ಸಾರಾಂಶ
ಕನ್ನಡಪ್ರಭ ವಾರ್ತೆ ಗುಬ್ಬಿ
ಇತಿಹಾಸ ಪ್ರಸಿದ್ದ ಶ್ರೀ ಆಲದಕೊಂಬೆ ಅಮ್ಮನವರ ರಥೋತ್ಸವ ಹಾಗೂ ಹಗಲು ಜಾತ್ರೆಯು ಗುಬ್ಬಿ ಹೊಸಹಳ್ಳಿ ಸಂಸ್ಥಾನದ 33 ಹಳ್ಳಿಗಳ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.ತಾಲೂಕಿನ ಕಸಬಾ ಹೋಬಳಿ ಜಿ.ಹೊಸಹಳ್ಳಿ ಕ್ರಾಸ್ ಹತ್ತಿರ ಇರುವ ಆಲದ ಕೊಂಬೆ ಅಮ್ಮನ ದೇವಾಲಯದಲ್ಲಿ ಮುತ್ತಿನ ಮುಮ್ಮಡಿ ಏಳುನಾಡು ಪ್ರಭುಗಳಾದ ಹುಚ್ಚಿರಪ್ಪಾಜಿ ಅರಸ್ರವರ ನೇತೃತ್ವದಲ್ಲಿ ಈ ಜಾತ್ರೆಯು ಮೂರು ವರ್ಷಕ್ಕೆ ಒಂದು ಸರಿ ನಡೆಯುತ್ತದೆ. ಜಾತ್ರೆಗೆ 33 ಹಳ್ಳಿಗಳ ಭಕ್ತಾದಿಗಳು ಸಾಗರೋಪಾದಿಯಲ್ಲಿ ಸೇರಿದ್ದರು. ಕುಟುಂಬ ಸಮೇತ ಬಂದು ಅಮ್ಮನವರಿಗೆ ಸೇವೆ ಸಲ್ಲಿಸಿ, ತಮ್ಮ ಹರಕೆ ತೀರಿಸಿದರು.
ಜಾತ್ರಾ ವಿಶೇಷ:ಹನ್ನೆರಡನೇ ಶತಮಾನದಲ್ಲಿ ಗುಬ್ಬಿ ಹೊಸಹಳ್ಳಿ ಗ್ರಾಮದಲ್ಲಿ ರಾಜಮನೆತನದ ಆಳ್ವಿಕೆ ಇತ್ತು, ಅವರ ವಂಶಸ್ಥರಾದ ಹುಚ್ಚೀರಪ್ಪಾಜಿ ಅರಸ್ರವರು ಪಟ್ಟಾಧಿಕಾರ ಪಡೆದು ಗುಬ್ಬಿ ಹೊಸಹಳ್ಳಿ ಸಂಸ್ಥಾನದ ಮಹಾನಾಡು ಮುತ್ತಿನ ಮುಮ್ಮಡಿ ಏಳುನಾಡು ಪ್ರಭುಗಳಾಗಿದ್ದು, ರಾಜಮನೆತನದ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರು ಗ್ರಾಮಸ್ಥರ ಸಮ್ಮುಖದಲ್ಲಿ ಕುದುರೆ ಮೇಲೆ ಕುಳಿತುಕೊಂಡು ದೇವಾಲಯಕ್ಕೆ ಆಗಮಿಸಿದ್ದರು.
ಜಾತ್ರೆ ವಿಶೇಷವಾಗಿ 33 ಗ್ರಾಮಗಳ ಮಹಿಳೆಯರು ತಮ್ಮ ಮನೆಯಲ್ಲಿ ದೇವರ ಪೂಜೆ ಮುಗಿಸಿ, ದೇವಿಗೆ ಅತಿ ಪ್ರಿಯವಾದ ತಂಬಿಟ್ಟಿನ ಆರತಿ ಮಾಡಿಕೊಂಡು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಹಾಗೂ ವಾದ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಸಮೇತ ದೇವಾಲಯಕ್ಕೆ ತೆರಳಿ, ದೇವಿಗೆ ಆರತಿ ಬೆಳಗಿ ತಮ್ಮ ಹರಕೆಯನ್ನು ತೀರಿಸಿದರು. ಸಾಯಂಕಾಲ ಪೊಲೀಸ್ ಭದ್ರತೆಯೊಂದಿಗೆ ಅಗ್ನಿಕುಂಡ ತುಳಿಯುವ ಮೂಲಕ ತಮ್ಮ ಹರಕೆಯನ್ನು ದೇವಿಗೆ ಅರ್ಪಿಸಿದರು.ನಾನಾ ಗ್ರಾಮಗಳಿಂದ ಚಿಕ್ಕ ಚಿಕ್ಕ ಕುರ್ಜುಗಳನ್ನು ಎತ್ತಿನ ಗಾಡಿ, ಟ್ರ್ಯಾಕ್ಟರ್ ಮೇಲೆ ವಿವಿಧ ಬಣ್ಣದ ಬಟ್ಟೆ, ಹೂಗಳಿಂದ ಅಲಂಕರಿಸಿ ಮೆರವಣಿಗೆ ಮಾಡಿಕೊಂಡು ಅಮ್ಮನವರ ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಿ ಒಂದು ಕಡೆ ನಿಲ್ಲಿಲಾಗುತ್ತಿತ್ತು. ಈ ಕುರ್ಜುಗಳು ಭಕ್ತರ ಮನಸ್ಸಿಗೆ ಆಕರ್ಷಣೆಯಾಗಿದ್ದವು.
ಪದ್ಮಶ್ರೀ ಪುರಸ್ಕ್ರತ ಸಾಲುಮರದ ತಿಮ್ಮಕ್ಕನವರು ದೇವಸ್ಥಾನಕ್ಕೆ ಆಗಮಿಸಿ ದೈವದರ್ಶನ ಪಡೆದರು.