ಚಿತ್ರರಂಗದವರ ಕ್ಷೇಮಾಭಿವೃದ್ಧಿಗೆ ಮಂಡಳಿ ರಚನೆ: ರಾಜ್ಯ ಸರ್ಕಾರ

| Published : Jul 20 2024, 12:54 AM IST

ಸಾರಾಂಶ

ಚಲನಚಿತ್ರ ಕಲಾವಿದರು, ಸಂಗೀತಗಾರರು, ನೃತ್ಯಪಟುಗಳು ಸೇರಿದಂತೆ ಚಿತ್ರರಂಗಕ್ಕೆ ಸೇರಿದ ತಾಂತ್ರಿಕ, ಕಲಾತ್ಮಕ ಅಥವಾ ಇತರ ವ್ಯಕ್ತಿಗಳ ಕ್ಷೇಮಾಭಿವೃದ್ಧಿಗಾಗಿ ಪ್ರತ್ಯೇಕ ಮಂಡಳಿ ರಚನೆಗೆ ಸರ್ಕಾರ ಉದ್ದೇಶಿಸಿದ್ದು, ಅದಕ್ಕಾಗಿ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕವನ್ನು ರೂಪಿಸಿದೆ. ಈ ವಿಧೇಯಕವನ್ನು ಶುಕ್ರವಾರ ಸಂಸದೀಯ ವ್ಯವಹಾರಗಳು ಮತ್ತು ಕಾನೂನು ರಚನೆ ಸಚಿವ ಎಚ್‌.ಕೆ. ಪಾಟೀಲ್‌ ಮಂಡಿಸಿದರು.

ಕನ್ನಡಪ್ರಭ ವಾರ್ತೆ ವಿಧಾನಸಭೆ

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಗದ್ದಲದ ನಡುವೆಯೇ ಕಲಾಪದಲ್ಲಿ ಶುಕ್ರವಾರ ಮೂರು ವಿಧೇಯಕಗಳನ್ನು ಮಂಡಿಸಲಾಯಿತು.ಚಲನಚಿತ್ರ ಕಲಾವಿದರು, ಸಂಗೀತಗಾರರು, ನೃತ್ಯಪಟುಗಳು ಸೇರಿದಂತೆ ಚಿತ್ರರಂಗಕ್ಕೆ ಸೇರಿದ ತಾಂತ್ರಿಕ, ಕಲಾತ್ಮಕ ಅಥವಾ ಇತರ ವ್ಯಕ್ತಿಗಳ ಕ್ಷೇಮಾಭಿವೃದ್ಧಿಗಾಗಿ ಪ್ರತ್ಯೇಕ ಮಂಡಳಿ ರಚನೆಗೆ ಸರ್ಕಾರ ಉದ್ದೇಶಿಸಿದ್ದು, ಅದಕ್ಕಾಗಿ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕವನ್ನು ರೂಪಿಸಿದೆ. ಈ ವಿಧೇಯಕವನ್ನು ಶುಕ್ರವಾರ ಸಂಸದೀಯ ವ್ಯವಹಾರಗಳು ಮತ್ತು ಕಾನೂನು ರಚನೆ ಸಚಿವ ಎಚ್‌.ಕೆ. ಪಾಟೀಲ್‌ ಮಂಡಿಸಿದರು.ಈ ಮಂಡಳಿಯು ಕಾರ್ಮಿಕ ಇಲಾಖೆ ಅಡಿಯಲ್ಲಿ ಕೆಲಸ ಮಾಡಲಿದ್ದು, ಚಲನಚಿತ್ರ ರಂಗಕ್ಕೆ ಸೇರಿದವರ ಕ್ಷೇಮಾಭಿವೃದ್ಧಿಗಾಗಿ ಮಂಡಳಿ ಕೆಲಸ ಮಾಡಲಿದೆ. ಅದಕ್ಕಾಗಿ ಚಲನಚಿತ್ರ ಟಿಕೆಟ್‌ ಸೇರಿದಂತೆ ಇತರ ಶುಲ್ಕಗಳಲ್ಲಿ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಉಪಕರವನ್ನು ವಿಧಿಸಲು ವಿಧೇಯಕದಲ್ಲಿ ಅವಕಾಶ ನೀಡಲಾಗುತ್ತಿದೆ.ಅದೇ ರೀತಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ 1 ಮತ್ತು 2, ಆರ್ಥಿಕ ಸಲಹೆಗಾರ, ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಹುದ್ದೆಗಳಿಗೆ ಶಾಸಕರನ್ನು ನೇಮಿಸುವ ಸಂಬಂಧ ಇದ್ದಂತಹ ನಿರ್ಬಂಧವನ್ನು ತೆಗೆಯಲು ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) ವಿಧೇಯಕಕ್ಕೆ ಎರಡನೇ ತಿದ್ದುಪಡಿ ತರಲಾಗುತ್ತಿದ್ದು, ಆ ವಿಧೇಯಕವನ್ನೂ ಮಂಡಿಸಲಾಯಿತು. ಜತೆಗೆ ತಂಬಾಕು ಉತ್ಪನ್ನ ಮತ್ತು ಪಾನ್‌ ಮಸಾಲ ಉತ್ಪಾದನೆಯಲ್ಲಿ ಬಳಸುವ ಯಂತ್ರಗಳಿಗೆ ನೋಂದಣಿ ಹಾಗೂ ನೋಂದಣಿ ಮಾಡದಿರುವವರಿಗೆ ದಂಡ ವಿಧಿಸಲು ಕರ್ನಾಟಕ ಸರಕು ಮತ್ತು ಸೇವೆಗಳ ವಿಧೇಯಕಕ್ಕೆ ಹೊಸ ಕಲಂ ಸೇರಿಸಿ ತಿದ್ದುಪಡಿ ವಿದೇಯವನ್ನು ಎಚ್‌.ಕೆ. ಪಾಟೀಲ್‌ ಮಂಡಿಸಿದರು. ಈ ಮೂರು ವಿಧೇಯಕಗಳ ಮಂಡನೆಗೆ ಧ್ವನಿ ಮತದ ಮೂಲಕ ಒಪ್ಪಿಗೆ ನೀಡಲಾಯಿತು.