ಸರಕಾರಿ ನೌಕರರ ಸಾಧಕ ಬಾಧಕಗಳನ್ನು ಅವಲೋಕಿಸಿ, ಅವರಿಗೆ ಶಕ್ತಿ ಕೇಂದ್ರವಾಗಿರುವುದು ರಾಜ್ಯ ಸರಕಾರಿ ನೌಕರರ ಸಂಘ. ನೌಕರರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಆಯಾ ಸರಕಾರದೊಂದಿಗೆ ಸಂವಾದಿಸುತ್ತಾ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಘದ ಪರಿಶ್ರಮ ಅನನ್ಯವಾದುದು ಎಂದು ಆಲೂರು ಸಕಲೇಶಪುರ ಕಟ್ಟಾಯ ವಿಧಾನಸಭೆಯ ಶಾಸಕರಾದ ಸಿಮೆಂಟ್ ಮಂಜುನಾಥ್ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಆಲೂರು ಸರಕಾರಿ ನೌಕರರ ಸಾಧಕ ಬಾಧಕಗಳನ್ನು ಅವಲೋಕಿಸಿ, ಅವರಿಗೆ ಶಕ್ತಿ ಕೇಂದ್ರವಾಗಿರುವುದು ರಾಜ್ಯ ಸರಕಾರಿ ನೌಕರರ ಸಂಘ. ನೌಕರರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಆಯಾ ಸರಕಾರದೊಂದಿಗೆ ಸಂವಾದಿಸುತ್ತಾ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಘದ ಪರಿಶ್ರಮ ಅನನ್ಯವಾದುದು ಎಂದು ಆಲೂರು ಸಕಲೇಶಪುರ ಕಟ್ಟಾಯ ವಿಧಾನಸಭೆಯ ಶಾಸಕರಾದ ಸಿಮೆಂಟ್ ಮಂಜುನಾಥ್ ಅಭಿಪ್ರಾಯಪಟ್ಟರು.ಅವರು ಆಲೂರು ತಾಲೂಕು ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ೨೦೨೫-೨೬ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಆಲೂರು ತಾಲೂಕು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಟ್ಟಡದ ಮುಂದುವರಿದ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆ ಮಾಡಿ ಮಾತನಾಡಿ ರಾಜ್ಯ ಸರಕಾರಿ ನೌಕರರು ನಮ್ಮ ತಾಲೂಕಿನಲ್ಲಿ ಸುಮಾರು ಸಾವಿರಕ್ಕೂ ಅಧಿಕವಿದ್ದು, ಈಗಿರುವ ಕಟ್ಟಡ ಚಿಕ್ಕದಾಗುವುದರಿಂದ ದೊಡ್ಡ ಸಮುದಾಯಭವನ ನಿರ್ಮಿಸಲು ವಿಶಾಲವಾದ ನಿವೇಶನ ಅಗತ್ಯವಿದೆ ಎಂದು ತಾಲೂಕು ಅಧ್ಯಕ್ಷ ಡಿ. ಎಂ. ವರದರಾಜುರವರ ಕೋರಿಕೆ ಮೇರೆಗೆ ಸದ್ಯದಲ್ಲೇ ಪಟ್ಟಣದ ವ್ಯಾಪ್ತಿಯಲ್ಲಿ ಸೂಕ್ತ ನಿವೇಶನ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ವಿವಿಧ ಇಲಾಖಾ ನೌಕರರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ನೌಕರರ ಸಂಘದ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಾಗೂರು ಕೃಷ್ಣೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಲಕ್ಷ್ಮೀಕಾಂತ್, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ.ಕೃಷ್ಣೇಗೌಡ, ತಾಲೂಕು ಸಮನ್ವಯಾಧಿಕಾರಿ ವಿಜಯಕುಮಾರ್, ತಾಲೂಕು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಎಂ.ವರದರಾಜು, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ. ಎಚ್. ರಾಮಚಂದ್ರು, ತಾಲೂಕು ಗೌರವಾಧ್ಯಕ್ಷ ಬಿ. ಆರ್. ಧರ್ಮ, ಖಜಾಂಚಿ ಡಾ. ಅನಿಲ್ ಕುಮಾರ್, ಕಾರ್ಯದರ್ಶಿ ಹೇಮಂತ್, ಮಾಜಿ ಅಧ್ಯಕ್ಷ ನಯನ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಬಿ. ಅಮೃತೇಶ್, ತಾಲ್ಲೂಕು ಕಾರ್ಯದರ್ಶಿ ಎಂ. ಆರ್. ಶ್ರೀನಿವಾಸ, ನಿರ್ದೇಶಕರಾದ ಎಂ. ಆರ್. ವೇಣುಗೋಪಾಲ, ಹಾಜಿರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.