ಸರ್ಕಾರ ಖಾಲಿ ಹುದ್ದೆಗಳ ಶೀಘ್ರ ಭರ್ತಿಗೆ ಮುಂದಾಗಲಿ

| Published : Nov 05 2025, 12:15 AM IST

ಸಾರಾಂಶ

ದಲಿತ ದಮನಿತರ ಪರವಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಳಮೀಸಲಾತಿ ಜಾರಿ ಮಾಡುವಲ್ಲಿ ದಲಿತರಲ್ಲಿ ಒಗ್ಗಟ್ಟು ಮೂಡಿಸುವ ಬದಲಿಗೆ ವೈಮನಸ್ಸು ಉಂಟು ಮಾಡಿದೆ. ಈ ವಿಚಾರ ಸೂಕ್ಷ್ಮ ವಾಗಿರುವುದರಿಂದ ಸರಿಯಾಗಿ ನಿಭಾಯಿಸಬೇಕಿತ್ತು. ಒಗ್ಗಟು ಸ್ಥಾಪನೆ ಬದಲಿಗೆ ಅಪನಂಬಿಕೆ ಬಲಿಯುವಂತೆ ಆಗಿರುವುದು ಬೇಸರ ತಂದಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ 2023 ರಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಖಾಲಿಯಿರುವ ಹುದ್ದೆಗಳ ಭರ್ತಿಗೆ ಕ್ರಮವಹಿಸಬೇಕು ಎಂದು ಪರಿಶಿಷ್ಟ ಜಾತಿ, ವರ್ಗದ ಸರ್ಕಾರಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ್ ಒತ್ತಾಯಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ವಿವಿಧ ಇಲಾಖೆಗಳಲ್ಲಿ 7.70 ಲಕ್ಷ ಮಂಜೂರಾತಿ ಹುದ್ದೆಗಳಿವೆ. ಇವುಗಳ ಪೈಕಿ 2.80 ಲಕ್ಷ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಲಿತರಲ್ಲಿ ಅಪನಂಬಿಕೆ ಸೃಷ್ಟಿ

ದಲಿತ ದಮನಿತರ ಪರವಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಳಮೀಸಲಾತಿ ಜಾರಿ ಮಾಡುವಲ್ಲಿ ದಲಿತರಲ್ಲಿ ಒಗ್ಗಟ್ಟು ಮೂಡಿಸುವ ಬದಲಿಗೆ ವೈಮನಸ್ಸು ಉಂಟು ಮಾಡಿದೆ. ಈ ವಿಚಾರ ಸೂಕ್ಷ್ಮ ವಾಗಿರುವುದರಿಂದ ಸರಿಯಾಗಿ ನಿಭಾಯಿಸಬೇಕಿತ್ತು. ಒಗ್ಗಟು ಸ್ಥಾಪನೆ ಬದಲಿಗೆ ಅಪನಂಬಿಕೆ ಬಲಿಯುವಂತೆ ಆಗಿರುವುದು ಬೇಸರ ತಂದಿದೆ ಎಂದರು.

ಸಿಎಂ ಬದಲಾದರೆ ದಲಿತರಿಗೆ ಸ್ಥಾನ ನೀಡಿ ದೂರದೃಷ್ಟಿಯ ಮುಖ್ಯಮಂತ್ರಿ ಸಿದ್ದರಾಮಯ್ಯ 5 ವರ್ಷ ಅವರೇ ಇರಬೇಕು. ಒಂದು ವೇಳೆ ಬದಲಾವಣೆ ಆಗಿದ್ದೇ ಆದಲ್ಲಿ ದಲಿತ ಮುಖಂಡರಿಗೆ ಆ ಸ್ಥಾನ ನೀಡಿ. ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷ ಆದರೂ ರಾಜಕೀಯದಲ್ಲಿ ಈವರೆಗೆ ಸಾಮಾಜಿಕ ನ್ಯಾಯ ಬಂದಿಲ್ಲ.ದಲಿತರಲ್ಲಿ ಶುದ್ಧತೆಯ ನಾಯಕರಿದ್ದಾರೆ. ಈ ಪೈಕಿ, ಕೆ.ಹೆಚ್.ಮುನಿಯಪ್ಪ, ಸತೀಶ್ ಜಾರಕಿಹೊಳಿ, ಗೃಹ ಸಚಿವ ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಇದ್ದಾರೆ ಎಂದರು. ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದಾಕ್ಷಣ ದಲಿತರ ಉದ್ಧಾರ ಆಗಲಿದೆ ಎಂಬ ಅರ್ಥವಲ್ಲ. ಏಕೆಂದರೆ ರಾಮಕೃಷ್ಣ ಹೆಗಡೆ , ಗುಂಡೂರಾವ್ ಮುಖ್ಯಮಂತ್ರಿಯಾದ ತಕ್ಷಣ ಬ್ರಾಹ್ಮಣರ ಸಮಗ್ರ ಅಭಿವೃದ್ಧಿ, ದೇವೇಗೌಡ, ಕುಮಾರಸ್ವಾಮಿ ಆದಾಗ ಒಕ್ಕಲಿಗ ಸಮುದಾಯದ ಸಂಪೂರ್ಣ ಆಗಿದೆ ಎಂದಲ್ಲ.ಮುಖ್ಯಮಂತ್ರಿ ಬದಲಾವಣೆ ಆಗಿದ್ದೇ ಆದಲ್ಲಿ ದಲಿತರಿಗೆ ನೀಡಿ ಸಾಮಾಜಿಕ ನ್ಯಾಯ ಕಾಪಾಡಿ ಎಂದು ವಿನಂತಿಸಿದರು.

ಒಪಿಎಸ್ ಜಾರಿಗೆ ಒತ್ತಾಯ ಎನ್‌ಪಿಎಸ್ ಬಗ್ಗೆ ನೌಕರರ ವರ್ಗದಲ್ಲಿ ಭಯ, ಆತಂಕ ಇದೆ. ಇವರ ಕಟಾವಿನ ಹಣ ಯಾವ ಖಾತೆಗೆ ಹೋಗುತ್ತಿದೆ ಎಂಬುದೇ ಗೊತ್ತಾಗದಷ್ಟು ಗೋಜಲಾಗಿದೆ. ಎನ್‌ಪಿಎಸ್ ಅಡಿಯಲ್ಲಿ ನೌಕರನೊಬ್ಬ ಸತ್ತರೆ ಪೆನ್ಶನ್ ಕ್ಲಿಯರ್ ಆಗಲು ಸಂತ್ರಸ್ತರು ಅಲೆದಾಡುವಂತಾಗಿದೆ. ಆದ್ದರಿಂದ ಕೂಡಲೇ ಮುಖ್ಯಮಂತ್ರಿಗಳು ನೀಡಿದ್ದ ಮಾತಿನಂತೆ ಒಪಿಎಸ್ ಮಾಡಬೇಕು ಎಂದು ಒತ್ತಾಯಿಸಿದರು. ಸರ್ಕಾರ ಈ ಕೂಡಲೇ ಬ್ಯಾಕ್‌ಲಾಗ್ ತುಂಬಬೇಕು.ಇದನ್ನು ಮಾಡಲು ವಿಳಂಭ ಮಾಡುತ್ತಿರುವ ದಲಿತ ವಿರೋಧಿ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕು. ರಾಜ್ಯ ಸರಕಾರ ಕೂಡಲೇ ಖಾಸಗಿ ಕ್ಷೇತ್ರದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಜಾರಿ ಮಾಡಬೇಕು. ಭಾರತ ಭಾರತೀಯರ ಭಾರತ ಆಗಬೇಕಾದರೆ ಸಂವಿಧಾನ ಉಳಿಯಬೇಕು. ಸಂವಿಧಾನಕ್ಕೆ ಕಂಠಕ ಉಂಟು ಮಾಡುವವರ ಸಮುದಾಯ ವಿರುದ್ಧ ಜಾಗೃತರಾಗಬೇಕು ಎಂದರು.ಈ ವೇಳೆ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್, ಗೌರವಾಧ್ಯಕ್ಷ ಬಾಲಕೃಷ್ಣಪ್ಪ, ಉಪಾಧ್ಯಕ್ಷರಾದ ಮೋಹನ್,ಕೆಂಪು ಸಿದ್ದಯ್ಯ, ಶ್ರೀನಿವಾಸ್, ಜಿಲ್ಲಾಧ್ಯಕ್ಷ ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಸಂಜೀವ ರಾಯಪ್ಪ,ಜಿಲ್ಲಾ ಉಪಾಧ್ಯಕ್ಷ ಶ್ರೀ ರಾಮಪ್ಪ, ಜಿಲ್ಲಾ ಕಾರ್ಯದರ್ಶಿ ನಾರಾಯಣಸ್ವಾಮಿ,ಸೇರಿ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳ ಅಧ್ಯಕ್ಷ ಉಪಾಧ್ಯಕ್ಷರು, ಪದಾಧಿಕಾರಿಗಳು ಇದ್ದರು.