರಬೇಕೆಂಬ ಅಪೇಕ್ಷೆಯಿಂದ ಬಂದಿದ್ದೇನೆ. ಯಾವ ರೀತಿ ಅವಕಾಶಗಳು ಸಿಗುತ್ತದೆ ಕಾದು ನೋಡಬೇಕಿದೆ. ಕ್ಷೇತ್ರದ ಮತದಾರರು ಈ ಬಾರಿ ಬಿಜೆಪಿ ಪಕ್ಷಕ್ಕೆ ಆಶೀರ್ವಾದ ನೀಡುತ್ತಾರೆಂಬ ವಿಶ್ವಾಸವಿದೆ ಎಂದು ತಿಳಿಸಿದರು.ನಾನು ನಿರ್ದೆಶಕನಾಗಿ ಆಸ್ಪತ್ರೆಯಲ್ಲಿ ಕೂರದೆ ಪ್ರತಿದಿನ ಜನಗಳ ಸಂಪರ್ಕದಿಂದ ನನ್ನ ಅವಧಿಯಲ್ಲಿ ಎರಡು ಕೋಟಿ ಜನರನ್ನು ಆಸ್ಪತ್ರೆಯಲ್ಲಿ ಜನತಾದರ್ಶನ ಮಾಡಿದ್ದು 10 ಸಾವಿರ ಹೆಜ್ಜೆಗಳನ್ನು ಹಾಕುತ್ತಿದ್ದೆ. ಅದರಲ್ಲಿ 5 ಸಾವಿರ ಹೆಜ್ಜೆ ಆಸ್ಪತ್ರೆ ಕಾರಿಡಾರ್ನಲ್ಲೆ ಆಗುತ್ತಿತ್ತು ಎಂದು ಹೇಳಿದರು.