ಷಡ್ಯಂತ್ರಕ್ಕೆ ಸರ್ಕಾರ ಬಲಿಯಾಗಲ್ಲ

| Published : Sep 25 2024, 01:00 AM IST

ಸಾರಾಂಶ

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅರ್ಜಿ ವಜಾ ಮಾಡಿದ ಹೈಕೋರ್ಟ್ ತೀರ್ಪು ಕುರಿತು ಕಾನೂನಾತ್ಮಕವಾಗಿ ಇದನ್ನು ನಾವು ಎದುರಿಸುತ್ತೇವೆ. ಹಾಗೆಂದ ಮಾತ್ರಕ್ಕೆ ನಮ್ಮ ಸಿಎಂ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ. ಇಂತಹ ಷಡ್ಯಂತ್ರಕ್ಕೆ ಕರ್ನಾಟಕ ಸರ್ಕಾರವನ್ನು ಬಲಿ ಕೊಡಲು ಸಾಧ್ಯವಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅರ್ಜಿ ವಜಾ ಮಾಡಿದ ಹೈಕೋರ್ಟ್‌ ತೀರ್ಪು ಕುರಿತು ಕಾನೂನಾತ್ಮಕವಾಗಿ ಇದನ್ನು ನಾವು ಎದುರಿಸುತ್ತೇವೆ. ಹಾಗೆಂದ ಮಾತ್ರಕ್ಕೆ ನಮ್ಮ ಸಿಎಂ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ. ಇಂತಹ ಷಡ್ಯಂತ್ರಕ್ಕೆ ಕರ್ನಾಟಕ ಸರ್ಕಾರವನ್ನು ಬಲಿ ಕೊಡಲು ಸಾಧ್ಯವಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಸ್ಪಷ್ಟಪಡಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತೆ ಸಿದ್ದರಾಮಯ್ಯ ನೇತೃತ್ವದ 135 ಶಾಸಕರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಸಿದ್ದರಾಮಯ್ಯನವರೇ ಯಾವುದೇ ಕಾರಣಕ್ಕೂ ವಿಚಲಿತರಾಗಬೇಡಿ. ನಿಮ್ಮ ಜೊತೆಗೆ ಡಿಕೆಶಿ, ಸಚಿವರು, ಶಾಸಕರು ಇದ್ದೇವೆ ಎಂದು ಧೈರ್ಯ ತುಂಬಿದರು.

ಮುಂದೆ ಕಾನೂನು ಹೋರಾಟ ಮಾಡಲು ಅವಕಾಶ ಇದೆ. ಕಾನೂನು ಹೋರಾಟ ಮಾಡಲು ನಾವು ಸಿದ್ಧರಿದ್ದೇವೆ. ತನಿಖೆಗೆ ಆದೇಶ ಆಗಿದ್ರೆ ಆಗಲಿ, ತಪ್ಪಿತಸ್ಥರಾದ ಮೇಲೆ ವಿಚಾರ ಮಾಡ್ತೀವಿ. ಇದರಲ್ಲಿ ನೈತಿಕತೆ ಪ್ರಶ್ನೆಯೇ ಇಲ್ಲ. ಇದರಲ್ಲಿ ಷಡ್ಯಂತ್ರ ಇದೆ. ರಾಜ್ಯಪಾಲರ ಷಡ್ಯಂತ್ರಕ್ಕೆ ನಾವು ಬಲಿಯಾಗಲ್ಲ. ಇಂತಹವುಗಳನ್ನು ಎದುರಿಸಲು ಕಾನೂನಿನಲ್ಲಿ ಅವಕಾಶ ಇದಾವೆ ಎಂದು ಹೇಳಿದರು.

ದ್ವಿಸದಸ್ಯ ಪೀಠ, ಸುಪ್ರೀಂಕೋರ್ಟ್‌ಗೆ ಹೋಗಿ ನ್ಯಾಯ ದೊರಕಿಸಿಕೊಳ್ತೀವಿ. ನಮ್ಮ ಶಾಸಕರು, ಹೈಕಮಾಂಡ್ ಸಿದ್ದರಾಮಯ್ಯ ಜೊತೆಗಿದ್ದಾರೆ. 3-4 ಜನ ಸಿಎಂ ಸೀಟ್‌ಗೆ ಪೈಪೋಟಿ ನಡೆಸಿದ್ದಾರೆಂಬ ವಿಚಾರದ ಕುರಿತು ಮಾತನಾಡಿದ ಅವರು, ಇವೆಲ್ಲ ಊಹಾಪೋಹಗಳು. ಇವಕ್ಕೆಲ್ಲ ಉತ್ತರ ಕೊಡಲ್ಲ. ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ಅವರನ್ನೇ ಆಯ್ಕೆ ಮಾಡಿ ಜನ ಕಳಿಸಿದ್ದಾರೆ. ಇಂತಹ ಕೇಂದ್ರ ಸರ್ಕಾರದ ಷಡ್ಯಂತ್ರಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಬಲಿ ಕೊಡಲು ಸಾಧ್ಯವಿಲ್ಲ. ಇವರ ಕುತಂತ್ರಗಳನ್ನು ಜನತೆಗೆ ತಿಳಿಸ್ತೀವಿ. ಬಿಜೆಪಿ ಶಾಸಕರು ತಪ್ಪು ಮಾಡಿದ್ದಾರೆ ಅಂದ್ರೆ ಪ್ರಾಸಿಕ್ಯೂಷನ್‌ ಕೊಡಲ್ಲ, ಇನ್ನೂ ತನಿಖೆ ಆಗದ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡ್ತಾರೆ ಅಂದರೆ ತಪ್ಪು ಅಲ್ಲವೇ ಎಂದು ಪ್ರಶ್ನಿಸಿದರು.

ಷಡ್ಯಂತ್ರ ಬಯಲಿಗೆ ಎಳೆಯುತ್ತೇವೆ:

ಗವರ್ನರ್ ಆದೇಶಕ್ಕೆ ತಡೆ ಕೋರಿದ್ದೆವು. ಹೈಕೋರ್ಟ್‌ ಅದನ್ನೇ ತಡೆ ನೀಡಿಲ್ಲ. ನಮಗೆ ಇನ್ನೂ ಒಂದು ಕಡೆ ತಡೆ ನೀಡುವಂತೆ ಕೇಳಲು ಅವಕಾಶ ಇದೆ. ದ್ವಿಸದಸ್ಯ ಪೀಠ, ಸುಪ್ರೀಂ ಕೋರ್ಟ್‌ನಲ್ಲಿ ನಾವು ಅವಕಾಶ ಕೇಳುತ್ತೇವೆ. ಗವರ್ನರ್ ಮಾಡಿದಂತಹ ಷಡ್ಯಂತ್ರವನ್ನು ಬಯಲಿಗೆ ಎಳೆಯುತ್ತೇವೆ. ಸರ್ಕಾರ ಗಟ್ಟಿ ಆಗಿರುತ್ತದೆ. ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಯುತ್ತಾರೆ. ಸಿಎಂ ಸ್ಥಾನಕ್ಕೆ ಯಾವುದೇ ಪೈಪೋಟಿ ಇಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸುಭದ್ರ ಇದೆ. ಇಂತಹ ಷಡ್ಯಂತ್ರಕ್ಕೆ ಸರ್ಕಾರ ಬಲಿ ಆಗಲ್ಲ ಎಂದು ಸಚಿವ ತಿಮ್ಮಾಪುರ ಪ್ರತಿಪಾದಿಸಿದರು.

---