ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಅಪಮಾನ ಎಸಗಿದ ರಾಜ್ಯಪಾಲರನ್ನು ವಾಪಾಸ್ ಕರೆಯಿಸಿಕೊಳ್ಳಲು ಆಗ್ರಹಿಸಿ ಶಿವಮೊಗ್ಗ ನಗರ ಯುವಕಾಂಗ್ರೆಸ್ ವತಿಯಿಂದ ಶುಕ್ರವಾರ ಮಹಾನಗರ ಪಾಲಿಕೆ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ನಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಅಪಮಾನ ಎಸಗಿದ ರಾಜ್ಯಪಾಲರನ್ನು ವಾಪಾಸ್ ಕರೆಯಿಸಿಕೊಳ್ಳಲು ಆಗ್ರಹಿಸಿ ಶಿವಮೊಗ್ಗ ನಗರ ಯುವಕಾಂಗ್ರೆಸ್ ವತಿಯಿಂದ ಶುಕ್ರವಾರ ಮಹಾನಗರ ಪಾಲಿಕೆ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ನಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನಾ ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್ ಮಾತನಾಡಿ, ರಾಜ್ಯಪಾಲರು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಆರ್ಎಸ್ಎಸ್ನ ಕೈಗೊಂಬೆಯಾಗಿದ್ದಾರೆ. ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ವಿಧಾನ ಮಂಡಲ ಅಧಿವೇಶನದಲ್ಲಿ ಜಂಟಿ ಸಭೆಯನ್ನುದ್ದೇಶಿಸಿ ಮಾತನಾಡುವುದು ಅವರ ಕರ್ತವ್ಯವಾಗಿದೆ. ಆದರೆ ರಾಜ್ಯಪಾಲರು ಅದನ್ನು ಮರೆತು ಭಾಷಣವನ್ನೇ ಮಾಡದೆ ಹೊರಟು ಹೋಗಿದ್ದಾರೆ. ಇದು ಕನ್ನಡಿಗರಿಗೆ ಮಾಡಿದ ದ್ರೋಹ ಮಾತ್ರವಲ್ಲ, ಸಂವಿಧಾನಕ್ಕೂ ಮಾಡಿದ ದ್ರೋಹವಾಗಿದೆ. ಸರ್ಕಾರಕ್ಕೆ ಅವಮಾನ ಮಾಡಿದ್ದಾರೆ ಎಂದು ದೂರಿದರು.
ರಾಜ್ಯಪಾಲರು ಪಕ್ಷಾತೀತವಾಗಿ ಕೆಲಸ ಮಾಡಬೇಕು. ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆಯಲು ಕಾರಣವಿದೆ. ಮನರೇಗಾ ಯೋಜನೆಯ ಹೆಸರನ್ನು ಬದಲಾಯಿಸಿ, ವಿಬಿ ಜಿ ರಾಮ್-ಜಿ ಎಂಬ ಹೆಸರನ್ನು ಇಟ್ಟಿರುವುದು ಸರಿಯಲ್ಲ, ಗಾಂಧೀಜಿಯವರ ಹೆಸರನ್ನೇ ನಾಶಮಾಡಲು ಸನಾತನ ಧರ್ಮವನ್ನು ಮತ್ತೆ ಮರುಸ್ಥಾಪಿಸಲು ಬಿಜೆಪಿ ಮತ್ತು ಆರ್.ಎಸ್.ಎಸ್. ಇಂತಹ ಬದಲಾವಣೆಗಳನ್ನು ತರುತ್ತದೆ. ಇದನ್ನು ಹೇಳಿದರೆ ಇವರಿಗೆ ಸಿಟ್ಟುಬರುತ್ತದೆ. ಯಾವುದೇ ಕಾರಣಕ್ಕೂ ಗಾಂಧೀಜಿಯ ಹೆಸರನ್ನು ಬಿಟ್ಟು ಬಿಜೆಪಿ ಅಜೆಂಡಾದ ಹೆಸರನ್ನು ಈ ಯೋಜನೆಗೆ ಇಡಬಾರದು. ಕೂಡಲೇ ಮಹಾತ್ಮಗಾಂಧೀಜಿಯ ಹೆಸರನ್ನು ಮರುಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದರು.ಭಾರತದ ಸಂವಿಧಾನದಂತೆ ಯಾವುದೇ ರಾಜ್ಯದ ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯ ಸಚಿವ ಸಂಪುಟ ಸಿದ್ಧಪಡಿಸುವ ಭಾಷಣವನ್ನು ರಾಜ್ಯಪಾಲರು ಮಾಡಬೇಕಾಗುತ್ತದೆ. ಆದರೆ ರಾಜ್ಯಪಾಲರು ನಿಯಮವನ್ನು ಉಲ್ಲಂಘಿಸಿ ಸಂವಿಧಾನಕ್ಕೆ ಅಪಮಾನ ಎಸಗಿದ್ದಾರೆ. ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಆಡಳಿತ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸವನ್ನು ರಾಜ್ಯಪಾಲರು ಮಾಡಿದ್ದಾರೆ ಇದು ಸಂವಿಧಾನಕ್ಕೆ ಮಾರಕವಾಗಿದೆ. ಸದನದ ಗಾಂಭೀರ್ಯಕ್ಕೆ ಅಡ್ಡಿಯಾಗಿದೆ. ಗದ್ದಲಕ್ಕೂ ಕಾರಣವಾಗಿದೆ ಎಂದರು.
ಇಂತಹ ರಾಜ್ಯಪಾಲರು ನಮಗೆ ಬೇಡ. ಕೂಡಲೇ ರಾಷ್ಟ್ರಪತಿಗಳು ಕರ್ನಾಟಕದ ರಾಜ್ಯಪಾಲರನ್ನು ವಾಪಾಸ್ಸು ಕರೆಯಿಸಿಕೊಳ್ಳಬೇಕು. ಇಲ್ಲದಿದ್ದರೆ ‘ರಾಜ್ಯಪಾಲ ಹಠಾವೋ, ಕರ್ನಾಟಕ ಬಚಾವೋ’ ಆಂದೋಲನವನ್ನು ಯುವ ಕಾಂಗ್ರೆಸ್ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಪ್ರಮುಖರಾದ ಮಧುಸೂದನ್, ಇಸ್ಮಾಯಿಲ್ಖಾನ್, ವಿಶ್ವನಾಥ್ನಾಥ್ ಕಾಶಿ, ರಮೇಶ್ ಹೆಗ್ಡೆ, ಎಚ್.ಸಿ. ಯೋಗೀಶ್, ಶಿವಕುಮಾರ್, ಹರ್ಷಿತ್ಗೌಡ, ಚರಣ್ ಜೆ.ಶೆಟ್ಟಿ, ಗಿರೀಶ್, ಮಹಮ್ಮದ್ಗೌಸ್, ಪ್ರವೀಣ್, ಶಶಿಕುಮಾರ್, ಧೀರರಾಜ್ ಹೊನ್ನವಿಲೆ, ಪ್ರವೀಣ್ಕುಮಾರ್ ಮತ್ತಿತರರು ಇದ್ದರು.