ಜಾನಪದ ಪರಿಷತ್ ಕಾರ್ಯಕ್ರಮಗಳಿಗೂ ಸರ್ಕಾರ ಅನುದಾನ ನೀಡಬೇಕು
KannadaprabhaNewsNetwork | Published : Oct 21 2023, 12:30 AM IST
ಜಾನಪದ ಪರಿಷತ್ ಕಾರ್ಯಕ್ರಮಗಳಿಗೂ ಸರ್ಕಾರ ಅನುದಾನ ನೀಡಬೇಕು
ಸಾರಾಂಶ
ಜಾನಪದ ಪರಿಷತ್ ಕಾರ್ಯಕ್ರಮಗಳಿಗೂ ಸರ್ಕಾರ ಅನುದಾನ ನೀಡಬೇಕು
- ಚಿಕ್ಕಮಗಳೂರಿನಲ್ಲಿ ನಾಲ್ಕನೇ ಜಿಲ್ಲಾ ಜಾನಪದ ಸಮ್ಮೇಳನ, ನೋಡುಗರ ಕಣ್ಮನ ಸೆಳೆದ ಜಾನಪದ ಕಲಾ ತಂಡಗಳ ಮೆರವಣಿಗೆ, ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡುವಂತೆ ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯಕ್ರಮಗಳಿಗೂ ಅನುದಾನ ನೀಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ಸದ್ಯದಲ್ಲೇ ತಾವು ಮತ್ತು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರಾಜ್ಯದಲ್ಲಿ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಜಾನಪದ ಪರಿಷತ್ತಿನ ಕಾರ್ಯಕ್ರಮಗಳಿಗೂ ಅನುದಾನ ನೀಡುವಂತೆ ಮನವೊಲಿಸ ಲಾಗುವುದು ಎಂದು ಭರವಸೆ ನೀಡಿದರು. ಸಾಹಿತ್ಯ, ಸಂಸ್ಕೃತಿ ಮತ್ತು ಕಲೆ ಉಳಿದಿರುವುದು ಪ್ರಪಂಚದಲ್ಲಿ ಭಾರತದಲ್ಲಿ ಮಾತ್ರ ಅದೇ ರೀತಿ ಜಾನಪದ ಕಲೆ ಉಳಿದಿರುವುದು ನಮ್ಮ ರಾಜ್ಯ ಮತ್ತು ನಮ್ಮ ಜಿಲ್ಲೆಯಲ್ಲಿ ಮಾತ್ರ ಎಂದ ಅವರು, ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಉಳಿಸುವ ಮಹತ್ತರ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಜನಪದ ಕಲೆ, ಸಾಹಿತ್ಯ, ಸಂಸ್ಕೃತಿ, ದಾಸಸಾಹಿತ್ಯ, ತತ್ವಪದ ಮತ್ತು ವಚನ ಸಾಹಿತ್ಯದ ಅಡಿಯಲ್ಲಿ ಮತ್ತು ಸಂಬಂಧಗಳ ಅಡಿಯಲ್ಲಿ ನಮ್ಮ ಹಿರಿಯರು ಈ ನಾಡನ್ನು ಕಟ್ಟಿ ಬೆಳೆಸಿದ್ದಾರೆ. ಆದರೆ, ಇಂದು ತಂದೆ ತಾಯಿ, ಅಕ್ಕ ತಂಗಿ, ಅಣ್ಣ ತಮ್ಮ ಸೇರಿದಂತೆ ಯಾವುದೇ ಸಂಬಂಧಗಳೂ ಉಳಿದಿಲ್ಲ ಎಂದು ವಿಷಾಧಿಸಿದರು. ಕರ್ನಾಟಕ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಪ್ರೋ. ಹಿ.ಶಿ.ರಾಮಚಂದ್ರೇಗೌಡ ಮಾತನಾಡಿ, ಜಾನಪದವನ್ನು ಕೈಬಿಟ್ಟ ಪರಿಣಾಮ ಸೃಷ್ಟಿ ಮಾಡುವವರಾಗಿದ್ದ ನಾವಿಂದು ಕೊಳ್ಳುವವರಾಗಿದ್ದೇವೆ. ತಿನ್ನುವವರಾಗಿದ್ದೇವೆ. ರಾಕ್ಷಸರಾಗುತ್ತಿದ್ದೇವೆ. ಜಾನಪದ ಸಾಹಿತ್ಯ ಮತ್ತು ಸಂಸ್ಕೃತಿ ಉಳಿಯಬೇಕಾದರೆ ಇಂದಿನ ಪೀಳಿಗೆ ಅವುಗಳನ್ನು ಕಲಿಯಬೇಕು. ಜಾನಪದ ಗೀತೆಗಳನ್ನು ಕಲೆಯನ್ನು ಕಲಿಯುವುದರಿಂದ ನಮಗೆ ಯಾವುದೇ ಅಪಮಾನವಾಗುವುದಿಲ್ಲ. ಕರಾವಳಿಯಲ್ಲಿರುವ ಎಲ್ಲಾ ಕಲಾವಿದರೂ ಉನ್ನತ ಶಿಕ್ಷಣ ಮಾಡಿದ್ದಾರೆ. ಅದೇ ರೀತಿ ನಮ್ಮಲ್ಲೂ ಪದವಿ ಮಾಡಿದವರು ಸಹ ಜಾನಪದ ಕಲಿಯಬೇಕು. ಹಾಗಾದಾಗ ಮಾತ್ರ ಅದು ಮುಂದಿನ ತಲೆಮಾರಿಗೆ ಉಳಿಯುತ್ತದೆ ಎಂದರು. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳಿಗೆ ನೀಡುತ್ತಿರುವಂತೆ ರಾಜ್ಯ ಸರ್ಕಾರ ಜಾನಪದ ಸಮ್ಮೇಳನಗಳಿಗೂ ಅನುದಾನವನ್ನು ನೀಡಬೇಕು ಎಂದು ಹೇಳಿದರು. ---ಬಾಕ್ಸ್-- ಯುವ ಕಲಾವಿದರಿಗೂ ಮಾಶಾಸನ ನೀಡಬೇಕು: ಬೆಳವಾಡಿ ಪರಮೇಶ್ವರಪ್ಪ ಆಗ್ರಹ ಜಾನಪದ ಕಲಾವಿದರಿಗೆ ಮಾಶಾಸನ ನೀಡಲು ರಾಜ್ಯ ಸರ್ಕಾರ 60 ವರ್ಷ ವಯಸ್ಸನ್ನು ನಿಗಧಿಗೊಳಿಸಿದೆ. ಇದರಿಂದಾಗಿ ವಯೋವೃದ್ಧ ಕಲಾವಿದರು ಮಾತ್ರ ಕಂಡು ಬರುತ್ತಿದ್ದಾರೆ. ಯುವಜನತೆ ಕಲೆ ಕಲಿಯಲು ಆಸಕ್ತಿ ತೋರುತ್ತಿಲ್ಲ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಬೆಳವಾಡಿ ಪರಮೇಶ್ವರಪ್ಪ ವಿಷಾಧಿಸಿದರು. ಕಲಾವಿದರಿಗೆ ಮತ್ತು ಕಲೆಗೆ ಯಾವುದೇ ವಯಸ್ಸಿನ ಹಂಗಿಲ್ಲ. ಕಲೆ ಎಲ್ಲರಿಗೂ ಒಲಿಯುತ್ತದೆ ಎಂದ ಅವರು, ಯುವ ಜನತೆಯೂ ಸಹ ಕಲೆಯನ್ನು ಕಲಿತು ಜಾನಪದ ಉಳಿಯಬೇಕಾದರೆ ರಾಜ್ಯ ಸರ್ಕಾರ ಅವರಿಗೂ ಮಾಶಾಸನ ನೀಡಬೇಕು. ಮಾಶಾಸನದ ಮೊತ್ತ ಹೆಚ್ಚಿಸಬೇಕು ಎಂದು ಸಲಹೆ ಮಾಡಿದರು. ----------------- ---ಬಾಕ್ಸ್--- ಚಿಕ್ಕಮಗಳೂರು: ಜಾನಪದವನ್ನು ಪುನರುತ್ಥಾನಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ನಗರದ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ಕಲಾಮಂದಿರದಲ್ಲಿ ಆಯೋಜಿಸಿದ್ದ 4ನೇ ಜಿಲ್ಲಾ ಜಾನಪದ ಸಮ್ಮೇಳನ ಜಾನಪದ ಲೋಕವನ್ನೆ ಅನಾವರಣ ಗೊಳಿಸಿತು. ಸಮ್ಮೇಳನದಲ್ಲಿ ಪ್ರಾರ್ಥನೆ, ಸ್ವಾಗತದಿಂದ ಹಿಡಿದು ವಂದನಾರ್ಪಣೆಯವರೆಗೆ ನಡೆದ ಎಲ್ಲಾ ಕಾರ್ಯಕ್ರಮಗಳೂ ಜಾನಪದ ಸಿರಿಯನ್ನು ಪ್ರದರ್ಶಿಸಿತು, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಕಜಾಪ ರಾಜ್ಯಾಧ್ಯಕ್ಷ ಪ್ರೊ. ಹಿ.ಶಿ.ರಾಮಚಂದ್ರೇಗೌಡ, ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಸೇರಿದಂತೆ ಭಾಗವಹಿಸಿದ್ದ ಗಣ್ಯರು ಭಾಷಣದ ವೇಳೆ ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು. ಗ್ರಾಮೀಣ ವಾದ್ಯಗಳ ಭರಾಟೆ, ವೀರಗಾಸೆಯ ಅಬ್ಬರ ಕಲಾಮಂದಿರದಲ್ಲಿ ಅನುರಣಿಸಿತು. ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಗೋಷ್ಠಿಗಳು, ಉಪನ್ಯಾಸ, ಜಾನಪದ ಗೀತೆಗಳ ಗಾಯನ, ನೃತ್ಯ ಜರುಗಿದವು. ಬೆಳಿಗ್ಗೆ ಕಲಾಮಂದಿರದಲ್ಲಿ ಕಜಾಪ ತಾಲೂಕು ಅಧ್ಯಕ್ಷ ಅತ್ತಿಕಟ್ಟೆ ಗುರುನಾಥಗೌಡ ರಾಷ್ಟ್ರಧ್ವಜರೋಹಣ, ಹಿರಿಯ ವೀರಗಾಸೆ ಕಲಾವಿದ ಡಾ. ಮಾಳೇನಹಳ್ಳಿ ಬಸಪ್ಪ ನಾಡಧ್ವಜ ಕಜಪ ಜಿಲ್ಲಾಧ್ಯಕ್ಷ ಜೆ.ಬಿ.ಸುರೇಶ್ ಜಾನಪದ ಧ್ವಜರೋಹಣವನ್ನು ನೆರವೇರಿಸಿದರು. ತಾಲೂಕು ಕಚೇರಿ ಆವರಣದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ವಿವಿಧ ಜಾನಪದ ಕಲಾತಂಡಗಳ ನಡುವೆ ಸಮ್ಮೇಳನಾಧ್ಯಕ್ಷ ಹಿರಿಯ ಭಜನಾ ಕಲಾವಿದ ಬೆಳವಾಡಿ ಪರಮೇಶ್ವರಪ್ಪ ಅವರನ್ನು ಸಾರೋಟಿನಲ್ಲಿ ಕೂರಿಸಿ, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕಲಾಮಂದಿರಕ್ಕೆ ಕರೆತರಲಾಯಿತು. ಪುರುಷರು ಮತ್ತು ಮಹಿಳೆಯರ ವೀರಗಾಸೆ, ಡೊಳ್ಳುಕುಣಿತ, ಗ್ರಾಮೀಣ ವಾದ್ಯಗಳು, ಭಜನಾ ತಂಡಗಳು, ಚಾಮ ಕುಣಿತ, ಪೂಜಾ ಕುಣಿತ, ಕೋಲಾಟ, ದಕ್ಷಿಣ ಕನ್ನಡದ ತಟ್ಟಿ ಗೊಂಬೆಗಳ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾರ್ಗದುದ್ದಕ್ಕೂ ಜಾನಪದದ ವೈಭವ ಕಳೆ ಕಟ್ಟಿತ್ತು. ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಪಾಳ್ಗೊಂಡಿದ್ದರು. ಕಲಾಮಂದಿರದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಸಮ್ಮೇಳನ ವನ್ನು, ಜಾನಪದ ವಸ್ತುಗಳ ಪ್ರದರ್ಶನವನ್ನು ವಿಪ ಸದಸ್ಯ ಎಸ್.ಎಲ್.ಭೋಜೇಗೌಡ ಉದ್ಘಾಟಿಸಿದರು. ಜಾನಪದ ವಾದ್ಯಗಳ ವೈಭವಕ್ಕೆ ಹಿರಿಯ ಪತ್ರಕರ್ತ ಸ.ಗಿರಿಜಶಂಕರ್ ಚಾಲನೆ ನೀಡಿದರು. ಕಜಾಪ ರಾಜ್ಯಾಧ್ಯಕ್ಷ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಜಾನಪದ ಸಿರಿ ಪ್ರಶಸ್ತಿ, ಸ್ಮರಣಿಕೆಗಳ ಬಿಡುಗಡೆಗೊಳಿಸಿದರು. ಸಮ್ಮೇಳನಾಧ್ಯಕ್ಷ ಬೆಳವಾಡಿ ಪರಮೇಶ್ವರಪ್ಪ ಅವರನ್ನು ಸನ್ಮಾನಿಸಲಾಯಿತು. 18 ಕಲಾವಿದರಿಗೆ ಜನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆಶಾಕಿರಣ ಅಂದಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್, ಜಾನಪದ ಅಕಾಡೆಮಿ ಮಾಜಿ ಸದಸ್ಯೆ ಮುಗುಳಿ ಲಕ್ಷ್ಮೀದೇವಮ್ಮ,ಸಾಹಿತಿ ಜಿ.ಬಿ.ವೀರೂಪಾಕ್ಷ, ಕಜಾಪ ಹರಿಹರಪುರ ಹೋಬಳಿ ಅಧ್ಯಕ್ಷೆ ತಮನ್ನಾ ಮುನಾವರ್ ಸೇರಿದಂತೆ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲೆಯ ಎಲ್ಲಾ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಗಮನ ಸೆಳೆದ ವಸ್ತು ಪ್ರದರ್ಶನ : ಜಾನಪದ ಸಮ್ಮೇಳನದ ಅಂಗವಾಗಿ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಜಾನಪದ ಪರಿಕರಗಳ ವಸ್ತು ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು. ಪ್ರಾಚೀನ ಕಾಲದ ನೀರು ಸೇದುವ ರಾಟೆ, ಕೃಷಿ ಪರಿಕರಗಳು, ರಾಗಿ ಬೀಸುವ ಕಲ್ಲು, ಮೀನು ಹಿಡಿಯುವ ಕೂಳಿ, ಹಸೆಮಣೆ ಸೇರಿದಂತೆ ಪ್ರದರ್ಶನದಲ್ಲಿ ಇಡಲಾಗಿದ್ದ ವಸ್ತುಗಳು ನೋಡುಗರ ಕಣ್ಮನ ಸೆಳೆದವು. 20 ಕೆಸಿಕೆಎಂ 1 ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ನಡೆದ ನಾಲ್ಕನೇ ಜಿಲ್ಲಾ ಜಾನಪದ ಸಮ್ಮೇಳನವನ್ನು ಶಾಸಕ ಎಚ್.ಡಿ. ತಮ್ಮಯ್ಯ ಅವರು ಉದ್ಘಾಟಿಸಿದರು. 20 ಕೆಸಿಕೆಎಂ 2 ಚಿಕ್ಕಮಗಳೂರಿನಲ್ಲಿ ಶುಕ್ರವಾರ ಜಾನಪದ ಸಮ್ಮೇಳನದ ಅಂಗವಾಗಿ ಕಲಾ ತಂಡಗಳಿಂದ ಮೆರವಣಿಗೆ ನಡೆಯಿತು.