ಕ್ಷಮೆ ಕೇಳದ ಹೊರತು ಚಿತ್ರ ಬಿಡುಗಡೆಗೆ ಅವಕಾಶವಿಲ್ಲ

| Published : Jun 02 2025, 12:25 AM IST

ಸಾರಾಂಶ

ದೊಡ್ಡಬಳ್ಳಾಪುರ: ಕನ್ನಡ ವಿರೋಧಿ ಹೇಳಿಕೆ ನೀಡಿ ಸಮರ್ಥನೆ ಮಾಡಿಕೊಳ್ಳುತ್ತಿರುವ ತಮಿಳು ಚಿತ್ರನಟ ಕಮಲ್ ಹಾಸನ್ ವಿರುದ್ಧ ತಾಲೂಕು ಕಚೇರಿ ಮುಂದೆ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು

ದೊಡ್ಡಬಳ್ಳಾಪುರ: ಕನ್ನಡ ವಿರೋಧಿ ಹೇಳಿಕೆ ನೀಡಿ ಸಮರ್ಥನೆ ಮಾಡಿಕೊಳ್ಳುತ್ತಿರುವ ತಮಿಳು ಚಿತ್ರನಟ ಕಮಲ್ ಹಾಸನ್ ವಿರುದ್ಧ ತಾಲೂಕು ಕಚೇರಿ ಮುಂದೆ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ಎ.ನಂಜಪ್ಪ, ಕನ್ನಡ ಭಾಷೆಗೆ 2 ಸಾವಿರಕ್ಕೂ ಅಧಿಕ ವರ್ಷಗಳ ಸುದೀರ್ಘ ಇತಿಹಾಸವಿದೆ. ಕಮಲ್ ಹಾಸನ್ ಅವರಿಗೆ ಇತಿಹಾಸದ ಬಗ್ಗೆ ತಿಳಿವಳಿಕೆಯ ಕೊರತೆ ಇದೆ. ತನ್ನ ಚಿತ್ರದ ಪ್ರಚಾರದ ಭರಾಟೆಯಲ್ಲಿ ಕನ್ನಡ ಭಾಷಾ ವಿರೋಧಿ ಹೇಳಿಕೆ ನೀಡಿರುವುದು ಖಂಡನೀಯ. ತಮಿಳು ಚಿತ್ರನಟ ಕಮಲ್ ಹಾಸನ್ ಕರ್ನಾಟಕ ಜನತೆಗೆ ಕ್ಷಮೆಯಾಚಿಸದೇ ಇದ್ದರೆ ರಾಜ್ಯದಲ್ಲಿ ತಮಿಳು ಚಿತ್ರಗಳನ್ನು ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕಾರ್ಮಿಕ ಘಟಕದ ಅಧ್ಯಕ್ಷ ಹನುಮಂತರೆಡ್ಡಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಲಭಿಸಿವೆ. ಈಗ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯೂ ಒಲಿದು ಬಂದಿದೆ. ಇಷ್ಟೆಲ್ಲಾ ಹಿರಿಮೆ ಹೊಂದಿರುವ ಕನ್ನಡದ ಬಗ್ಗೆ ಹಗುರುವಾಗಿ ಮಾತನಾಡುವುದು ಕಮಲ್ ಹಾಸನ್ ಅಜ್ಞಾನಕ್ಕೆ ಸಾಕ್ಷಿ ಎಂದು ಟೀಕಿಸಿದರು.

ಕನ್ನಡ ತಮಿಳು ಭಾಷೆಯಿಂದ ಹುಟ್ಟಿದ್ದಲ್ಲ ಎಂಬುದನ್ನು ಹಲವು ಭಾಷಾ ತಜ್ಞರು ಹೇಳಿದ್ದಾರೆ. ತಮಿಳು ಮತ್ತು ಕನ್ನಡ ಒಂದೇ ಮೂಲದಿಂದ ಹುಟ್ಟಿದ ಸೋದರ ಭಾಷೆಗಳಷ್ಟೇ. ಈ ಬಗ್ಗೆ ಮಾಹಿತಿ ಇಲ್ಲದೆ ತನ್ನದೇ ಹೆಚ್ಚುಗಾರಿಕೆ ಎಂದು ಬಿಂಬಿಸಿಕೊಳ್ಳುವ ಪ್ರಯತ್ನದಲ್ಲಿ ಕಮಲ್‌ಹಾಸನ್‌ ಧೋರಣೆ ಖಂಡನೀಯ. ಶಿವರಾಜ್‌ಕುಮಾರ್‌ ಅವರ ಸಮರ್ಥನೆಯೂ ಆಕ್ಷೇಪಾರ್ಹ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.

ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾ ಅಧ್ಯಕ್ಷ ಎಚ್.ಮಂಜುನಾಥ್, ತಾಲೂಕು ಅಧ್ಯಕ್ಷ ಪ್ರವೀಣ್, ಮುಖಂಡರಾದ ಬಿ.ನಯಾಜ್‌ಖಾನ್, ಗಂಗರಾಜು, ಕುಮುದ, ಶಶಿಕಲಾ, ರೇಷ್ಮಾ, ರಾಗಿಣಿ, ಶಾರದಮ್ಮ, ವಿನಯ್, ಕಿರಣ್, ಲಕ್ಷಣ್, ಎನ್.ಮಧು, ಪಿರ್‌ಪಾಷ, ಚಂದ್ರಶೇಖರಯ್ಯ ಮತ್ತಿತರರು ಇದ್ದರು.

1ಕೆಡಿಬಿಪಿ2- ದೊಡ್ಡಬಳ್ಳಾಪುರ ತಾಲೂಕು ಕಚೇರಿ ಮುಂದೆ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು