ಸಾರಾಂಶ
ಜಲಾಶಯ ಗೇಟ್ ಕಿತ್ತುಹೋಗಿರುವುದಲ್ಲಿ ಅಧಿಕಾರಿಗಳ ತಪ್ಪಿನ ಜತೆಗೆ ಸರ್ಕಾರದ ತಪ್ಪು ಕೂಡ ಇದೆ ಎಂದು ಮಾಜಿ ಸಚಿವ ಶ್ರೀರಾಮುಲು ಆರೋಪಿಸಿದ್ದಾರೆ.
ಹೊಸಪೇಟೆ: ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ನಂಬರ್ 19 ಕಿತ್ತು ಹೋಗಿದ್ದಕ್ಕೆ ಅಧಿಕಾರಿಗಳು ಹಾಗೂ ಸರ್ಕಾರವೇ ಹೊಣೆ ವಹಿಸಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ದೂರಿದರು.
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಮುರಿದ ಹಿನ್ನೆಲೆಯಲ್ಲಿ ಮಂಗಳವಾರ ಭೇಟಿ ನೀಡಿ, ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಅಧಿಕಾರಿಗಳ ತಪ್ಪಿನ ಜತೆಗೆ ಸರ್ಕಾರದ ತಪ್ಪು ಕೂಡ ಇದೆ. ರೈತರಿಗೆ ಸಮರ್ಪಕವಾಗಿ ಪರಿಹಾರ ಕೊಡಬೇಕು. ಅದರ ಜತೆಗೆ ಎಲ್ಲ ಗೇಟ್ಗಳನ್ನು ತಜ್ಞರಿಂದ ಪರಿಶೀಲಿಸಬೇಕು ಎಂದರು.ಕಳೆದ ಸರ್ಕಾರದಲ್ಲಿ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣಕ್ಕೆ ಡಿಪಿಆರ್ ಆಗಿದೆ. ಕೂಡಲೇ ಸರ್ಕಾರ ಸಮನಾಂತರ ಜಲಾಶಯ ನಿರ್ಮಾಣದ ಕುರಿತು ಆಂಧ್ರಪ್ರದೇಶ, ತೆಲಂಗಾಣ ಸರ್ಕಾರಗಳ ಜೊತೆ ಚರ್ಚೆ ನಡೆಸಬೇಕು ಎಂದರು.
ನದಿ ಪಾತ್ರದ 30ಕ್ಕೂ ಹೆಚ್ಚು ಗ್ರಾಮಗಳ ಜನಸಾಮಾನ್ಯರು ಪ್ರವಾಹ ಎದುರಾಗುವ ಆತಂಕ ವ್ಯಕ್ತಪಡಿಸಿದ್ದು, ಬರಗಾಲದಿಂದ ನಿರಂತರ ತತ್ತರಿಸಿದ್ದ ಜನತೆಗೆ ಜಲಾಶಯ ತುಂಬಿದ ಖುಷಿಯಲ್ಲಿರುವಾಗಲೇ 19ನೇ ನಂಬರ್ ಕ್ರಸ್ಟ್ ಗೇಟ್ ಮುರಿದ ಪರಿಣಾಮ ಸಂಗ್ರಹಿತ ನೀರು ಹೊರಹೋದರೆ ಮುಂದೆ ಕೃಷಿಗೆ ತೊಂದರೆ ಎದುರಾಗುವ ಆತಂಕದಲ್ಲಿದ್ದಾರೆ. ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ನೆರೆ ಭೀತಿಯಲ್ಲಿರುವ ಗ್ರಾಮಗಳ ಜನರನ್ನು ಸ್ಥಳಾಂತರಿಸಿ, ಕೂಡಲೇ ಜಲಾಶಯದ ಕ್ರಸ್ಟ್ ಗೇಟ್ ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಶಾಸಕ ಕೃಷ್ಣನಾಯ್ಕ, ಮಾಜಿ ಶಾಸಕರಾದ ಸುರೇಶ್ ಬಾಬು, ಬಸವರಾಜ್ ಧಡೆಸೂಗುರ ಮತ್ತಿತರರಿದ್ದರು.