ಸಕಲೇಶಪುರ: ಸೆಸ್ಕ್ ಶಾಖಾ ಕಚೇರಿ ಯಸಳೂರಿನಲ್ಲಿ ನಿರ್ಮಾಣವಾಗುವುದರಿಂದ ಈ ಭಾಗದ ಗ್ರಾಮಸ್ಥರು ಸಣ್ಣಪುಟ್ಟ ಕೆಲಸಗಳಿಗೆ ಅಲೆದಾಡುವುದು ತಪ್ಪುತ್ತದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ತಾಲೂಕಿನ ಯಸಳೂರು ಗ್ರಾಮದಲ್ಲಿ ನೂತನ ಸೆಸ್ಕ್ ಕಚೇರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ ಯಸಳೂರು ಗ್ರಾಮದಲ್ಲಿ ಸುಮಾರು ೧ ಕೋಟಿ ರುಪಾಯಿ ವೆಚ್ಚದಲ್ಲಿ ಸೆಸ್ಕ್ ಶಾಖಾ ಕಚೇರಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ಹಲವಡೆ ಕಾಡಾನೆಗಳು ವಿದ್ಯುತ್ ಕಂಬಗಳನ್ನು ಬೀಳಿಸಿರುವ ಉದಾಹರಣೆಗಳಿದೆ. ಕಾಡಾನೆ ಹಾವಳಿ ಪ್ರದೇಶಗಳಲ್ಲಿ ಜನ ಸದಾ ಆತಂಕದಲ್ಲಿ ಸಂಚರಿಬೇಕಾಗಿದೆ. ಕಾಡಾನೆ ಹಾವಳಿ ಪ್ರದೇಶಗಳಲ್ಲಿ ಸಂಜೆಯ ನಂತರ ಬೆಳಿಗ್ಗೆವರೆಗೆ ಸಂಪೂರ್ಣವಾಗಿ ಬೀದಿದೀಪಗಳು ಇರುವಂತೆ ನೋಡಿಕೊಳ್ಳಬೇಕಾಗಿದೆ. ಹೀಗಾಗಿ ಸರ್ಕಾರ ಗಮನಹರಿಸಿ ಕಾಡಾನೆ ಹಾವಳಿ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಾಮಗಾರಿಗಳಿಗಾಗಿ ವಿಶೇಷ ಅನುದಾನ ನೀಡಬೇಕು ಎಂದರು.